विवेचन सारांश
ತ್ರಿವಿಧ ಶ್ರದ್ಧೆಗಳುಳ್ಳ ಮನುಷ್ಯರ ಲಕ್ಷಣಗಳು

ID: 6275
कन्नड़ - ಕನ್ನಡ
ಶನಿವಾರ, 11 ಜನವರಿ 2025
ಅಧ್ಯಾಯ 17: ಶ್ರದ್ಧಾತ್ರಯ ವಿಭಾಗ ಯೋಗ
1/2 (ಶ್ಲೋಕ 1-12)
ವಿವೇಚನಕಾರರು: ಗೀತಾ ವಿಶಾರದ ಶ್ರೀ ಡಾ. ಸಂಜಯ್ ಮಾಲ್ಪಾನಿ ಜಿ


ಇಂದಿನ ವಿವೇಚನಾ ಸತ್ರವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯಾಯಿತು. ನಾವು ಈಗಾಗಲೇ ಸಂಸ್ಕೃತದಲ್ಲಿ ಗೀತೆಯ ಸ್ಪಷ್ಟವಾದ ಉಚ್ಚಾರಣೆಯನ್ನು ಕಲಿಯುತ್ತಾ ಇದ್ದೇವೆ. ಹಾಗೆಯೇ ವ್ಯಾಕರಣದ ಅಭ್ಯಾಸವು ಕೂಡ ಪ್ರಮುಖವಾಗಿದೆ. ವ್ಯಾಕರಣದ ತರಗತಿಗಳ ಮಾಹಿತಿಯನ್ನು ನೀಡಿ ಶ್ರದ್ಧಾತ್ರಯ ವಿಭಾಗಯೋಗದ ಪೂರ್ವಾರ್ಧದ ವಿವೇಚನೆಯನ್ನು ಗುರುವಂದನೆಯೊಂದಿಗೆ ಪ್ರಾರಂಭಿಸಲಾಯಿತು. ಭಗವಂತನಾದ ಶ್ರೀ ಕೃಷ್ಣನು ಅರ್ಜುನನ ರಥವನ್ನು ಮುನ್ನಡೆಸುತ್ತಾ ೧೬ ಅಧ್ಯಾಯ ಮುಗಿಸಿ ೧೭ ರವರೆಗೆ ರಥವನ್ನು ಸೇನಯೋರುಭಯೋರ್ಮಧ್ಯೆ - ಉಭಯ ಪಕ್ಷಗಳ ಮಧ್ಯದಲ್ಲಿ - ನಿಲ್ಲಿಸಿ, ಕೇವಲ ಭೌತಿಕ ಲಗಾಮನ್ನು ಮಾತ್ರ ಹಿಡಿಯದೆ ಅರ್ಜುನನ ಮನಸ್ಸಿನ ಲಗಾಮನ್ನು ಕೂಡ ಹಿಡಿದಿದ್ದನು. ವಾಸ್ತವವಾಗಿ ಗೀತೆಯಲ್ಲಿ ೧೭ ಹಾಗೂ ೧೮ನೇ ಅಧ್ಯಾಯಗಳು ಕಳಶಪ್ರಾಯವಾಗಿವೆ. ಹಾಗೂ ಭಗವದ್ಗೀತೆಯನ್ನು ಹೇಗೆ ಜೀವಿಸಬೇಕು ಎಂಬುದರ ಅರ್ಥ ಇಲ್ಲಿ ಗೊತ್ತಾಗುತ್ತದೆ. ಗೋವಿಂದ ದೇವ ಗಿರೀ ಜೀ ಮಹಾರಾಜರು ಗೀತೆಯನ್ನು  ಕಲಿಯಿರಿ, ಕಲಿಸಿರಿ, ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಹೇಳುತ್ತಾರೆ. ಹಾಗಾದರೆ ಗೀತೆಯನ್ನು ಹೇಗೆ ಅಳವಡಿಸಿಕೊಳ್ಳುವುದು? ಯಾವ ಪರಿವರ್ತನೆಯ ಅವಶ್ಯಕತೆ ಇದೆ? ಎಂದು ಭಗವಂತನು ತಿಳಿಸಿದ್ದಾನೆ. ಜೀವನವು ಜನನ ಮರಣದ ಮಧ್ಯೆ ಓಲಾಡುತ್ತಿರುವಾಗ ಅರ್ಜುನನು ಭಗವಂತನನ್ನು ೧೭ನೇ ಅಧ್ಯಾಯದಲ್ಲಿ ಏನು ಕೇಳುತ್ತಾನೆಂದು ನೋಡೋಣ. 

17.1

ಅರ್ಜುನ ಉವಾಚ
ಯೇ ಶಾಸ್ತ್ರವಿಧಿಮುತ್ಸೃಜ್ಯ, ಯಜಂತೇ ಶ್ರದ್ಧಯಾನ್ವಿತಾಃ |
ತೇಷಾಂ(ನ್) ನಿಷ್ಠಾ ತು ಕಾ ಕೃಷ್ಣ, ಸತ್ತ್ವಮಾಹೋ ರಜಸ್ತಮಃ ।।1।।

ಅರ್ಜುನ ಹೇಳಿದನು - ಹೇ ಶ್ರೀ ಕೃಷ್ಣ ! ಯಾರು ಶಾಸ್ತ್ರವಿಧಿಗಳನ್ನು ಬಿಟ್ಟು ಕೇವಲ ಶ್ರದ್ಧಾಯುಕ್ತರಾಗಿ ದೇವಾದಿಗಳನ್ನು ಆರಾಧಿಸುವರೋ, ಅವರ ಸ್ಥಿತಿಗತಿ ಯಾವ ರೀತಿಯದು ? ಸಾತ್ತ್ವಿಕವೋ ಅಥವಾ ರಾಜಸವೋ ಇಲ್ಲವೇ ತಾಮಸವೋ?

ಹೇ ಕೃಷ್ಣನೇ! ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ಕೂಡಿದವರಾಗಿ ದೇವತೆಗಳ ಪೂಜೆ ಮಾಡುವ ಮನುಷ್ಯರ ಸ್ಥಿತಿಯು ಸಾತ್ತ್ವಿಕವೋ, ರಾಜಸವೋ, ತಾಮಸವೋ ಎಂದು ಅರ್ಜುನ ಪ್ರಶ್ನಿಸುತ್ತಾನೆ.

ಈ ಗುಣ ತ್ರಯ ವಿಭಾಗಯೋಗದಲ್ಲಿ ಭಗವಂತನು ಈ ಮೂರು ಗುಣಗಳ ಬಗ್ಗೆ ವಿವರಿಸಿದ್ದಾನೆ. ಈ ಮೂರು ಗುಣಗಳು ಮಾನವ ಜೀವನಕ್ಕೆ ಅತ್ಯವಶ್ಯಕವಾಗಿವೆ. ಸತ್ತ್ವ, ರಜೋ ಹಾಗೂ ತಮೋ ಗುಣಗಳ ಸಮ್ಮೇಳನ ಅವಶ್ಯಕವಾಗಿವೆ. ಎರಡನೆಯ ಅಧ್ಯಾಯದಲ್ಲಿ ಹೇಳಿದಂತೆ ಸಮತ್ವಂ ಯೋಗ ಉಚ್ಯತೆ - ಸಮತೋಲನ ಅವಶ್ಯಕವಾಗಿದೆ. ಎಲ್ಲಾ ಶಾಸ್ತ್ರಗಳ ಅಧ್ಯಯನ ಅಸಾಧ್ಯ, ಅದಕ್ಕಾಗಿ ಒಂದೇ ಜೀವನ ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಶಾಸ್ತ್ರ ವಿಧಿಗಳು ಗೊತ್ತಿಲ್ಲದೆ ಹೋದರೆ ನಮ್ಮ ಗತಿ ಏನು? ಎಂದು ಅರ್ಜುನ ಕೇಳುತ್ತಾನೆ.  ಉದಾಹರಣೆಗೆ, ರಸ್ತೆಯಲ್ಲಿ ನಾವು ಎಡ ಬದಿಯಿಂದ ಹೋಗಬೇಕು. ಇದು ನಿಯಮ, ಕೆಲವೊಮ್ಮೆ ನಾವು ಬಲಗಡೆಯಿಂದಲೂ ಕೂಡ ಹೋಗುತ್ತೇವೆ. ಇದರ ಅರ್ಥ ನಾವು ಸಾಂವಿಧಾನಿಕ ನಿಯಮವನ್ನು ಉಲ್ಲಂಘಿಸಿದ್ದೇವೆ ಎಂದರ್ಥಲ್ಲ. ಕೆಲವೊಮ್ಮೆ ಅವಶ್ಯಕತೆಗಳಿಗನುಸಾರವಾಗಿ ಎಡ ಹಾಗೂ ಬಲ ಭಾಗದಲ್ಲಿ ಸಂಚರಿಸಬೇಕಾಗುತ್ತದೆ. ಹಾಗೆಯೇ ಶಾಸ್ತ್ರ ವಿಧಿಗಳನ್ನು ಬಿಟ್ಟು ನಡೆಯುವ ಶ್ರದ್ಧೆಯನ್ನು ಏನೆನ್ನಬೇಕು? ಶಾಸ್ತ್ರ ವಿಧಿಗಳನ್ನು ತಿಳಿದುಕೊಂಡೇ, ಶ್ರದ್ಧೆಯನ್ನು ಪಾಲಿಸಬೇಕೆಂದೇನಿಲ್ಲ. ಶಾಸ್ತ್ರ ವಿಧಿಗಳನ್ನು ತಿಳಿಯದೆ ಶ್ರದ್ಧೆಯಿಂದ ಇರಬಹುದು. ತತ್ತ್ವಜ್ಞಾನದ ಅರಿವು ಬುದ್ಧನಿಂದಲೂ, ಮಹಾವೀರನಿಂದಲೂ ಉಪದೇಶಿಸಲ್ಪಟ್ಟಿದೆ. ಸನಾತನ ಹಿಂದೂ ಧರ್ಮವು ನಾಲ್ಕು ಆಶ್ರಮಗಳ ಮಹತ್ವ ಸಾರಿದೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸಂನ್ಯಾಸ. ಈ ಆಶ್ರಮಗಳಲ್ಲಿ ಕೇವಲ ಸಂನ್ಯಾಸ ಆಶ್ರಮವಷ್ಟೇ ಶ್ರೇಷ್ಠವೆನ್ನಲಾಗದು. ೨೫ ವರ್ಷಗಳವರೆಗೆ ಬ್ರಹ್ಮಚರ್ಯ, ಮುಂದಿನ ೨೫ ವರ್ಷ ಗ್ರಹಸ್ಥ, ನಂತರ ೨೫ ವರ್ಷ ವಾನಪ್ರಸ್ಥಾಶ್ರಮ ಹಾಗೂ ಮುಂದೆ ಸಂನ್ಯಾಸಾಶ್ರಮ ಎಂದು ಹೇಳಿದ್ದಾರೆ. ಹೀಗೆ ವೃತ್ತಿಯನ್ನು ಬದಲಿಸಬೇಕಾಗುತ್ತದೆ, ಬರೀ ವಸ್ತ್ರವನ್ನಲ್ಲ. ವಾನಪ್ರಸ್ಥಾಶ್ರಮದಲ್ಲಿ ಮುಂದಿನ ಪೀಳಿಗೆಗೆ ಕಾರ್ಯಭಾರವನ್ನು ಹೊರಿಸುತ್ತಾ ಅವಶ್ಯಕತೆ ಇರುವ ಸಮಯದಲ್ಲಿ ಅನುಗುಣವಾಗಿ ಮಾರ್ಗದರ್ಶನ ಮಾಡುತ್ತಾ ಸಾಗಬೇಕು ಮತ್ತು ಸಂನ್ಯಾಸಾಶ್ರಮದಲ್ಲಿ ಗೃಹದಿಂದ ಹೊರಬಂದು ಮಠಮಾನ್ಯಗಳಿಗೆ ಹೋಗಿ ಸಮಾಜದ ಸೇವೆಯನ್ನು ಮಾಡಬೇಕು. ಹೀಗೆ ಸನಾತನ ಧರ್ಮವು ಬಿಟ್ಟು ಹೋಗಿ ಎಂದೇನೂ ಹೇಳುವುದಿಲ್ಲ. ಹಾಗೆಯೇ ಭಗವಂತನು ಅರ್ಜುನನಿಗೆ ಬಿಟ್ಟು ಹೋಗಲು ಬಿಡಲಿಲ್ಲ. ಪುರುಷಾರ್ಥದ ಫಲಕ್ಕಾಗಿ ಯುದ್ಧ ಮಾಡಬೇಕು ಎಂದು ಹೇಳಿದ್ದಾನೆ. ನೀನು ನಿಮಿತ್ತ ಮಾತ್ರ ಅಷ್ಟೇ ಎಂದಿದ್ದಾನೆ. ಹೀಗೆ ಸನಾತನ ಧರ್ಮವು ಮಲಗಿದ್ದವರನ್ನು ಎಬ್ಬಿಸಿ ಕಾರ್ಯನಿರತರಾಗುವಂತೆ ಮಾಡುತ್ತದೆ. ಈ ಕಾರ್ಯವನ್ನು ಭಗವದ್ಗೀತೆ ಮಾಡುತ್ತಾ ಇದೆ.

17.2

ಶ್ರೀಭಗವಾನುವಾಚ
ತ್ರಿವಿಧಾ ಭವತಿ ಶ್ರದ್ಧಾ, ದೇಹಿನಾಂ(ಮ್) ಸಾ ಸ್ವಭಾವಜಾ |
ಸಾತ್ತ್ವಿಕೀ ರಾಜಸೀ ಚೈವ, ತಾಮಸೀ ಚೇತಿ ತಾಂ(ಮ್) ಶೃಣು ।।2।।

ಶ್ರೀ ಕೃಷ್ಣ ಪರಮಾತ್ಮ ಹೇಳಿದನು - ಮಾನವರ ಸ್ವಭಾವದಿಂದಲೇ ಉಂಟಾದ ಶಾಸ್ತ್ರೀಯ ಸಂಸ್ಕಾರವಿಲ್ಲದ ಆ ಶ್ರದ್ಧೆಯು ಸಾತ್ತ್ವಿಕ, ರಾಜಸ ಮತ್ತು ತಾಮಸ ಎಂಬುದಾಗಿ ಮೂರು ವಿಧವಾಗಿವೆ. ಅದನ್ನು ಹೇಳುತ್ತೇನೆ ಕೇಳು.

ಸ್ವಭಾವಜ - ಅನೇಕ ಜನ್ಮಗಳಲ್ಲಿ ಮಾಡಿದ ಕರ್ಮಗಳ ಸಂಚಿತ ಸಂಸ್ಕಾರಗಳಿಂದ ಉಂಟಾದ ಶ್ರದ್ಧೆಯನ್ನು ಸ್ವಭಾವಜ ಎಂದು ಹೇಳುತ್ತಾರೆ. ಅವು ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದಾಗಿವೆ.
 
ಕೋಟಾದಲ್ಲಿ ನಡೆದ ಒಂದು ಶಿಬಿರದಲ್ಲಿ ಒಬ್ಬ ವ್ಯಕ್ತಿ ಒಂದು ಪ್ರಶ್ನೆಯನ್ನು ಕೇಳಿದರು. ನಾವು ೧೨ನೇ ಜನವರಿಗೆ ಸ್ವಾಮಿ ವಿವೇಕಾನಂದರ ಜಯಂತಿಯ ಉತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ಅವರ ಜೀವನ ಚರಿತ್ರೆಯನ್ನು ಓದಿದಾಗ ಗೊತ್ತಾಯಿತು ಅವರು ಮೀನುಗಳನ್ನು ತಿನ್ನುತ್ತಿದ್ದರು ಎಂದು. ಅಂದರೆ ಅಲ್ಲಿ ಹಿಂಸೆ ಆಯಿತು ಎಂದರ್ಥ. ಸ್ವಾಮಿ ವಿವೇಕಾನಂದರು ಮೀನುಗಳನ್ನು ಏಕೆ ತಿನ್ನುತ್ತಿದ್ದರು ಮತ್ತು ಮಾಂಸಾಹಾರದ ಬಗ್ಗೆ ಏನು ಹೇಳಿದ್ದಾರೆ ಎಂಬುದು ಇನ್ನೊಂದು ವಿಷಯ. ಆದರೆ ಅವರಿಗೆ ಮೀನು ಸೇವಿಸುವ ರೂಢಿ ಇತ್ತು. ಏಕೆಂದರೆ ಕಾಯಸ್ಥ ಬಂಗಾಳಿ ಪರಿವಾರದಲ್ಲಿ ಅವರ ಜನ್ಮವಾಯಿತು. ಬಂಗಾಳದಲ್ಲಿ ಮೀನು ಉಪವಾಸವನ್ನು ಅಂತ್ಯಗೊಳಿಸುವ ಆಹಾರವಾಗಿದೆ. ಹೇಗೆ ನಾವು ಪೂರ್ಣಾನ್ನವನ್ನು ತಿನ್ನುತ್ತೇವೆಯೋ ಹಾಗೆ ಪ್ರತಿಯೊಬ್ಬರೂ ಒಂದು ಪರಿವಾರದ ಒಂದು ಸಂಸ್ಕಾರ, ರೂಢಿಯ ಸಹಾಯದಿಂದ ಬೆಳೆಯುತ್ತಾರೆ. ಬಾಲ್ಯದಲ್ಲಿ ಪರಿವಾರದವರು ಹೇಗೆ ಆಹಾರದ ಸಂಸ್ಕಾರ ಮಾಡಿಸುತ್ತಾರೋ ಹಾಗೆಯೇ ಮುನ್ನಡೆಯುತ್ತದೆ. ಆಗ ಒಳ್ಳೆಯ ಹಾಗೂ ಕೆಟ್ಟದರ ಪರಿವೆಯು ಇರುವುದಿಲ್ಲ. ಆದರೆ ವಿವೇಕಾನಂದರು ಬಾಲ್ಯದಲ್ಲಿ ಒಂದು ವೇಳೆ ಮೀನನ್ನು ತಿಂದಿದ್ದರೆ ಅದನ್ನು ಅವರು ಯಾವಾಗಲೂ ಸಮರ್ಥಿಸಿಕೊಂಡಿಲ್ಲ. ಕ್ಷತ್ರಿಯನು ಅವನ ಸ್ವಭಾವ, ಧರ್ಮದ ಅನುಗುಣವಾಗಿ ಮಾಂಸಾಹಾರ ಸೇವಿಸಬಹುದು. ಯಾಕೆಂದರೆ ಕ್ಷತ್ರಿಯನು ಯಾವಾಗಲೂ ಯುದ್ಧ ಸನ್ನದ್ಧನಾಗಿರಬೇಕು. ಶಾರೀರಿಕ ಕಷ್ಟವನ್ನು ಯಾರು ಪಡುತ್ತಾರೋ ಆಂಥವರು, ವಿಶೇಷವಾಗಿ ಕ್ಷತ್ರಿಯರು, ಕಾಲಕಾಲಕ್ಕೆ ತಕ್ಕಂತೆ ಹಿಂಸೆಯನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ ದೇಶವನ್ನು ಕಾಯುವ ಸೈನಿಕನು ಹಿಂಸೆಯ ಬಗ್ಗೆ ವಿಚಾರ ಮಾಡಿದರೆ ಯುದ್ಧ ಮಾಡಲಾಗದು. ಕ್ಷತ್ರಿಯ ತಂದೆಯಿಂದ ಮಗನಿಗೆ ರಕ್ತದ ಮುಖಾಂತರ ಕ್ಷತ್ರಿಯ ಸ್ವಭಾವ ಹರಿಯುತ್ತದೆ. ಹಾಗೆಯೇ ವೈಶ್ಯ ತಂದೆಯಿಂದ ಮಕ್ಕಳಿಗೆ ವ್ಯಾಪಾರದ ಬುದ್ಧಿ ತನ್ನಷ್ಟಕ್ಕೆ ತಾನೇ ಬರುತ್ತದೆ. ಬ್ರಾಹ್ಮಣ ತಂದೆಯಿಂದ ಬ್ರಾಹ್ಮಣತ್ವ ಬರುತ್ತದೆ. ಸಮಾಜ ಸೇವ ಮಾಡುವ ಮನೆಯಿಂದ ಬಂದ ಮಗುವಿಗೆ ಸಹಜವಾಗಿ ಸೇವಾ ಮನೋಭಾವ ಬರುತ್ತದೆ. ಒಂದು ವೇಳೆ ಕ್ಷತ್ರಿಯನು ಮಾಂಸಹಾರಿಯಾದರೂ ಕೂಡ ಅದು ಅನುಚಿತವೆಂದು ಹೇಳಲಾಗದು. ಇದೇ ರೀತಿಯಾಗಿ ಭಗವಂತನು ಅರ್ಜುನನಿಗೆ ಅವನ ಕ್ಷತ್ರಿಯ ಧರ್ಮವನ್ನು ಬೋಧಿಸಿ, ಬಿಲ್ಲು ಬಾಣಗಳಿಂದ ಯುದ್ಧಕ್ಕೆ ಸನ್ನದ್ಧನಾಗುವಂತೆ ಪ್ರೇರೇಪಿಸುತ್ತಾನೆ. ಈ ಯುದ್ಧವು ರೂಪದ್ದಲ್ಲ. ಸ್ವಭಾವಕ್ಕೆ ಅನುಗುಣವಾಗಿ ಬಂದಿರುವುದು. ನಮ್ಮ ಜನ್ಮಜನ್ಮಾಂತರದ ಸಂಸ್ಕಾರವು ಪುನರಾವರ್ತನೆಯಾಗುತ್ತಿರುತ್ತದೆ . ಇದೇ ಕಾರಣಕ್ಕೆ ಒಂದೇ ಮನೆಯ ಎರಡು ಮಕ್ಕಳು ಒಂದೇ ತರಹ ಇರುವುದಿಲ್ಲ.

17.3

ಸತ್ತ್ವಾನುರೂಪಾ ಸರ್ವಸ್ಯ, ಶ್ರದ್ಧಾ ಭವತಿ ಭಾರತ |
ಶ್ರದ್ಧಾಮಯೋಽಯಂ(ಮ್) ಪುರುಷೋ, ಯೋ ಯಚ್ಛ್ರದ್ಧಃ(ಸ್) ಸ ಏವ ಸಃ ।।3।।

ಎಲೈ ಅರ್ಜುನ ! ಎಲ್ಲರ ಶ್ರದ್ಧೆಯು ಅವರವರ ಅಂತಃಕರಣಕ್ಕೆ ಅನುಗುಣವಾಗಿ ಉಂಟಾಗುತ್ತದೆ. ಈ ಮನುಷ್ಯ ಶ್ರದ್ಧಾವಂತನು, ಯಾರು ಎಂತಹ ಶ್ರದ್ಧೆಯುಳ್ಳವನಾಗಿರುತ್ತಾನೆಯೋ ಅವನು ಸ್ವತಃ ಅದರಂತೆ ಇರುತ್ತಾನೆ. ಅರ್ಥಾತ್ ಯಾರ ಶ್ರದ್ಧೆ ಹೇಗಿರುತ್ತದೆಯೋ ಹಾಗೆಯೇ ಅವರ ಸ್ವರೂಪವೂ ಇರುತ್ತದೆ.

ಅರ್ಜುನನೇ, ಎಲ್ಲರ ಶ್ರದ್ಧೆಯು ಅವರವರ ಅಂತಃಕರಣಕ್ಕೆ ಅನುಗುಣವಾಗಿರುತ್ತದೆ. ಯಾವ ಮನುಷ್ಯನು ಎಂತಹ ಶ್ರದ್ಧೆವುಳ್ಳವನೋ ಅವನು ಅದೇ ಆಗಿರುತ್ತಾನೆ. ಅಂದರೆ ಆ ಶ್ರದ್ಧೆಗಳಿಗನುಗುಣವಾಗಿಯೇ ಅವನ ಸ್ವರೂಪ ಇರುತ್ತದೆ. ಅವನು ಸಾತ್ತ್ವಿಕನೋ, ರಾಜಸಿಯೋ ಅಥವಾ ತಾಮಸಿಯೋ ಇರುತ್ತಾನೆ. ಮನುಷ್ಯನ ಸ್ವಭಾವಕ್ಕೆ ತಕ್ಕಂತೆ ಶ್ರದ್ಧೆ ಇರುತ್ತದೆ ಮತ್ತು ಶ್ರದ್ಧೆಗೆ ತಕ್ಕಂತೆ ಸ್ವಭಾವದ ಅರಿವು ಉಂಟಾಗುತ್ತದೆ.

17.4

ಯಜಂತೇ ಸಾತ್ತ್ವಿಕಾ ದೇವಾನ್, ಯಕ್ಷರಕ್ಷಾಂಸಿ ರಾಜಸಾಃ |
ಪ್ರೇತಾನ್ಭೂತಗಣಾಂಶ್ಚಾನ್ಯೇ, ಯಜಂತೇ ತಾಮಸಾ ಜನಾಃ ।।4।।

ಸಾತ್ತ್ವಿಕರು ದೇವತೆಗಳನ್ನೂ, ರಾಜಸ ಪುರುಷರು ಯಕ್ಷ-ರಾಕ್ಷಸರನ್ನೂ ಮತ್ತು ಇನ್ನುಳಿದ ತಾಮಸ ಮನುಷ್ಯರು ಪ್ರೇತ-ಭೂತ ಗಣಗಳನ್ನೂ ಪೂಜಿಸುತ್ತಾರೆ.

ಸಾತ್ತ್ವಿಕೀ ಜನರು ದೇವತೆಗಳನ್ನು ಪೂಜಿಸುತ್ತಾರೆ, ರಾಜಸೀ ಜನರು ಯಕ್ಷ ರಾಕ್ಷಸರನ್ನು, ಹಾಗೆಯೇ ತಾಮಸ ಪ್ರವೃತ್ತಿಯ ಜನರು ಪ್ರೇತ ಮತ್ತು ಭೂತಗಳ ಗಣಗಳನ್ನು ಪೂಜಿಸುತ್ತಾರೆ. ಕುಬೇರನ ಪೂಜೆಯನ್ನು ದೀಪಾವಳಿಯಲ್ಲಿ ಮಾತ್ರ ಆಚರಿಸಲಾಗುತ್ತದೆ. ಮಾನವ ಜನ್ಮದಲ್ಲಿ ಒಂದು ವೇಳೆ ಹಿಂದಿನ ಜನ್ಮದ ರಾಜಸ ತಾಮಸ ಪ್ರವೃತ್ತಿಯನ್ನು ಹೊಂದಿದ್ದರೆ ಅದನ್ನು ಈ ಜನ್ಮದಲ್ಲಿ ಬದಲಾಯಿಸಬಹುದಾಗಿದೆ. ಆದ್ದರಿಂದ ಕ್ಷತ್ರಿಯ ಧರ್ಮದಲ್ಲಿ ಹುಟ್ಟಿದ್ದರೂ ವರ್ಧಮಾನ ಮಹಾವೀರ ಮಹಾವೀರನಾಗುತ್ತಾನೆ, ಗೌತಮ ಬುದ್ಧನು ಬುದ್ಧನಾಗುತ್ತಾನೆ. ಆಂತರಿಕ ಗುಣವನ್ನು ಬದಲಿಸುವ ಸಾಮರ್ಥ್ಯ ಕೇವಲ ಮಾನವ ಜನ್ಮಕ್ಕಿದೆ. ಆದ್ದರಿಂದ ಮಾನವ ಜನ್ಮ ಬಹುದೊಡ್ಡದು. ಒಳ್ಳೆಯ ಶ್ರದ್ಧೆಯೆಡೆಗೆ ಹೋಗಬೇಕು 
 
ಭಗವದ್ಗೀತೆಯ ಮುಖಾಂತರ ಯೋಗಶಾಸ್ತ್ರವನ್ನು ಅರಿಯುವುದು ಅವಶ್ಯಕವಾಗಿದೆ. ಸಾತ್ತ್ವಿಕೀ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬ ಅಭ್ಯಾಸದ ಅವಶ್ಯಕತೆ ಇದೆ. ಹಾಗೆಯೇ ಶಾಸ್ತ್ರದ ಅಭ್ಯಾಸವು ಮಹತ್ವದ್ದಾಗಿದೆ. ಉದಾಹರಣೆಗೆ ಒಬ್ಬ ವ್ಯಾಪಾರಿಯು ವ್ಯಾಪಾರವನ್ನು ಪ್ರಾರಂಭಿಸಿದರೆ ವ್ಯಾಪಾರಕ್ಕೆ ತಕ್ಕ ಸಾಮಾನು-ಸರಂಜಾಮು, ಆದಾಯ ತೆರಿಗೆ, ವ್ಯಯ ಮುಂತಾದವುಗಳ ಮಾಹಿತಿ ತಿಳಿಯುವುದು ಅವಶ್ಯಕವಾಗಿದೆ. ವಿಶೇಷವಾದ ಮಹತ್ತರವಾದ ಕಾಯಿದೆ ಕಾನೂನುಗಳನ್ನು ವಕೀಲರ ಮುಖಾಂತರ ಪಡೆದುಕೊಳ್ಳಬಹುದು. ಅಂದರೆ  ಯಾವುದೇ ಕಾರ್ಯವನ್ನು ಮಾಡಬೇಕಾದರೆ ಪೂರ್ವಜ್ಞಾನ ಬೇಕೇ ಬೇಕು.

17.5

ಅಶಾಸ್ತ್ರವಿಹಿತಂ(ಙ್) ಘೋರಂ(ನ್), ತಪ್ಯಂತೇ ಯೇ ತಪೋ ಜನಾಃ |
ದಂಭಾಹಂಕಾರಸಂಯುಕ್ತಾಃ(ಖ್), ಕಾಮರಾಗಬಲಾನ್ವಿತಾಃ ।।5।।

ಯಾವ ಮನುಷ್ಯರು, ಶಾಸ್ತ್ರೋಕ್ತ ವಿಧಿಗಳನ್ನು ಬಿಟ್ಟು ಮನಸ್ಸಿಗೆ ತೋಚಿದಂತೆ ಘೋರವಾದ ತಪಸ್ಸನ್ನು ಆಚರಿಸುತ್ತಾರೋ, ದಂಭ-ಅಹಂಕಾರ ಇತ್ಯಾದಿಗಳಿಂದ ಕೂಡಿದವರಾಗಿ ಕಾಮ, ಆಸಕ್ತಿ ಮತ್ತು ಬಲದ ಅಭಿಮಾನವುಳ್ಳವರೋ -.

ಶಾಸ್ತ್ರ ವಿಧಿಯನ್ನು ಬಿಟ್ಟು ಕೇವಲ ಮನೋ ಕಲ್ಪಿತವಾದ ಘೋರ ತಪಸ್ಸನ್ನು ಆಚರಿಸುವ ಮನುಷ್ಯರು ದಂಭ ದರ್ಪ ಅಹಂಕಾರ ಕಾಮನೆ ಮುಂತಾದವುಗಳಿಂದ ಕೂಡಿದವರಾಗಿ ಬಲದ ಅಭಿಮಾನದಿಂದ ಬೀಗುತ್ತಾರೆ.

ಉದಾಹರಣೆಗೆ, ಒಬ್ಬ ತಾಮಸೀ ವ್ಯಕ್ತಿಯಾದ ಹಿರಣ್ಯಕಶಿಪು ರಾಜ ತಪಸ್ಸನ್ನು ಆಚರಿಸಿ ಪಡೆದ ಶಕ್ತಿಯಿಂದ ಅವನಲ್ಲಿ ಬರೀ ದಂಭ, ದರ್ಪವೇ ಬೆಳೆಯುತ್ತಾ ಹೋಯಿತು. ರಾವಣನಲ್ಲಿಯೂ ಹಾಗೆಯೇ ಕಾಮನೆ, ಕ್ರೋಧ ಬೆಳೆಯುತ್ತಲೇ ಹೋಯಿತು. ಅದು ಸೀತೆಯ ಅಪಹರಣದವರೆಗೂ ಹೋಯಿತು. ಹಿರಣ್ಯಕಶಿಪು ತನ್ನ ಶಕ್ತಿಯನ್ನೆಲ್ಲ ಪ್ರಹ್ಲಾದನ ಮೇಲೆ ಪ್ರಯೋಗ ಮಾಡಿದನು. ಆದರೆ ಭಗವಂತನ ಶ್ರದ್ಧೆಯು ಪ್ರಹ್ಲಾದನನ್ನು ಕಾಪಾಡಿತು. ಭಗವಂತನು ಕಂಬದಿಂದ ನರಸಿಂಹ ರೂಪದಲ್ಲಿ ಪ್ರಕಟಗೊಂಡನ ಹಿರಣ್ಯಕಶಿಪುವನ್ನು ಸಂಹರಿಸಿದನು. ಪೂಜೆಗಾಗಿ ಮಂಡೋದರಿಯು ಪುಷ್ಪವನ್ನು ಇಡುವುದನ್ನು ಮರೆತಿದ್ದಳು. ಆದುದರಿಂದ ರಾವಣ ತನ್ನ ಶಿರವನ್ನೇ ಕಮಲದ ರೂಪದಲ್ಲಿ ಅರ್ಪಿಸಿದ್ದನು. ಭಗವಂತನು ಶಿವನ ರೂಪದಲ್ಲಿ ಪ್ರಕಟಗೊಂಡು ರಾವಣನಿಗೆ ಆಶೀರ್ವದಿಸಿದನು. ರಾವಣನ ಮೂಲ ರೂಪ ತಾಮಸವಾಗಿದ್ದುದರಿಂದ ಆಶೀರ್ವಚನದ ಶಕ್ತಿಯಿಂದ ದಂಭ, ದರ್ಪ, ಅಹಂಕಾರ ಹೆಚ್ಚಾಗಿತ್ತು.

17.6

ಕರ್ಶಯಂತಃ(ಶ್) ಶರೀರಸ್ಥಂ(ಮ್), ಭೂತಗ್ರಾಮಮಚೇತಸಃ |
ಮಾಂ(ಞ್) ಚೈವಾಂತಃ(ಶ್) ಶರೀರಸ್ಥಂ(ನ್), ತಾನ್ವಿದ್ಧ್ಯಾಸುರನಿಶ್ಚಯಾನ್ ।।6।।

ಶಾಸ್ತ್ರವಿರುದ್ಧವಾದ ಉಪವಾಸವಾದಿ ಘೋರ ಆಚರಣೆ ಮೂಲಕ ಶರೀರವನ್ನು ಒಣಗಿಸುವುದು ಮತ್ತು ಭಗವಂತನ ಅಂಶರೂಪಿಯಾದ ಜೀವಾತ್ಮನಿಗೆ ಕಷ್ಟ ಕೊಡುವುದು-ಜೀವ ಸಮುದಾಯವನ್ನೂ ಮತ್ತು ಅಂತರ್ಯಾಮಿ ಪರಮೇಶ್ವರನನ್ನು ಕೃಶಗೊಳಿಸುವುದು. ಶರೀರ ರೂಪದಿಂದ ಜೀವ ಸಮುದಾಯ ಮತ್ತು ಅಂತಃಕರಣದಲ್ಲಿರುವ ಅಂತರ್ಯಾಮಿಯಾದ ನನ್ನನ್ನೂ ಸಹ ದುರ್ಬಲಗೊಳಿಸುವರೋ ಆ ಅಜ್ಞಾನಿಗಳನ್ನು ಆಸುರೀ ಸ್ವಭಾವದವರೆಂದು ತಿಳಿ.

ಶರೀರವನ್ನು ಕೃಶಮಾಡಿಕೊಳ್ಳಲೆಂದೇ ಉಪವಾಸವಿರುವುದು ಭಗವಂತನನ್ನೇ ಉಪವಾಸವಿರಿಸಿದಂತೆ, ಏಕೆಂದರೆ ದೇಹದೊಳಗೆ ಭಗವಂತನಿದ್ದಾನೆ. ಹಾಗಾದರೆ ನಾವು ಎಂತಹಾ ಆಹಾರ ತಿನ್ನಬೇಕು ಎಂಬುದನ್ನು ಶ್ರೀ ಕೃಷ್ಣ ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ.

17.7

ಆಹಾರಸ್ತ್ವಪಿ ಸರ್ವಸ್ಯ, ತ್ರಿವಿಧೋ ಭವತಿ ಪ್ರಿಯಃ |
ಯಜ್ಞಸ್ತಪಸ್ತಥಾ ದಾನಂ(ನ್), ತೇಷಾಂ(ಮ್) ಭೇದಮಿಮಂ(ಮ್) ಶೃಣು ।।7।।

ಭೋಜನವೂ ಸಹ ಎಲ್ಲರಿಗೂ ಅವರವರ ಪ್ರಕೃತಿಗೆ ಅನುಗುಣವಾಗಿ ಮೂರು ವಿಧದಲ್ಲಿ ಪ್ರಿಯವಾಗುತ್ತದೆ. ಅದರಂತೆಯೇ ಯಜ್ಞ, ತಪಸ್ಸು ಮತ್ತು ದಾನವೂ ಸಹ ಮೂರು ವಿಧ. ಅವುಗಳ ಈ ಬೇರೆ ಬೇರೆ ಭೇದಗಳನ್ನು ಕೇಳು.

ಮನುಷ್ಯನು ಇಷ್ಟಪಡುವ ಆಹಾರಗಳಲ್ಲೂ ಕೂಡಾ ಪ್ರಕೃತಿಯ ಗುಣತ್ರಯಗಳಿಗನುಗುಣವಾಗಿ ಮೂರು ವಿಧಗಳಿವೆ. ಯಜ್ಞ, ತಪಸ್ಸು, ದಾನಗಳಲ್ಲೂ ಕೂಡಾ ಇದು ಸತ್ಯ.

ಈಗ ಆಹಾರಗಳ ಭೇದವನ್ನು ನೀನು ಕೇಳು ಎಂದು ಭಗವಂತ ಹೇಳುತ್ತಾನೆ. ಶಾಸ್ತ್ರೀಯವಾಗಿ ಆಚರಿಸುವ ಯಜ್ಞ, ತಪಸ್ಸು, ದಾನಗಳಲ್ಲಿಯೂ ಅವುಗಳ ಗುಣಗಳಿಗನುಸಾರವಾಗಿ ಭೇದಗಳನ್ನು ಹೇಳಲಾಗಿದೆ. ಸಾತ್ತ್ವಿಕ, ರಾಜಸ ಮತ್ತು ತಾಮಸ ಆಹಾರ ಸೇವನೆಯಿಂದ ಆಗುವ ಪರಿಣಾಮಗಳನ್ನು ಬಹಳ ಸುಂದರ ಮಾತುಗಳಿಂದ ಹೇಳಿದ್ದಾನೆ. ಮೊದಲಿಗೆ ಸಾತ್ತ್ವಿಕ ಆಹಾರದ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ.

17.8

ಆಯುಃ(ಸ್)ಸತ್ತ್ವಬಲಾರೋಗ್ಯ,ಸುಖಪ್ರೀತಿವಿವರ್ಧನಾಃ |
ರಸ್ಯಾಃ(ಸ್) ಸ್ನಿಗ್ಧಾಃ(ಸ್) ಸ್ಥಿರಾ ಹೃದ್ಯಾ, ಆಹಾರಾಃ(ಸ್) ಸಾತ್ತ್ವಿಕಪ್ರಿಯಾಃ ।।8।।

ಆಯುಸ್ಸು, ಬುದ್ಧಿ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ವೃದ್ಧಿಗೊಳಿಸುವಂತಹ ರಸಯುಕ್ತವಾಗಿ ತುಪ್ಪದಿಂದ ತಯಾರಾದ ಸ್ಥಿರವಾಗಿರುವಂತಹ ಮತ್ತು ಸ್ವಾಭಾವಿಕವಾಗಿಯೇ ಮನಸ್ಸಿಗೆ ಪ್ರಿಯವಾದ ಆಹಾರಗಳು ಅರ್ಥಾತ್ ಭೋಜನದ ಪದಾರ್ಥಗಳು ಸಾತ್ತ್ವಿಕ ಪುರುಷರಿಗೆ ಪ್ರಿಯವಾಗುತ್ತವೆ

ಆಯುಷ್ಯ, ಸತ್ತ್ವಗುಣ, ಶಕ್ತಿ, ಆರೋಗ್ಯ, ಸುಖ, ಪ್ರೀತಿಯನ್ನು ಹೆಚ್ಚಿಸುವ, ರಸಯುಕ್ತವಾದ, ಜಿಡ್ಡಿನಿಂದ ಕೂಡಿದ, ಬಹಳ ಹೊತ್ತು ಶರೀರದಲ್ಲಿ ಉಳಿಯುವ, ಹೃದಯಕ್ಕೆ ಪ್ರಿಯವಾಗಿರುವ ಆಹಾರಗಳು ಸಾತ್ತ್ವಿಕ ಗುಣದವರಿಗೆ ಪ್ರಿಯವೆನಿಸುತ್ತವೆ. ಸಾತ್ತ್ವಿಕ ಆಹಾರ ಆಯುಷ್ಯವನ್ನು ಹೆಚ್ಚಿಸುತ್ತದೆ. ಮನದೊಳಗೆ ಸಾತ್ತ್ವಿಕ ಗುಣದ ವರ್ಧನೆಯಾಗುತ್ತದೆ. ಆರೋಗ್ಯ ತನ್ಮೂಲಕ ಶಕ್ತಿ ಹೆಚ್ಚುತ್ತದೆ. ಆದರೆ ಸುಖ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದರೆ ಹೇಗೆ? 'ಜೈಸಾ ಭೋಜನ್ ವೈಸಾ ಮನ್' ನಾವು ಏನು ತಿನ್ನುತ್ತೇವೋ ಹಾಗೆ ನಮ್ಮ ಆಲೋಚನೆಗಳು, ಕ್ರಿಯೆಗಳು ಇರುತ್ತವೆ. ನಾವು ಇನ್ನೊಬ್ಬರನ್ನು ಪ್ರೀತಿಸುವುದು ಅಥವಾ ದ್ವೇಷಿಸುವುದು ಇದೆಲ್ಲವೂ ನಾವು ತಿನ್ನುವ ಆಹಾರದ ಮೇಲೆ ತುಂಬಾ ಅವಲಂಬಿತವಾಗಿದೆ. ರಸಯುಕ್ತವಾದ, ಜಿಡ್ಡಿನಿಂದ  ಕೂಡಿದ, ಹೃದಯಕ್ಕೆ ಬಲಕೊಡುವ ಆಹಾರಗಳು ದೇಹದಲ್ಲಿ ಸಾತ್ತ್ವಿಕತೆಯನ್ನು ಹೆಚ್ಚಿಸುತ್ತವೆ.   

ಮಹಾರಾಷ್ಟ್ರದ ಜನರ ಪ್ರಿಯ ತಿಂಡಿಯೆಂದರೆ ಮಿಸಳ್. ತುಂಬಾ ಖಾರವಾದ ಆಹಾರ. ಇದನ್ನು ತಿನ್ನುವವರು, ತಾವ ಮಹಾರಾಷ್ಟ್ರದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ, ಸಹ್ಯಾದ್ರಿಯಂತೆ ಗಟ್ಟಿಯಾದ ಮನಸ್ಸಿನವರು. ಶಿವಾಜಿಯಂತಹ ರಾಷ್ಟ್ರ ಭಕ್ತನನ್ನು ಹುಟ್ಟಿಸಿದ ನಾಡಲ್ಲಿ ರೋಷದಿಂದ ಕೂಡಿದವರು ಇರುವರು ಎನ್ನಬಹುದೇನೋ? ಈ ಮಿಸಲ್ ಎಷ್ಟು ಖಾರವೆಂದರೆ ಒಂದು ಹಾಸ್ಯ ಪ್ರಸಂಗವನ್ನೂ ಇಲ್ಲಿ ಉದಾಹರಿಸಲಾಯಿತು. ಒಬ್ಬ ಪರದೇಶದವನು ಇಲ್ಲಿ ಬಂದಾಗ ಈ ತಿಂಡಿ ತಿಂದು ಹೊಟ್ಟೆ ಉರಿಯಿಂದ ಹೊಟೇಲ್ ನವರೊಂದಿಗೆ ಜಗಳ ತೆಗೆದಾಗ ಅಲ್ಲಿಯ ಸಿಬ್ಬಂದಿ ನಾವು ಟಾಯ್ಲೆಟ್ನಲ್ಲಿ ಯಾಕೆ ಪೇಪರ್ ರೋಲ್ಸ್ ಇಡದೆ ನೀರನ್ನು ಇಡುತ್ತೇವೆ ಎಂದು ಈಗಲಾದರೂ ತಿಳಿಯಿತೇ ಎನ್ನುವಂತಹ ಪ್ರಸಂಗವನ್ನು ಸೊಗಸಾಗಿ ವಿವೇಚನಾಕಾರರು ತಿಳಿಸಿದರು. ಅದೇ ಪರದೇಶದ ವ್ಯಕ್ತಿ ಮೊದಲ ದಿನ ಪೇಪರ್ ರೋಲ್ಸ್ ಗಾಗಿ ಜಗಳ ತೆಗೆದಿದ್ದ. ಇದನ್ನು ಇಲ್ಲಿ ಹೇಳಿದ ಉದ್ದೇಶ ಮುಂದಿನ ಶ್ಲೋಕದಲ್ಲಿ ಭಗವಂತ ರಾಜಸ ಗುಣದವರಿಗೆ ಯಾವ ರೀತಿಯ ಆಹಾರಗಳು ಇಷ್ಟ ಎಂದು ತಿಳಿಸುತ್ತಾನೆ.

17.9

ಕಟ್ವಮ್ಲಲವಣಾತ್ಯುಷ್ಣ, ತೀಕ್ಷ್ಣರೂಕ್ಷವಿದಾಹಿನಃ |
ಆಹಾರಾ ರಾಜಸಸ್ಯೇಷ್ಟಾ, ದುಃಖಶೋಕಾಮಯಪ್ರದಾಃ ।।9।।

ಕಹಿ, ಹುಳಿ, ಉಪ್ಪುಳ್ಳ, ಅತಿ ಬಿಸಿಯಾದ, ತೀಕ್ಷ್ಣ ಅರ್ಥಾತ್ ಖಾರವಾದ, ಹುರಿದ, ದಾಹವನ್ನುಂಟುಮಾಡುವ ಮತ್ತು ದುಃಖ, ಚಿಂತೆ ಮತ್ತು ರೋಗಾದಿಗಳನ್ನು ಉಂಟುಮಾಡುವಂತಹ ಆಹಾರ ಪದಾರ್ಥ ಅರ್ಥಾತ್ ಭೋಜನದ ಪದಾರ್ಥಗಳು ರಾಜಸ ಪುರುಷರಿಗೆ ಪ್ರಿಯವಾಗುತ್ತವೆ

ಬಹು ಖಾರ, ಹುಳಿ, ಉಪ್ಪು, ಬಿಸಿ, ತೀಕ್ಷ್ಣ, ಒಣಕಲಾದ ಮತ್ತು ಸೀದು ಹೋದ (ಹೆಚ್ಚು ಸುಟ್ಟ) ಆಹಾರಗಳು ರಾಜಸ ಗುಣದವರಿಗೆ ಪ್ರಿಯವಾದುವು. ಇಂತಹ ಆಹಾರಗಳು ದುಃಖ, ಕ್ಲೇಶ ಹಾಗೂ ರೋಗವನ್ನೂ ಉಂಟುಮಾಡುತ್ತವೆ.

ರಾಜಸ ಗುಣದ ಖಾರ ಆಹಾರ ಪರಾಕ್ರಮ ಪ್ರವೃತ್ತಿಯ ಮಹಾರಾಷ್ಟ್ರದವರದು. ಇದು ಅವರಿಗೆ ಅಗತ್ಯ. ಆದರೆ ತನ್ನ ನಿಯತ ಕರ್ಮ ಮಾಡಿದ ಬಳಿಕ ಮಾನವನಿಗೆ ಸಾತ್ತ್ವಿಕತೆಯತ್ತ ಸಾಗುವ ಪ್ರಯಾಸ ಮಾಡಬೇಕು. ಅದು ಅತೀ ಆವಶ್ಯಕ ಕೂಡಾ. ನಮ್ಮ ಪಂಚೇಂದ್ರಿಯಗಳನ್ನು ನಮ್ಮ ಮನಸ್ಸು ನಿಯಂತ್ರಿಸುತ್ತದೆ. ಮನಸ್ಸಿಗೆ ಏನೋ ತಿನನ್ನಬೇಕೆಂದರೆ ಅದನ್ನು ನಿಯಂತ್ರಿಸುವುದು ಕಷ್ಟ. ಬೇರೆ ಇಂದ್ರಿಯಗಳನ್ನು ಸಾಧಾರಣವಾಗಿ ನಿಯಂತ್ರಿಸಬಹುದು. ನೋಡಬಾರದೆಂದರೆ ಕಣ್ಣು ಮುಚ್ಚಿದರಾಯಿತು, ಅದು ತುಂಬಾ ಸುಲಭ. ಆದರೆ ಜಿಹ್ವೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟ, ಜಿಹ್ವೆಯ ಕೆಲಸ ರಸ ಗ್ರಹಿಸುವುದಷ್ಟೇ ಅಲ್ಲ. ನಾಲಗೆಯಿಂದ ಹೊರಡುವ ಮಾತನ್ನು ತಡೆಯುವುದು ಕಷ್ಟ ಸಾಧ್ಯ.

ನಮ್ಮ ಪರಂಪರೆ ಅದ್ಭುತವಾಗಿದೆ. ಉದಾಹರಣೆಗೆ, ನನ್ನ ಮಾಮಿ ತನ್ನ ಮಗುವನ್ನು ನಿದ್ದೆಯಿಂದ ಏಳಿಸುವಾಗ ಭಗವಂತನನ್ನೂ ಎದ್ದೇಳಿಸುತ್ತಿದ್ದಳು. ಮಲಗಿಸುವಾಗ ಭಗವಂತನನ್ನು ಮಲಗಿಸುತ್ತಿದ್ದಳು. ಶುದ್ಧಳಾಗಿ ಆತನಿಗೆ ಭೋಗ ಕೊಡುತ್ತಿದ್ದಳು. ಆಗ ಅದೇಕೆಂದು ನಮಗೆ ಅರ್ಥವಾಗುತ್ತಿರಲಿಲ್ಲ. ಆದರೆ ಕೊರೊನ ಕಾಲದಲ್ಲಿ ಅದರ ಅರ್ಥವಾಯಿತು.

17.10

ಯಾತಯಾಮಂ(ಙ್) ಗತರಸಂ(ಮ್),ಪೂತಿ ಪರ್ಯುಷಿತಂ(ಞ್) ಚ ಯತ್ |
ಉಚ್ಛಿಷ್ಟಮಪಿ ಚಾಮೇಧ್ಯಂ(ಮ್),ಭೋಜನಂ ತಾಮಸಪ್ರಿಯಮ್ ।।10।।

ಯಾವ ಭೋಜನವು ಸರಿಯಾಗಿ ಪಕ್ವವಾಗಿರುವುದಿಲ್ಲವೋ, ರಸಹೀನವಾಗಿದೆಯೋ, ದುರ್ಗಂಧಮಯವಾಗಿರುವುದೋ, ಹಳಸಿಹೋದದ್ದೋ, ತಿಂದುಳಿದುದೋ ಹಾಗು ಅಪವಿತ್ರವಾದುದೋ. ಅವುಗಳೆಲ್ಲಾ ತಾಮಸ ಪುರುಷರಿಗೆ ಪ್ರಿಯವಾಗಿರುತ್ತದೆ

ಬೇಯಿಸಿ ಬಹಳ ಹೊತ್ತಾಗಿರುವ ಆಹಾರ, ರಸಹೀನವಾದ (ಒಣಕಲಾಗಿರುವ), ಕೆಟ್ಟುಹೋದ, ಹಳಸಿದ, ತಿಂದು ಬಿಟ್ಟ, ದೇವರಿಗೆ ಸಮರ್ಪಿಸಲು ಅಯೋಗ್ಯವಾದ ಆಹಾರವು ತಾಮಸ ಗುಣದವರಿಗೆ ಪ್ರಿಯವಾದವುಗಳು. 

ಮೇಲಿನ ಎರಡು ಶ್ಲೋಕಗಳಲ್ಲಿ ಕೃಷ್ಣ ಸಾತ್ತ್ವಿಕ ಹಾಗೂ ರಾಜಸ ಆಹಾರಗಳ ಗುಣ ಹಾಗೂ ಪರಿಣಾಮಗಳನ್ನು ವಿವರವಾಗಿ ಹೇಳಿದ್ದಾನೆ. ರಾಜಸ ಆಹಾರ ತಿನ್ನುವವರು ಮುಂದೊಂದು ದಿನ ಆರೋಗ್ಯ ಸಮಸ್ಯೆಯನ್ನು ಎದುರಿಸಲೇ ಬೇಕಾಗುತ್ತದೆ. ಆದರೆ ತಾಮಸ ಆಹಾರದ ಪರಿಣಾಮಗಳನ್ನು ಮಾತ್ರ ಹೇಳಲಿಲ್ಲ. ಏಕೆಂದರೆ ತಾಮಸ ಆಹಾರ ಪ್ರಿಯರು ಪರಿಣಾಮದ ಬಗ್ಗೆ ಯೋಚಿಸುವುದೇ ಇಲ್ಲ. ಅವರಿಗೆ ನಾಲಗೆ ಚಾಪಲ್ಯವನ್ನು ಬಿಡಲಾಗುವುದಿಲ್ಲ. ಅಂತಹವರಿಗೆ ಪರಿಣಾಮದ ಬಗ್ಗೆ ಹೇಳಿ ಏನು ಪ್ರಯೋಜನ?  

ಈರುಳ್ಳಿ, ಬೆಳ್ಳುಳ್ಳಿ ಹಾಕಿದ ಆಹಾರವನ್ನು ಏಕೆ ಭೋಗಕ್ಕೆ ಇಡುವುದಿಲ್ಲ ಎಂದು ನಾವು ಸ್ವಲ್ಪ ಇಲ್ಲಿ ಯೋಚಿಸೋಣ. ಅದು ರಾಜಸ ಆಹಾರ. ದೇವರನ್ನು ಪೂಜಿಸುವ ಸಾತ್ತ್ವಿಕ ವ್ಯಕ್ತಿ ಸಾತ್ತ್ವಿಕ ಆಹಾರವನ್ನಷ್ಟೇ ಸೇವಿಸಬೇಕು. ದೇಹಕ್ಕೆ ಅದರ ಅವಶ್ಯಕತೆಯು ಇದ್ದಾಗ ಔಷಧೀಯ ರೂಪದಲ್ಲಿ ಅದನ್ನು ಸೇವಿಸಬಹುದು. ಸಾತ್ತ್ವಿಕ ಆಹಾರ ಒಳ್ಳೆಯದೆಂದು ಅತಿಯಾಗಿ ಸೇವಿಸುವುದೂ ಕೂಡಾ ವರ್ಜ್ಯ. ಪ್ರಸಾದದ ನೆಪದಲ್ಲಿ ಅತಿ ಸಿಹಿ ತಿಂದರೆ ಸಕ್ಕರೆ ಖಾಯಿಲೆಯ ಮನುಷ್ಯನಿಗೆ ಏನಾಗಬಹುದು?

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು | ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ॥ (೬.೧೭)
ಆಹಾರ, ವಿಹಾರ, ಕಾಯಕ, ನಿದ್ರೆ, ಜಾಗರಣೆ ಇವುಗಳು ಯಾರಲ್ಲಿ ಮಿತವಾಗಿ ಯೋಗಕ್ಕೆ ಕೇಡು ಬಾರದ ಪರಿಣಾಮದಿಂದ ಇವೆಯೋ ಅಂಥವನಿಗೆ ಧ್ಯಾನಯೋಗವು ಸುಖಕರವಾಗುವುದು.

ಈ ಶ್ಲೋಕದಲ್ಲಿ ಆಹಾರದ ಸೇವನೆಯ ರೀತಿಯನ್ನು ತಿಳಿಸಿದ್ದಾನೆ. ಭಗವಂತ ಈ ರೀತಿಯಾಗಿ ಮೂರು ಪ್ರಕಾರದ ಆಹಾರಗಳ ಕುರಿತು ಸ್ಪಷ್ಟವಾಗಿ ಹೇಳಿದ್ದಾನೆ.

ಮುಂದಿನ ಶ್ಲೋಕದಲ್ಲಿ ಯಜ್ಞದ ವ್ಯಾಖ್ಯೆಯನ್ನೂ ಮಾಡಿದ್ದಾನೆ. ಯಜ್ಞವೆಂದರೆ ಕೇವಲ ಅಗ್ನಿಯಲ್ಲಿ ತುಪ್ಪ ಹವಿಸ್ಸು ಬೆರೆಸಿ ಮಾಡುವುದಲ್ಲ. ಯಜ್ಞದಲ್ಲಿ ಅನೇಕ ಪ್ರಕಾರಗಳಿವೆ. 
ದ್ರವ್ಯಯಜ್ಞ, ಯೋಗಯಜ್ಞ, ತಪೋಯಜ್ಞ, ಇತ್ಯಾದಿ. ಭಗವಂತ ಯಜ್ಞಗಳಲ್ಲಿ ಯಾವುದು ಶ್ರೇಷ್ಠ ಎಂದೂ ಮುಂದಿನ ಶ್ಲೋಕದಲ್ಲಿ ಭಗವಂತ ಹೇಳಿದ್ದಾನೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಯೋಗ್ಯರಿಗೆ ಇನ್ನೊಬ್ಬರಿಗೆ ದಾನ ಕೊಡುವುದು ಸಹ ಯಜ್ಞವೇ.

17.11

ಅಫಲಾಕಾಂಕ್ಷಿಭಿರ್ಯಜ್ಞೋ, ವಿಧಿದೃಷ್ಟೋ ಯ ಇಜ್ಯತೇ |
ಯಷ್ಟವ್ಯಮೇವೇತಿ ಮನಃ(ಸ್), ಸಮಾಧಾಯ ಸ ಸಾತ್ತ್ವಿಕಃ ।।11।।

ಶಾಸ್ತ್ರೋಕ್ತವಾಗಿ ನಿಯಮಿಸಲ್ಪಟ್ಟು ಮಾಡಲೇಬೇಕಾದ ಕರ್ತವ್ಯವಾಗಿದೆ - ಎಂಬುದಾಗಿ ಮನಸ್ಸನ್ನು ದೃಢಪಡಿಸಿಕೊಂಡು ಫಲಾಪೇಕ್ಷೆಯಿಲ್ಲದೆ ಇರುವಂತಹ ವ್ಯಕ್ತಿಯಿಂದ ಯಾವ ಯಜ್ಞ ಮಾಡಲ್ಪಡುವುದೋ ಅದು ಸಾತ್ತ್ವಿಕ (ಯಜ್ಞ) ವಾಗಿದೆ

ಧರ್ಮಶಾಸ್ತ್ರಗಳಿಗನುಗುಣವಾಗಿ, ಫಲಾಫೇಕ್ಷೆಯಿಲ್ಲದೆ, ಮನಸ್ಸನ್ನು ಸ್ಥಿರಗೊಳಿಸಿ ಯಾವ ಯಜ್ಞವು ಆಚರಿಸಲ್ಪಡುತ್ತದೋ ಆ ಯಜ್ಞವು ಸಾತ್ವಿಕವಾದುದು. ನಮ್ಮ ಮೇಲೆ ದೇವರ ಋಣವಿದೆ. ಅದರಿಂದ ನಾವು ಮುಕ್ತರಾಗಬೇಕು.  

ಉದಾ - ವರುಣ ದೇವನ ಕೃಪೆಯಿಂದ ಮಳೆಯಾಗುತ್ತದೆ. ಅವನ ಉಪಕಾರ ನಮ್ಮ ಮೇಲಿದೆ. ಅವನನ್ನು ಅದಕ್ಕಾಗಿ ಹವಿಸ್ಸಿನ ಮೂಲಕ ತೃಪ್ತಿ ಪಡಿಸಬೇಕು. ಬೇರೆ ಬೇರೆ ದೇವರಿಗೆ ಬೇರೆ ಬೇರೆ ಅಗ್ನಿ ಮೂಲಕ, ಹೋಮ ಹವನದ ಮೂಲಕ ತೃಪ್ತಿ ಪಡಿಸಬೇಕು. ಅದನ್ನು ಯಜ್ಞವೆಂದು ಕರೆಯುತ್ತಾರೆ. ಅದೇ ಪಿತೃ ಋಣವನ್ನು ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ತೀರಿಸಬೇಕು. ಗುರುವಿನ ಋಣವನ್ನು ಋಷಿ ಋಣ ಎಂದು ಕರೆಯುತ್ತಾರೆ. ಗುರು ಪರಂಪರೆಯನ್ನು ಉಳಿಸುವ ಮೂಲಕ ಧರ್ಮದ ರಕ್ಷಣೆಯಾಗುತ್ತದೆ. ಸಂನ್ಯಾಸಿಗಳ ಆದರಾತಿಥ್ಯ ನಡೆಸುವುದು, ಊಟ ನೀಡುವ ಮೂಲಕ ಗುರು ಋಣವನ್ನು ತೀರಿಸಬಹುದು. ನಮ್ಮ ಮೇಲೆ ಸಮಾಜದ ಋಣವೂ ಇರುವುದರಿಂದ ಈ ಲೋಕ ಋಣವನ್ನು ಸಮಾಜ ಸೇವೆ ಮಾಡುವ ಮೂಲಕ ಪೂರ್ತಿಮಾಡಬಹುದು. ಇದನ್ನು ಧರ್ಮಶಾಲೆ, ವಿದ್ಯಾಲಯ, ಆಸ್ಪತ್ರೆ, ಅನ್ನ ಛತ್ರ ಮಾಡುವ ಮೂಲಕ ತೀರಿಸಬಹುದು. ಭೂತ ಋಣ ಅಂದರೆ ವೃಕ್ಷ, ಪ್ರಾಣಿಪಕ್ಷಿಗಳ ಋಣ. ಇದನ್ನು ಬೇರೆ ಬೇರೆ ದಿನಗಳಂದು ಅವುಗಳನ್ನು ಪೂಜಿಸುವ ಮೂಲಕ ತೀರಿಸುವ ಪ್ರಯತ್ನ ಮಾಡಬೇಕು.
ಉದಾ- ಗೋಪೂಜೆ, ಅಶ್ವತ್ಥ, ನೆಲ್ಲಿ ಬನ್ನಿ ಪೂಜೆ ಹೀಗೆ. ತುಳಸಿಯನ್ನು ಅಂಗಳದಲ್ಲಿಟ್ಟು ನಿತ್ಯ ಪೂಜಿಸುತ್ತೇವೆ. ಪ್ರಕೃತಿಯ ಪೂಜೆ  ಮಾಡುವುದು ನಮ್ಮ ಸಂಸ್ಕಾರ ಅಷ್ಟೇ ಅಲ್ಲ, ನೀನು ಸಾಯುವ ಮೊದಲು ಒಂದಾದರೂ ವೃಕ್ಷ ನೆಟ್ಟು ಹೋಗು, ಏಕೆಂದರೆ ನಿನ್ನ ಚಿತೆಯಲ್ಲಿ ಒಂದು ವೃಕ್ಷ ಕಡಿದು ಸುಡಲಾಗುತ್ತದೆ ಎನ್ನುವ ಪರಂಪರೆ ನಮ್ಮದು. ಆ ಅಂತಿಮ ವೃಕ್ಷದ ಋಣವನ್ನೂ ನಾವು ಇಟ್ಟುಕೊಳ್ಳಬಾರದು. ಹಾಗಾಗಿ ಗಿಡ ನೆಟ್ಟು ಬೆಳೆಸು.

17.12

ಅಭಿಸಂಧಾಯ ತು ಫಲಂ(ನ್), ದಂಭಾರ್ಥಮಪಿ ಚೈವ ಯತ್ |
ಇಜ್ಯತೇ ಭರತಶ್ರೇಷ್ಠ, ತಂ(ಮ್) ಯಜ್ಞಂ(ಮ್) ವಿದ್ಧಿ ರಾಜಸಮ್ ।।12।।

ಆದರೆ, ಎಲೈ ಅರ್ಜುನ ! ಕೇವಲ ದಂಭಾಚಾರಕ್ಕಾಗಿಯೋ ಅಥವಾ ಫಲವನ್ನು ಪಡೆಯುವ ಉದ್ದೇಶವಿಟ್ಟುಕೊಂಡು ಮಾಡಲಾಗುವ ಯಜ್ಞವನ್ನು ನೀನು ರಾಜಸವೆಂದು ತಿಳಿ

ಹೇ ಅರ್ಜುನ, ಫಲವನ್ನು ಮನದಲ್ಲಿಟ್ಟುಕೊಂಡು ಜನರ ತೋರಿಕೆಗಾಗಿ ಯಾವ ಯಜ್ಞವು ನಡೆಸಲ್ಪಡುತ್ತದೋ ಅಂತಹ ಯಜ್ಞವನ್ನು ರಾಜಸ ಯಜ್ಞ ಎಂದು ಕರೆಯುತ್ತಾರೆ. ಸಂತಾನದ ಅಪೇಕ್ಷೆಯಿಂದ ದಶರಥ ನಡೆಸಿದ ಪುತ್ರಕಾಮೇಷ್ಠಿ ಯಾಗ ಮತ್ತು ಧರ್ಮರಾಯ ನಡೆಸಿದ ರಾಜಸೂಯಾಗ ಎಲ್ಲವೂ ಕೂಡ ರಾಜಸ ಯಜ್ಞಗಳು.

ಈ ರಾಜಸೂಯ ಯಾಗದಲ್ಲಿ ಕೂಡ ಒಂದು ಅದ್ಭುತ ಘಟನೆ ನಡೆದಿತ್ತು. ಆ ಸಮಯ ಅಲ್ಲಿಗೆ ಒಂದು ಮುಂಗುಸಿ ಬಂದಿತ್ತು. ಅದರ ಅರ್ಧ ಶರೀರ ಚಿನ್ನದಂತೆ ಹೊಳೆಯುತ್ತಿತ್ತು. ಈ ಮುಂಗುಸಿ ಅಲ್ಲೇ ಪಕ್ಕದಲ್ಲಿ ಏನೋ ಮಾಡುತ್ತಿತ್ತು. ಎಲ್ಲರಿಗೂ ಈ ಮುಂಗುಸಿ ಇಲ್ಲಿ ಏನು ಮಾಡುತ್ತಿದೆ ಎಂದು ಆಶ್ಚರ್ಯವಾಯಿತು. ಅದು ಬೇರೆ ವಿಚಿತ್ರ ಮುಂಗುಸಿ. ಅದರ ಅರ್ಧ ಶರೀರ ಚಿನ್ನದ್ದಾಗಿತ್ತು. "ನೀನೇನು ಮಾಡುತ್ತಿರುವೆ ಇಲ್ಲಿ?" ಎಂದು ಯಾರೋ ಅದನ್ನು ಕೇಳಿದರು. ಆಗ ಆಯಾ ಮುಂಗುಸಿ, "ನನ್ನ ಅರ್ಧ ಶರೀರ ಚಿನ್ನದ್ದಾಗಿದೆ, ಇನ್ನರ್ಧ ಶರೀರವ ಚಿನ್ನವಾಗಲಿ ಎಂದು ಪ್ರಯತ್ನಿಸುತ್ತಿದ್ದೇನೆ. ಇಲ್ಲಿ ಇಷ್ಟು ದೊಡ್ಡ ಯಜ್ಞ ನಡೆಯುತ್ತಿದೆ. ಇಲ್ಲಿ ನನ್ನ ಕೆಲಸವಾಗಬಹುದು. ಏಕೆಂದರೆ ಹಿಂದೆ ಒಂದು ಯಜ್ಞದಲ್ಲಿ ನನ್ನ ಅರ್ಧ ಶರೀರ ಚಿನ್ನವಾಗಿತ್ತು, ಇಲ್ಲಿ ನನ್ನ ಪೂರ್ತಿ ಶರೀರ ಚಿನ್ನವಾಗಬಹುದೆಂಬ ಅಭಿಲಾಷೆಯಿಂದ ಬಹಳ ದೂರದಿಂದ ಇಲ್ಲಿಗೆ ಬಂದಿದ್ದೇನೆ. ಆದರೆ ಇಲ್ಲಿ ನನ್ನ ಉಳಿದರ್ಧ ಶರೀರ ಚಿನ್ನ ವಾಗುತ್ತಿಲ್ಲ" ಎಂದು ಬೇಸರಗೊಂಡಿತು. ಆಗ ಆ ನಿನ್ನ ಅರ್ಧ ಶರೀರ ಚಿನ್ನವಾಯಿತಲ್ಲ ಅದು ಯಾವ ಯಜ್ಞವಾಗಿತ್ತು ಎಂದು ಮರುಪ್ರಶ್ನೆ ಹಾಕಲು ಮುಂಗುಸಿ ಎಂದಿತು - ನಾನೊಂದು ಹೊಲದಲ್ಲಿ ಇರುತ್ತಿದ್ದೆ, ಆಗ ಅಲ್ಲಿ ಒಬ್ಬ ರೈತ ಗುಡಿಸಿಲಲ್ಲಿ ವಾಸಿಸುತ್ತಿದ್ದ. ಆ ವರ್ಷ ಬರ ಬಂದ ಕಾರಣ ಬೆಳೆ ಇಲ್ಲದೆ ತಿನ್ನಲು ಧಾನ್ಯ ಇಲ್ಲವಾಯಿತು. ಆಗ ಆ ರೈತನಿಗೂ ಆಹಾರದ ಕೊರತೆ ಉಂಟಾಯಿತು. ದಿನದಲ್ಲಿ ಒಮ್ಮೆ ರೊಟ್ಟಿ ಮಾಡಿ ಇಡೀ ಪರಿವಾರ ಅದರಲ್ಲಿ ಬದುಕುತ್ತಿದ್ದರು. ಒಮ್ಮೆ ಈ ರೈತ ತನ್ನ ಪಾಲಿನ ರೊಟ್ಟಿಯನ್ನು ತಿನ್ನುತ್ತಿರುವಾಗ ಒಬ್ಬ ಅತಿಥಿ ಮನೆಗೆ ಬಂದ ಹಾಗೂ ನನಗೆ ತುಂಬಾ ಹಸಿವಾಗಿದೆ ತಿನ್ನಲು ಏನಾದರೂ ಕೊಡು ಎಂದು ರೈತನನ್ನು ಕೇಳಿದ. ಕೂಡಲೇ ರೈತ ತನ್ನ ರೊಟ್ಟಿಯಲ್ಲಿ ಅರ್ಧ ರೊಟ್ಟಿ ತೆಗೆದು ಅತಿಥಿಗೆ ಕೊಟ್ಟು ನೀನು ಮೊದಲು ತಿನ್ನು ನಾನು ನಂತರ ತಿನ್ನುತ್ತೇನೆ ಇದು ಅತಿಥಿ ಧರ್ಮ ಎನ್ನುತ್ತಾ ಅರ್ಧ ರೊಟ್ಟಿಯನ್ನು ಕೊಟ್ಟ. ಆ ಅತಿಥಿಯಾದರೂ ನಾನು 'ಮೂರು ದಿನಗಳಿಂದ ಏನೂ ತಿನ್ನಲಿಲ್ಲ ನನಗೆ ಇನ್ನೂ ಸ್ವಲ್ಪ ರೊಟ್ಟಿ ಕೊಡು' ಎನ್ನುತ್ತಾನೆ. ಆಗ ರೈತ ನಾನಾದರೂ ನಿನ್ನೆ ತಿಂದಿದ್ದೇನೆ ಆದರೆ ಈತ ಮೂರು ದಿನಗಳಿಂದ ಹಸಿದಿದ್ದಾನೆ ಈತನಿಗೆ ಆಹಾರದ ಅವಶ್ಯಕತೆ ಹೆಚ್ಚು ಇದೆ ಎಂದು ತಿಳಿದು ಉಳಿದ ಅರ್ಧ ರೊಟ್ಟಿಯನ್ನು ಆತನಿಗೇ ಕೊಟ್ಟ. ನಂತರ ಬಂದ ಅತಿಥಿ ಅದನ್ನೂ ತಿಂದು ಕೈ ತೊಳೆದಾಗ ಅಲ್ಲಿ ಬಿದ್ದ ನೀರಿಂದ ನೆಲ ತಂಪಾಯ್ತು. ಆ ರಾತ್ರಿ ಅಲ್ಲಿರುವ ತಂಪಿನಿಂದಾಗಿ ನಾನು ಅಲ್ಲಿ ಹೋಗಿ ಮಲಗಿದೆ. ಬೆಳಿಗ್ಗೆ ಏಳುವಾಗ ನೀರೆಲ್ಲಾ ಒಣಗಿತ್ತು ಆದರೆ ನನ್ನ ಶರೀರದ ಅರ್ಧಭಾಗ ಚಿನ್ನವಾಗಿತ್ತು. ನಾನು ಒಂದೇ ಮಗ್ಗುಲಲ್ಲಿ ಮಲಗಿದ್ದರಿಂದ ಆ ಭಾಗವಷ್ಟೇ ಚಿನ್ನವಾಯಿತು. ಓ! ಆ ಯಜ್ಞವಾದರೋ ಸಾತ್ತ್ವಿಕ ಯಜ್ಞವಾಗಿತ್ತು. ಆ ಯಜ್ಞಕ್ಕಿಂತ ದೊಡ್ಡ ಯಜ್ಞ ಇರಲು ಸಾಧ್ಯವೇ ಇಲ್ಲ. ಈ ಯಾಗವಾದರೋ ಯಾವುದೋ ಫಲದ ಅಪೇಕ್ಷೆಯಿಂದ ನಡೆಸಲ್ಪಡುತ್ತಿದೆ. ಹಾಗಾಗಿ ನನ್ನ ಶರೀರ ಚಿನ್ ವಾಗುತ್ತಿಲ್ಲ ಎಂದಿತು.
 
ಉದ್ಧಾಲಕ ಮುನಿ ನಡೆಸುತ್ತಿದ್ದ ವಿಶ್ವಜಿತ್ ಯಜ್ಞದಲ್ಲಿ ನಚಿಕೇತನನ್ನು ಅಪ್ಪ ಯಮನಿಗೆ ದಾನ ಮಾಡುತ್ತಾನೆ. ಈ ಕಥೆಯನ್ನು ಮುಂದಿನ ಸತ್ರದಲ್ಲಿ ನೋಡೋಣ ಈ ಯಜ್ಞದ ಬಗ್ಗೆಯೂ ಮುಂದಿನ ಸತ್ರದಲ್ಲಿ ಚರ್ಚಿಸೋಣ ಈಗ ಪ್ರಶ್ನೋತ್ತರಗಳತ್ತ ಸಾಗೋಣ.

ಪ್ರಶ್ನೋತ್ತರಗಳು

ರೇಣು ಅಗರ್ವಾಲ್ ಅಕ್ಕ
ಪ್ರಶ್ನೆ : ತುಳಸಿಗೆ ವಿಷ್ಣು ಮತ್ತು ಶಿವನ ಜೊತೆಗಿರುವ ಸಂಬಂಧವೇನು? ಏಕೆ ಶಿವನ ಬಳಿ ತುಳಸೀವನ ಇರಬಾರದು?
ಉತ್ತರ : ವಿಷ್ಣು ತುಳಸಿಯನ್ನು ವರಿಸಿದ್ದಾನೆ. ಆದರೆ ಆಕೆ ರಾಕ್ಷಸನ ಪತ್ನಿ. ದೇವ ದಾನವರ ಯುದ್ಧದಲ್ಲಿ ತುಳಸಿ ರಾಕ್ಷಸರಿಗೆ ತುಂಬಾ ಸಹಾಯ ಮಾಡಿದ್ದಳು. ತುಳಸಿಯ ವ್ರತವನ್ನು ಭಂಗ ಮಾಡಲು ಭಗವಾನ್ ವಿಷ್ಣು ಅವಳ ಪತಿಯ ರೂಪದಲ್ಲಿ ಪ್ರಕಟಗೊಂಡನು. ತುಳಸಿ, ಆತ ತನ್ನ ಪತಿಯೆಂದೇ ಅವನ ಜೊತೆ ವ್ಯವಹರಿಸಿದಳು. ಇದು ತಿಳಿದಾಗ ಆಕೆಗೆ ಬಹಳ ಕಷ್ಟವಾಯಿತು. ಆಗ ವಿಷ್ಣುವು ನೀನು ನನ್ನ ಬಹಳ ಸೇವೆ ಮಾಡಿರುವೆ. ಹಾಗಾಗಿ ನಾನು ಕೃಷ್ಣ ರೂಪದಲ್ಲಿ ಬಂದಾಗ ನಿನ್ನನ್ನು ವರಿಸುತ್ತೇನೆ ಎನ್ನುತ್ತಾನೆ. ಅದರ ನೆನಪಿಗಾಗಿ ನಾವು ಪ್ರತಿವರ್ಷ ಕೃಷ್ಣನೊಂದಿಗೆ ತುಳಸೀ ಪೂಜೆಯನ್ನು ಮಾಡುತ್ತೇವೆ. ಆದರೆ ನಾವು ಇಲ್ಲಿ ತಿಳಿದುಕೊಳ್ಳಬೇಕಾದುದು ಏನೆಂದರೆ, ತುಳಸಿ ವೃಕ್ಷ ಬೆಳಿಗ್ಗೆ ಮತ್ತು ಸಂಜೆ ಕಾರ್ಬನ್ ಡೈಆಕ್ಸೈಡನ್ನು ತೆಗೆದುಕೊಂಡು ಆಮ್ಲಜನಕವನ್ನು ಹೊರ ಬಿಡುವುದೆಂಬುದು. ಆಗಿನ ಕಾಲಕ್ಕೆ ಋಷಿ ಮುನಿಗಳು ಹೇಳಿದರೂ ಜನರು ಕೇಳುವಷ್ಟು ಜ್ಞಾನಿಗಳಿಲ್ಲದೇ ಇರಬಹುದು. ಹಾಗಾಗಿ ಅದನ್ನು ವಿಧಿವಿಧಾನದ ರೂಪದಲ್ಲಿ ತಂದಿರಬಹುದು. ಉಪವಾಸ ಮಾಡುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದೆಂದು ಹೇಳಿದ ವಿಜ್ಞಾನಿಗೆ ನೊಬೆಲ್ ಪ್ರಶಸ್ತಿ ಬಂತು. ಆದರೆ ನಮ್ಮ ಋಷಿ ಮುನಿಗಳು ಪಕ್ಷದಲ್ಲಿ ಒಂದು ದಿನ ಉಪವಾಸ ಮಾಡಬೇಕೆಂದು ಅಂದೇ ಹೇಳಿದ್ದರು. ಅದೇ ಋಷಿ ಮುನಿಗಳು ನಮ್ಮ ಮನೆಯ ಅಂಗಳದಲ್ಲಿ ತುಳಸೀ ಗಿಡವಿರಬೇಕೆಂದು ಹೇಳಿದ್ದಾರೆ. ಆಕ್ಸಿಜನ್ ಹೇರಳವಾಗಿ ಲಭಿಸಿದರೆ ನಿಮ್ಮ ಮೆದುಳು ಶಕ್ತಿಶಾಲಿಯಾಗಿ, ನಿಮ್ಮ ಚೈತನ್ಯವು ಪ್ರಭಾವಶಾಲಿಯಾಗಿ ಇರಬಲ್ಲದು. ನೀವು ತೆಗೆದುಕೊಳ್ಳುವ ಗಾಳಿಯಲ್ಲಿರುವ ಆಕ್ಸಿಜನ್ನಲ್ಲಿಯ 30ಪ್ರತಿಶತ ಮೆದುಳು ಎಳೆದುಕೊಳ್ಳುತ್ತದೆ. ಯಾರ ಮೆದುಳಿನಲ್ಲಿ ಆಕ್ಸಿಜನ್ ಪ್ರಮಾಣ ಸರಿಯಾಗಿರುತ್ತದೋ ಅವರು ಲವಲವಿಕೆಯಿಂದ ಇರುತ್ತಾರೆ. ಅದರ ಪ್ರಮಾಣ ಕಡಿಮೆಯಾದರೆ ನಿದ್ರೆ ಆವರಿಸುತ್ತದೆ. ಹಾಗಾಗಿ ತುಳಸಿಯನ್ನು ಕೃಷ್ಣನ ಜೊತೆಯಲ್ಲಿ ಜೋಡಿಸಿ ಅದನ್ನು ಒಂದು ದಿನನಿತ್ಯ ನೀರುಣಿಸುವ ನೆಪದಲ್ಲಿ ಕರ್ತವ್ಯ ರೂಪದಲ್ಲಿ ಋಷಿ ಮುನಿಗಳು ನಮಗೆ ಹೇಳಿದ್ದಾರೆ. ಅದಕ್ಕೆ ಆಹಾರವನ್ನು ನೈವೇದ್ಯ ರೂಪದಲ್ಲಿ ಇಟ್ಟಾಗ ಒಂದು ದಳ ತುಳಸೀ ಎಲೆಯನ್ನು ಹಾಕುವುದರಿಂದ ಅದರ ಔಷಧೀಯ ಗುಣಗಳು ದೇಹದಲ್ಲಿ ಸೇರಿ ಆರೋಗ್ಯವನ್ನು ಕಾಪಾಡುತ್ತದೆ. ಶಾಸ್ತ್ರದಲ್ಲಿ ಶಿವನಿಗೆ ತುಳಸಿಯ ಅರ್ಚನೆ ಬೇಡ ಎಂದಿದೆಯೇ ಹೊರತು ಸುತ್ತ ತುಳಸೀ ಗಿಡ ಇರಬಾರದು ಎಂದು ಹೇಳಿಲ್ಲ. ಬಿಲ್ವದ ಗಿಡ ನೆಟ್ಟು, ಶಿವನಿಗೆ ಅದರಿಂದ ಅರ್ಚಿಸಿ. ಕೃಷ್ಣನಿಗೆ ತುಳಸಿಯಿಂದ ಪೂಜಿಸಿ ಅಷ್ಟೇ. ದೇವರನ್ನು ಪೂಜಿಸುವಾಗ ಆನಂದದಿಂದ ಪೂಜಿಸಿ.

ಪ್ರಶ್ನೆ : ನಾನು ದಿನಾಲೂ ಬಾಲ ಗೋಪಾಲನಿಗೆ ಭೋಗ (ನೈವೇದ್ಯ ಇಡುತ್ತೇನೆ). ನನ್ನ ಮಗನನ್ನೂ ಕೂಡಾ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತೇನೆ. ಆತನೂ ಅಮ್ಮನಿಗೋಸ್ಕರ ನಾನು ಮಾಡುವ ಪೂಜೆಯಲ್ಲಿ ಭಾಗಿಯಾಗಿ ಪ್ರಸಾದವನ್ನು ತೆಗೆದುಕೊಂಡೇ ಆಫೀಸಿಗೆ ಹೋಗುತ್ತಾನೆ. ನನಗೆ ಹಾಗೆ ಮಾಡುವುದರಿಂದ ನೆಮ್ಮದಿ ಸಿಗುತ್ತದೆ. ಈಗ ನನ್ನ ಪ್ರಶ್ನೆ ಏನೆಂದರೆ ನಾನು ಭಗವಂತನಿಗಾಗಿ ಭೋಗ ತಯಾರಿಸುತ್ತೇನೋ ಅಥವಾ ಮಗನ ಮೇಲಿನ ಮೋಹದಿಂದಲೋ ಎಂಬ ದ್ವಂದ್ವ ನನ್ನನ್ನು ಸದಾ ಕಾಡುತ್ತದೆ. ಪರಿಹಾರ ತಿಳಿಸಿ.
ಉತ್ತರ : ಭಗವಂತನಿಗೆ ನೀವೇನು ಇಡುತ್ತೀರಿ ಎಂಬುವುದಕ್ಕಿಂತ ಯಾವ ಭಾವದಿಂದ ಇಡುತ್ತೀರಿ ಎಂಬುವುದು ಮುಖ್ಯವಾಗುತ್ತದೆ. ಮತ್ತೆ ನೀವು ಈ ರೀತಿ ಬಲವಂತದಿಂದ ಮಗನಿಗೆ ಪ್ರಸಾದ ತೆಗೆದುಕೊಂಡು ಹೋಗು ಎನ್ನುವುದು ಮುಂದೆ ಆತನಿಗೆ ಅದು ಬಹಳ ಉಪಯೋಗವಾಗುತ್ತದೆ. ಅವನ ಮನದಲ್ಲೂ ನಾನು ಪೂಜೆ ಮುಗಿಸಿ ಪ್ರಸಾದ ತಂದಿದ್ದೇನೆ ಎಂಬ ಒಂದು ಸುರಕ್ಷಿತ ಭಾವ ಮೂಡುತ್ತದೆ, ಮಾತ್ರವಲ್ಲ, ಪೂಜೆಯ ವೇಳೆ ಮಂತ್ರಗಳನ್ನು ಭಗವದ್ಗೀತೆಯ ಶ್ಲೋಕಗಳನ್ನು ಗಟ್ಟಿಯಾಗಿ ಹೇಳುವುದರಿಂದ ಪ್ರಾಣಾಯಾಮವಾದಂತಾಗಿ ಶ್ವಾಸಕೋಶ ಪ್ರಕ್ರಿಯೆಯು ಉತ್ತಮಗೊಳ್ಳುತ್ತದೆ ತನ್ಮೂಲಕ ಆರೋಗ್ಯವನ್ನು ಹೆಚ್ಚಿಸುತ್ತದೆ.

ರಮ್ಯಾ ಅಕ್ಕ
ಪ್ರಶ್ನೆ : 
ಯಜ್ಞ ಎನ್ನುವುದರ ನಿಜವಾದ ಅರ್ಥವೇನು? ಶ್ರದ್ಧಾ ಎಂದರೇನು? Concentration-ನೇ (ಏಕಾಗ್ರತೆಯೆ)?
ಉತ್ತರ : ನಿರಪೇಕ್ಷ ಭಾವದಿಂದ ಯಾವುದೇ ಸ್ವಾರ್ಥವಿಲ್ಲದೆ ಇನ್ನೊಬ್ಬರಿಗೆ ಏನಾದರೂ ಕೊಡುವುದನ್ನು (selfless service) ಯಜ್ಞ ಎನ್ನುತ್ತೇವೆ. ಯಜ್ಞಗಳಲ್ಲೂ ಬೇರೆ ಬೇರೆ ರೀತಿಯ ಯಜ್ಞಗಳಿವೆ. ಉದಾ : ಬಡ ವಿದ್ಯಾರ್ಥಿಯ ವಿದ್ಯೆಗೆ ಹಣದ ರೂಪದಲ್ಲಿ ಸಹಾಯ ಮಾಡುವುದು ಕೂಡಾ ಒಂದು ರೀತಿಯ ಯಜ್ಞವೇ ಹೌದು. ಶ್ರದ್ಧಾ ಎಂದರೆ devotion (ಭಕ್ತಿ).
 
ಸಮಾರೋಪ ಪ್ರಾರ್ಥನೆ ಮತ್ತು ಹನುಮಾನ ಚಾಲಿಸಾ ಪಠಣದೊಂದಿಗೆ ೧೭ನೆಯ ಅಧ್ಯಾಯದ ೧/೨ ಭಾಗದ ವಿವೇಚನಾ ಸತ್ರವು ಕೊನೆಗೊಂಡಿತು.