विवेचन सारांश
ನಮ್ಮ ವ್ಯಕ್ತಿತ್ವ : ದೈವೀ ಗುಣವೋ? ಅಥವಾ ಆಸುರೀ ಗುಣವೋ?

ID: 7150
Kannada - ಕನ್ನಡ
ಭಾನುವಾರ, 01 ಜೂನ್ 2025
ಅಧ್ಯಾಯ 16: ದೈವಾಸುರ ಸಂಪದ್ವಿಭಾಗಯೋಗ
1/2 (ಶ್ಲೋಕ 1-6)
ವಿವೇಚನಕಾರರು: ಗೀತಾ ವಿಶಾರದ ಶ್ರೀ ಡಾ. ಸಂಜಯ್ ಮಾಲ್ಪಾನಿ ಜಿ


ಸುಮಧುರ ಸುಂದರ ಪ್ರಾರ್ಥನೆ ಮತ್ತು ಸೂರ್ಯನ ತೇಜಸ್ಸನ್ನು ಪ್ರತಿಬಿಂಬಿಸುವಂತಹ ದೀಪ ಪ್ರಜ್ವಲನೆಯೊಂದಿಗೆ ಇಂದಿನ ವಿವೇಚನಾ ಸತ್ರವನ್ನು ಪ್ರಾರಂಭಿಸಲಾಯಿತು.

ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ॥
ಎಂದು ಪ್ರಾರ್ಥಿಸಿ, ಪೂಜ್ಯ ಸ್ವಾಮೀಜಿ ಗೋವಿಂದ್ ದೇವ್ ಗಿರಿಜೀ ಮಹಾರಾಜರಿಗೆ ಮತ್ತು ಪೂರ್ಣ ಗುರು ಪರಂಪರೆಗೆ ವಂದಿಸಲಾಯಿತು.

ಪೂರ್ವಜನ್ಮದ ಅನೇಕಾನೇಕ ಪುಣ್ಯದ ಫಲವಿದ್ದ ಕಾರಣ ಈ ಅಧ್ಯಾಯದ ವಿವೇಚನೆ ಮಾಡುವ ಸೌಭಾಗ್ಯ ದೊರಕಿತೆಂದು ವಿವೇಚಕರು ಅತ್ಯಂತ ಹರ್ಷವನ್ನು ವ್ಯಕ್ತಪಡಿಸಿದರು. ಸ್ವಾಭಾವಿಕವಾಗಿ ವಿವೇಚನೆಯನ್ನು ಹೇಳುವಾಗ ಅದು ಕೇವಲ ಕೇಳುಗರ ಕಿವಿಗಳಿಗೆ ಮಾತ್ರವಲ್ಲದೆ, ಹೇಳುವವರ ಮನದೊಳಗೂ ಪ್ರವೇಶಿಸುತ್ತದೆ. ಎಷ್ಟು ಸಲ ಇದರ ವಿವೇಚನೆ ಮಾಡಿದರೂ ಹೊಸದೊಂದು ಚಿಂತನೆ, ಹೊಸ ಚೈತನ್ಯ ಶಕ್ತಿ ಮನಸ್ಸಿನೊಳಗೆ ಪ್ರವೇಶಿಸುತ್ತದೆ. ಇದನ್ನೇ ಅವರು ಪರಮ ಸೌಭಾಗ್ಯವೆಂದಿದ್ದಾರೆ. ಹಾಗಾಗಿ ಗೀತಾ ಪರಿವಾರದ ನಿಯಮದಂತೆ ನಾವು ವಿವೇಚನೆಯ ರೆಕಾರ್ಡಿಂಗ್ ಗಳನ್ನು ಬಳಸದೇ ಪ್ರತ್ಯಕ್ಷ ವಿವೇಚನೆಯನ್ನು ಮಾಡುತ್ತೇವೆ.

ಈ 16ನೇ ಅಧ್ಯಾಯದ ಹೆಸರೇ ಅದ್ಭುತವಾಗಿದೆ. ದೈವಾಸುರಸಂಪದ್ವಿಭಾಗ ಯೋಗ. ದೈವೀ ಸಂಪತ್ತು ಮತ್ತು ಆಸುರೀ ಸಂಪತ್ತನ್ನು ತಿಳಿಸುವ ಅಧ್ಯಾಯ. ಇದರ ಅವಶ್ಯಕತೆ ಏನಿದೆ? ಭಗವಂತನಿಗೆ ಏಕೆ ಇದನ್ನು ಹೇಳಬೇಕೆಂದು ಅನಿಸಿತು? ಯಾವುದು ದೈವೀ ಗುಣಲಕ್ಷಣಗಳು? ಯಾವುದು ಆಸುರೀ ಗುಣಲಕ್ಷಣಗಳು?

ನಾವುಗಳು ದೇವರೂ ಅಲ್ಲ, ದಾನವರೂ ಅಲ್ಲ. ನಾವು ಮನುಷ್ಯರು. ದೇವರು ಮತ್ತು ದಾನವರ ಮಧ್ಯದವರು. ದೈವತ್ತ್ವದ ಪ್ರಾಪ್ತಿಯಾಗಬೇಕೋ ಅಥವಾ ದಾನವತ್ತ್ವದ ಪ್ರಾಪ್ತಿಯಾಗಬೇಕೋ ಎಂದು ನಾವೇ ನಿರ್ಧರಿಸಬೇಕು. ಯಾಕೆಂದರೆ ನಮ್ಮಲ್ಲಿ ಈ ಎರಡೂ ಗುಣಗಳಿರುತ್ತವೆ. ಬಹಳ ವಿರಳ ಸಾಧು ಸಂತರಲ್ಲಿ ಮಾತ್ರ ಪೂರ್ಣ ದೈವತ್ತ್ವದ ಗುಣಗಳಿರುತ್ತವೆ. ಪ್ರಕೃತಿಯಿಂದ ಜೀವನವನ್ನು ಪಡೆದುಕೊಂಡ ಮಾನವ ಸ್ವಾಭಾವಿಕವಾಗಿಯೇ ಸತ್ತ್ವ, ರಜೋ, ತಮೋ ಗುಣಗಳನ್ನು ಪಡೆದುಕೊಳ್ಳುತ್ತಾನೆ. ಯಾರಲ್ಲಿ ಸತ್ತ್ವ ಗುಣ ಅಧಿಕವಾಗಿರುತ್ತದೆಯೋ, ಅವರು ದೈವೀ ಗುಣಗಳನ್ನು ಹೊಂದಿರುತ್ತಾರೆ. ಯಾರಲ್ಲಿ ತಮೋ ಗುಣಗಳು ಅಧಿಕವಾಗಿರುತ್ತದೆಯೋ ಅವರು ಆಸುರೀ ಗುಣಗಳನ್ನು ಹೊಂದಿರುತ್ತಾರೆ. ಮಾನವ ಜೀವನ ಒಂದು ರಸ್ತೆ ಇದ್ದಂತೆ. ಹೇಗೆ ರಸ್ತೆಯ ಯಾವ ದಿಕ್ಕಿಗಾದರೂ  ಹೋಗಬಹುದೋ ಹಾಗೆಯೇ ನಾವು ದೈವತ್ತ್ವದ ಕಡೆಗೆ ಬೇಕಾದರೂ ಹೋಗಬಹುದು ಅಥವಾ ಆಸುರತ್ತ್ವದ ಕಡೆಗೆ ಬೇಕಾದರೂ ಹೋಗಬಹುದು. ಆದರೆ ನಮಗೆ ಏನಾದರು ಕೆಡುಕು ಉಂಟಾದರೆ ಅದನ್ನು ಭಗವಂತನೇ ಮಾಡಿದನೆಂದು ಅಜ್ಞಾನದಿಂದ ಹೇಳುತ್ತೇವೆ. ಆದರೆ ಅದು ಹಾಗಲ್ಲ. ನಾವು ಈಗಾಗಲೇ 15ನೇ ಅಧ್ಯಾಯದಲ್ಲಿ ನೋಡಿದ್ದೇವೆ. ಆ ಪುರುಷೋತ್ತಮ ಪರಮಾತ್ಮ ನಮ್ಮೊಳಗೆ ಆತ್ಮ ರೂಪದಲ್ಲಿ ವಾಸವಾಗಿದ್ದಾನೆ. ಆತ್ಮವೆಂಬುದು ಆ ಪರಮಾತ್ಮನಿಂದ ಬಂದ ಅಂಶವಾಗಿದೆ. ಪಂಚಭೂತಗಳನ್ನು ಒಳಗೊಂಡ ಈ ದೇಹ ಪ್ರಕೃತಿಯಿಂದ ಪ್ರಾಪ್ತವಾಗಿದೆ. ನಮ್ಮ ಮರಣದ ನಂತರ ನಮ್ಮ ದೇಹವನ್ನು ಪ್ರಕೃತಿಯಲ್ಲಿಯೇ ವಿಲೀನ ಮಾಡಿ ಬಿಡಲಾಗುತ್ತದೆ. ಶರೀರವನ್ನು ಸುಡಬಹುದು, ಹೂಳಬಹುದು ಅಥವಾ ನೀರಿನಲ್ಲಿ ಪ್ರವಹಿಸಬಹುದು. ಪ್ರಕೃತಿಯಿಂದ, ಪಂಚಭೂತಗಳೊಂದಿಗೆ ಮನ, ಬುದ್ಧಿ, ಅಹಂಕಾರವು ಲಭಿಸಿರುತ್ತವೆ. ಬುದ್ಧಿಯದೇ ಒಂದು ಭಾಗವಾದ ವಿವೇಕದಿಂದ ನಾವು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಆ ನಿರ್ಣಯ ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ಅದು ನಮ್ಮದೇ ಹೊಣೆಗಾರಿಕೆಯಾಗಿರುತ್ತದೆ. 

ದೈವಾಸುರಸಂಪದ್ವಿಭಾಗದ ಚಿಂತನೆ ಮಾಡುವಾಗ ಸ್ವಾಭಾವಿಕವಾಗಿಯೇ ನಮ್ಮೊಳಗೆ ಒಂದು ಆತ್ಮ ಮಂಥನ ನಡೆಯುತ್ತದೆ. ನಮ್ಮೊಳಗೆ  ದೈವೀ ಗುಣಗಳು ಹೆಚ್ಚಿವೆಯೋ ಅಥವಾ ಆಸುರೀ ಗುಣಗಳು ಹೆಚ್ಚಿವೆಯೋ ಎಂದು ವಿಶ್ಲೇಷಿಸಿಕೊಳ್ಳುತ್ತೇವೆ. ಇದು ಒಂದು ಸ್ವಪರೀಕ್ಷೆ ಮಾಡಿಕೊಳ್ಳಲು ಇರುವ ಅಧ್ಯಾಯವಾಗಿದೆ.

ಇತ್ತೀಚೆಗೆ ವಿವೇಚಕರು ತಾವು ಓದಿದ ವಿಜ್ಞಾನಭೈರವ ತಂತ್ರ ಎಂಬ ಯೋಗಶಾಸ್ತ್ರದ ಒಂದು ವಿಶೇಷ ಪುಸ್ತಕದ ಬಗ್ಗೆ ಮಾಹಿತಿಯನ್ನು ನೀಡಿದರು. ವಿಜ್ಞಾನ ಭೈರವ ತಂತ್ರದಲ್ಲಿ 112 ಸೂತ್ರಗಳನ್ನು ಹೇಳಲಾಗಿವೆ. ಇದನ್ನು ಭೈರವ (ಶಿವ), ಭೈರವಿಗೆ (ಪಾರ್ವತಿ) ಹೇಳಿದನು. ಭಗವಾನ್ ಶಿವನನ್ನು ಆದಿ ಯೋಗಿ ಎನ್ನಲಾಗುತ್ತದೆ. ಶಿವನ ತಾಂಡವದಿಂದಲೇ ಯೋಗದ ಉತ್ಪತ್ತಿಯಾಯಿತು ಎಂದು ಹೇಳಲಾಗುತ್ತದೆ. ಅವನ ತಾಂಡವದ ವಿವಿಧ ಭಂಗಿಗಳನ್ನು ನೋಡಿ ಭಗವಂತ ಕ್ರೋಧಿತನಾಗಿದ್ದಾನೆಂದು ಭಾವಿಸುತ್ತೇವೆ. ಪ್ರಳಯಕ್ಕೆ ಕಾರಣಕರ್ತ ಶಿವ. ಸೃಷ್ಟಿಯ ಉಗಮಕರ್ತ ಬ್ರಹ್ಮ, ಪಾಲನಾ ಕರ್ತ ವಿಷ್ಣು. ಈ ಮುಕ್ಕಣ್ಣ ಯಾವ ಸಮಯದಲ್ಲಿ ತನ್ನ ಮೂರನೇ ಕಣ್ಣನ್ನು ತೆರೆದು ಪ್ರಳಯವನ್ನು ತಂದನು? ಕಾಮದೇವನನ್ನು ಸುಡಲಿಕ್ಕಾಗಿ ಮೂರನೇ ಕಣ್ಣನ್ನು ತೆರೆದನು. ನಮ್ಮಲ್ಲಿರುವ ಅರಿಷಡ್ವರ್ಗಗಳಲ್ಲಿ ಕಾಮವೂ ಒಂದು. (ಷಡ್ = 6, ರಿಪು = ವೈರಿ. ಷಡ್ ರಿಪು ಎಂದರೆ ಆರು ವೈರಿಗಳು, ಅವೇ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ.) ಇವುಗಳನ್ನು ಸಂಹರಿಸುವುದಕ್ಕಾಗಿ ಶಿವನು ತನ್ನ ಮೂರನೇ ಕಣ್ಣನ್ನು ತೆರೆದನು. ಉಳಿದ ಕ್ಷಣಗಳಲ್ಲಿ ಅವನು ಅಭಯಂಕರನು. ತಾಂಡವ ಮಾಡುವಾಗ ಅವನು ನಟರಾಜನಾಗಿರುತ್ತಾನೆ. ನಟರಾಜನೆಂದರೆ ನಟನೆಯ ರಾಜ. ಅವನು ಕ್ರೋಧಿಸಿಕೊಳ್ಳದೆ, ಕ್ರೋಧದ ನಟನೆ ಮಾಡುತ್ತಿರುತ್ತಾನೆ. ಹೇಗೆ ತಾಯಿ ತನ್ನ ಮಗುವನ್ನು ಗದರಿಸುತ್ತಾಳೋ ಹಾಗೆ. ತಾಯಿ ಕ್ರೋಧ ಹೊಂದಿದ್ದಾಳೆ ಎಂದು ಹೆದರಿ ಮಗು ತನ್ನ ತಪ್ಪನ್ನು ಅರಿತು, ತಪ್ಪನ್ನು ತಿದ್ದಿಕೊಳ್ಳುತ್ತದೆ. ಭಗವಂತನ ತಾಂಡವ ರೂಪದಲ್ಲಿಯೂ ಅವನ ಒಂದು ಕೈ ಅಭಯ ಮುದ್ರೆಯಲ್ಲಿಯೇ ಇರುತ್ತದೆ.

12ನೇ ಅಧ್ಯಾಯದಲ್ಲಿ ಭಕ್ತನ ಲಕ್ಷಣಗಳನ್ನು ನೋಡಿದೆವು. ಭಕ್ತ ಎಂದರೆ ಯಾರು? ಯಾರು ವಿಭಕ್ತನಲ್ಲವೋ, ಅವನೇ ಭಕ್ತ. ( ವಿಭಕ್ತನೆಂದರೆ ನಾನು ಮತ್ತು ಭಗವಂತ ಬೇರೆಯಲ್ಲ ಎನ್ನುವ ಭಾವ). 

16ನೇ ಅಧ್ಯಾಯದ ಮೊದಲ ಮೂರು ಶ್ಲೋಕಗಳಲ್ಲಿ ಭಗವಂತನು ದೈವೀ ಗುಣಗಳನ್ನು ಹೇಳಿದ್ದಾನೆ.

16.1

ಶ್ರೀಭಗವಾನುವಾಚ
ಅಭಯಂ(ಮ್) ಸತ್ತ್ವಸಂಶುದ್ಧಿಃ(ರ್), ಜ್ಞಾನಯೋಗವ್ಯವಸ್ಥಿತಿಃ |
ದಾನಂ(ನ್) ದಮಶ್ಚ ಯಜ್ಞಶ್ಚ, ಸ್ವಾಧ್ಯಾಯಸ್ತಪ ಆರ್ಜವಮ್ ।।16.1।।

ಶ್ರೀ ಭಗವಂತನು ಹೇಳಿದನು - ಭಯದ ಸರ್ವಥಾ ಅಭಾವ, ಅಂತಃಕರಣದ ಪೂರ್ಣ ನಿರ್ಮಲತೆ, ತತ್ವಜ್ಞಾನಕ್ಕಾಗಿ ಧ್ಯಾನಯೋಗದಲ್ಲಿ ನಿರಂತರ ದೃಢವಾದ ಸ್ಥಿತಿ ಮತ್ತು ಸಾತ್ವಿಕದಾನ, ಇಂದ್ರಿಯಗಳ ದಮನ, ಭಗವಂತನ, ದೇವತೆಗಳ ಮತ್ತು ಗುರುಜನರ ಪೂಜೆ ಹಾಗೂ ಅಗ್ನಿಹೋತ್ರಾದಿ ಉತ್ತಮ ಕರ್ಮಗಳ ಆಚರಣೆ, ವೇದ - ಶಾಸ್ತ್ರಗಳ ಪಠನ - ಪಾಠನ, ಭಗವಂತನ ನಾಮ ಮತ್ತು ಗುಣಗಳ ಕೀರ್ತನೆ, ಶರೀರ ಇಂದ್ರಿಯಗಳ ಸಹಿತವಾಗಿ ಅಂತಃಕರಣದ ಸರಳತೆ ಮತ್ತು ಸ್ವಧರ್ಮ ಪಾಲನೆಗಾಗಿ ಕಷ್ಟವನ್ನು ಸಹಿಸುವುದು.

16.1 writeup

16.2

ಅಹಿಂಸಾ ಸತ್ಯಮಕ್ರೋಧಃ(ಸ್), ತ್ಯಾಗಃ(ಶ್) ಶಾಂತಿರಪೈಶುನಮ್ |
ದಯಾ ಭೂತೇಷ್ವಲೋಲುಪ್ತ್ವಂ(ಮ್), ಮಾರ್ದವಂ(ಮ್) ಹ್ರೀರಚಾಪಲಮ್।।16.2।।

ಮನಸ್ಸು, ಮಾತು ಮತ್ತು ಶರೀರದಿಂದ ಯಾರಿಗೂ ಯಾವ ಪ್ರಕಾರವಾಗಿಯೂ ಕಷ್ಟಕೊಡದಿರುವುದು, ಯಥಾರ್ಥ ಮತ್ತು ಪ್ರಿಯವಾಗಿ ಮಾತನಾಡುವುದು, ತನಗೆ ಅಪಕಾರ ಮಾಡಿದವರ ಮೇಲೆಯೂ ಕೋಪಿಸದಿರುವುದು, ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನವನ್ನು ತ್ಯಜಿಸುವುದು, ಅಂತಃಕರಣದ ಉಪರತಿ ಅರ್ಥಾತ್ ಚಿತ್ತಚಾಂಚಲ್ಯದ ಅಭಾವ, ಯಾರನ್ನೂ ನಿಂದಿಸದಿರುವುದು, ಎಲ್ಲ ಪ್ರಾಣಿಗಳಲ್ಲಿ ಕಾರಣರಹಿತವಾದ ದಯೆ, ಇಂದ್ರಿಯಗಳು ವಿಷಯಗಳೊಡನೆ ಸಂಯೋಗವಾದಾಗಲೂ ಅದರಲ್ಲಿ ಆಸಕ್ತರಾಗದಿರುವಿಕೆ, ಕೋಮಲತೆ, ಲೋಕ ಮತ್ತು ಶಾಸ್ತ್ರಕ್ಕೆ ವಿರುದ್ಧವಾಗ ಆಚರಣೆಯಲ್ಲಿ ಲಜ್ಜೆ ಮತ್ತು ವ್ಯರ್ಥವಾದ ಚೇಷ್ಟೆಯ ಅಭಾವ.

16.2 writeup

16.3

ತೇಜಃ(ಹ್) ಕ್ಷಮಾ ಧೃತಿಃ(ಶ್) ಶೌಚಮ್, ಅದ್ರೋಹೋ ನಾತಿಮಾನಿತಾ |
ಭವಂತಿ ಸಂಪದಂ(ನ್) ದೈವೀಮ್, ಅಭಿಜಾತಸ್ಯ ಭಾರತ ।।16.3।।

ತೇಜಸ್ಸು, ಕ್ಷಮೆ, ಧೈರ್ಯ, ಬಾಹ್ಯಶುದ್ಧಿ, ಹಾಗೂ ಯಾರಲ್ಲಿಯೂ ಶತ್ರುಭಾವವಿಲ್ಲದಿರುವುದು ಮತ್ತು ತನ್ನಲ್ಲಿ ಪೂಜ್ಯತೆಯ ಅಭಿಮಾನದ ಅಭಾವವು - ಹೇ ಅರ್ಜುನಾ ! ಇವೆಲ್ಲಾ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣವಾಗಿವೆ.

ಹೇ ಭರತವಂಶಿ! ಈಗ ನಾನು ಈ ದೈವೀ ಗುಣ ಸಂಪದಗಳ ಬಗ್ಗೆ ಹೇಳುತ್ತೇನೆ. ಯಾರು ಇದನ್ನು ಧಾರಣೆ ಮಾಡುತ್ತಾರೋ ಅವರು ಭಕ್ತರ ಪಂಕ್ತಿಯಲ್ಲಿ ಇರುತ್ತಾರೆ. 26 ದೈವೀ ಗುಣ ಸಂಪತ್ತುಗಳಿವೆ. ಈ 26 ದೈವೀ ಗುಣಗಳು ನಮ್ಮಲ್ಲಿ ಇದ್ದರೆ ನಾವು ಸತ್ತ್ವ ಗುಣಿಗಳಾಗಿರುತ್ತೇವೆ.

ದೈವೀ ಗುಣಗಳಲ್ಲಿ ಮೊದಲಿಗೆ ಇರುವುದು ಅಭಯ.
ಅಭಯ : ಹೆದರದೇ ಇರುವುದು. ಯಾವಾಗ ನಮ್ಮಲ್ಲಿ ಒಳಗೊಂದು ಸ್ವಭಾವವಿದ್ದು ಹೊರಗೆ ಇನ್ನೊಂದು ಸ್ವಭಾವವನ್ನು ಪ್ರದರ್ಶಿಸುತ್ತೇವೆಯೋ ಆಗ ನಾವು ಹೆದರುತ್ತೇವೆ. ಉದಾಹರಣೆಗೆ ಒಬ್ಬ ಬಾಲಕನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ತಾಯಿಗೆ ಹೆದರಿ ಫಲಿತಾಂಶ ಚೆನ್ನಾಗಿ ಬಂದಿದೆ ಎಂದು ಹೇಳುತ್ತಾನೆ. ಆದರೆ ಆ ಬಾಲಕ ತಾಯಿಯ ಕಣ್ಣಿನಲ್ಲಿ ಕಣ್ಣಿಟ್ಟು ಸತ್ಯ ಹೇಳಲಾಗುವುದಿಲ್ಲ. ಆಗ ಆ ಬಾಲಕ ಹೆದರಿರುತ್ತಾನೆ. ನಮ್ಮ ಸ್ವಭಾವದಂತೆ ನಾವು ಕೆಲಸವನ್ನು ಮಾಡಬೇಕು. ಹಾಗೆ ಮಾಡಿದಾಗ ಸಿದ್ಧಿಯು ಪ್ರಾಪ್ತಿಯಾಗುತ್ತದೆ.

ಒಬ್ಬ ಚಿತ್ರಕಾರ ಚಿತ್ರ ಬಿಡಿಸಲು ತನ್ನನ್ನು ತಾನು ಆ ಕಾರ್ಯದಲ್ಲಿ ತಲ್ಲೀನನಾಗಿಸಿಕೊಳ್ಳಬೇಕು. ಆಗ ಮಾತ್ರ ಸುಂದರ ಚಿತ್ರವೊಂದು ಮೂಡಲು ಸಾಧ್ಯವಾಗುತ್ತದೆ. ಇದನ್ನೇ ಯೋಗವೆನ್ನುವುದು. ಯೋಗ ಎಂದರೆ ಜೋಡಿಸುವುದು ಎಂದರ್ಥ. ಮಾಡುವ ಕಾರ್ಯದೊಂದಿಗೆ ಏಕಾಕಾರವಾಗುವುದು. ಏಕಾಕಾರವಾದಾಗ ಏಕಾಗ್ರತೆ ಉಂಟಾಗುತ್ತದೆ. ನಮ್ಮ ಮನಸ್ಸು ಮತ್ತು ಬುದ್ಧಿ ಎರಡನ್ನು ಜೋಡಿಸಿಕೊಂಡಾಗ ಯೋಗವೆಂದೆನಿಸಿಕೊಳ್ಳುತ್ತದೆ.
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ ।
ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ ll (12.14)

ಯಾರು ನನ್ನಲ್ಲಿ ಮನಸ್ಸು ಮತ್ತು ಬುದ್ಧಿಯನ್ನು ಅರ್ಪಿಸಿ ಕೆಲಸ ಮಾಡುತ್ತಾರೋ ಅವರು ನನ್ನನ್ನು ಹೊಂದುತ್ತಾರೆ ಎಂದು ಭಗವಂತನೇ ಹೇಳಿದ್ದಾನೆ. ಭಗವಂತನನ್ನು ಹೊಂದಿದರೆ ಗೆಲುವನ್ನೇ ಹೊಂದಿದಂತೆ. ಅರ್ಜುನನನ್ನು ಗೆಲ್ಲಿಸುವುದಕ್ಕಾಗಿಯೇ ಭಗವಂತನು ಭಗವದ್ಗೀತೆಯನ್ನು ಬೋಧಿಸಿದನು. ಯಾರು ವಿಜಯವನ್ನು ಹೊಂದಲು ಬಯಸುತ್ತಾರೋ ಅವರು, ತಮ್ಮ ಮನ ಮತ್ತು ಬುದ್ಧಿಯನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳಲೇಬೇಕು. ವಿದ್ಯಾರ್ಥಿಯೊಬ್ಬ ಅಧ್ಯಾಪಕರು ಹೇಳುವ ಪಾಠವನ್ನು ಮನಸಿಟ್ಟು, ತನ್ನ ಬುದ್ಧಿಯನ್ನು ಸ್ಥಿರವಾಗಿ ಇಟ್ಟುಕೊಂಡು ಕೇಳಿಸಿಕೊಂಡಾಗ ಉತ್ತಮ ಅಂಕಗಳು ಲಭಿಸುತ್ತವೆ. ಅದೇ ವಿದ್ಯಾರ್ಥಿ ತರಗತಿಯಲ್ಲಿ ಕುಳಿತು ಬೋರ್ಡನ್ನು ನೋಡುತ್ತಾ ಮನಸ್ಸುನ್ನು ಬೇರೆಡೆಗೆ ಹರಿಸಿದರೆ ಆ ವಿದ್ಯಾರ್ಥಿಗೆ ಉತ್ತಮ ಅಂಕಗಳು ಲಭಿಸುವುದಿಲ್ಲ.

ಸತ್ತ್ವ ಸಂಶುದ್ಧಿ : ಸಮ್ಯಕ್ ಶುದ್ದಿ. ಶುದ್ಧಿ ಎಂದರೆ ಶುಚಿತ್ವ. ಶುಚಿತ್ವ ಎಂದರೆ ಕೇವಲ ಸ್ನಾನ ಮಾಡಿ, ಒಂದು ಗಂಟೆ ದೇವರ ಬಳಿ ಕೂರುವುದು ಎಂದಲ್ಲ. ಕೇವಲ ಸ್ನಾನವಷ್ಟೇ ಅಲ್ಲದೆ ಅಂತರ್ಬಾಹ್ಯವಾಗಿ ಶುಚಿಯಾಗಿರುವುದು, ಪವಿತ್ರವಾಗಿರುವುದು. ಶರೀರದ ಶುದ್ಧಿಯ ಜೊತೆಗೆ ಮನಸ್ಸಿನ ವಿಚಾರಗಳ ಶುದ್ಧಿಯೂ ಅಗತ್ಯ. ವಿಚಾರಗಳಿಂದಲೇ ವಿಕಾರಗಳು ಉಂಟಾಗುತ್ತವೆ. ನಮ್ಮ ಮನಸ್ಸಿನಲ್ಲಿ ವಿಚಾರಗಳ ಮಹಾಪೂರವೇ ಹರಿಯುತ್ತಿರುತ್ತವೆ. ಎಲ್ಲ ವಿಚಾರಗಳು ಒಟ್ಟಿಗೆ ನಮ್ಮ ಮನಸ್ಸಿಗೆ ಪ್ರವೇಶಿಸುತ್ತದೆ ಎಂದು ನಮಗೆ ಅನಿಸುತ್ತದೆ. ಆದರೆ ಅದು ಹಾಗೆ ಆಗುವುದಿಲ್ಲ. ಒಂದು ವಿಚಾರ ಮನಸ್ಸಿನಿಂದ ಹೊರಬಂದ ನಂತರ ಇನ್ನೊಂದು ವಿಚಾರ ಒಳ ಹೋಗುತ್ತದೆ. ಫ್ಯಾನನ್ನು ಐದರ ಸ್ಪೀಡಿನಲ್ಲಿ ಇಟ್ಟಾಗ ಫ್ಯಾನಿಗೆ ಹಲವಾರು ರೆಕ್ಕೆಗಳಿವೆ ಎಂಬಂತೆ ತೋರುತ್ತದೆ. ಆದರೆ ಅದಕ್ಕೆ ಮೂರು ಅಥವಾ ನಾಲ್ಕು ರೆಕ್ಕೆಗಳು ಮಾತ್ರ ಇರುತ್ತವೆ. ಎಲ್ಲಿಯವರೆಗೆ ಮನಸ್ಸು ವಿಚಾರ ಶೂನ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಭಗವಂತ ಒಳಬರುವುದಿಲ್ಲ. ವಿಚಾರದಲ್ಲಿ ನಾನು ಎಂಬ ಭಾವನೆ ಇರುತ್ತದೆಯೋ, ಎಲ್ಲಿಯವರೆಗೆ ನಾನು ಎಂಬ ಭಾವವಿರುತ್ತದೆಯೋ ಅಲ್ಲಿಯವರೆಗೆ ಭಗವಂತನು ಒಳಬರುವುದಿಲ್ಲ. ಒಮ್ಮೆ ಭಗವಂತನು ಪ್ರವೇಶಿಸಿದನೆಂದರೆ ನಾನು ಎಂಬುದು ಇರುವುದಿಲ್ಲ. ಸತ್ತ್ವ ಸಂಶುದ್ಧಿಯಲ್ಲಿ ದೇಹ ಶುದ್ಧಿ, ಮನಸ್ಸಿನ ಶುದ್ಧಿ, ವಿಚಾರ ಶುದ್ಧಿಗಳು ಸೇರಿಕೊಂಡಿವೆ.

ಜ್ಞಾನ ಯೋಗ ವ್ಯವಸ್ಥಿತಿಃ :
ಯೋಗ ಮತ್ತು ಜ್ಞಾನವನ್ನು ಪ್ರಾಪ್ತಗೊಳಿಸಿಕೊಳ್ಳಲು ಬೇಕಾದ ದಿನಚರಿಯೇ ಜ್ಞಾನ ಯೋಗ ವ್ಯವಸ್ಥಿತಿಃ. ಬ್ರಹ್ಮ ಮುಹೂರ್ತದಲ್ಲಿ ಏಳುವುದು, ಎದ್ದ ಮೇಲೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು, ಈ ಹೊಸ ದಿನ ದೊರಕಿದ್ದಕ್ಕಾಗಿ, ಅವನ ಭಕ್ತಿ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ, ಕೃತಜ್ಞತೆಯನ್ನು ಅರ್ಪಿಸಬೇಕು. ಅವನಿಗೋಸ್ಕರ ಕರ್ಮಗಳನ್ನು ಕೈಗೊಂಡು ಅದರ ಕರ್ಮಫಲವನ್ನು ಅವನಿಗೆ ಅರ್ಪಿಸಬೇಕು. ಈ ಭಾವನೆ ನಮ್ಮನ್ನು ಶುದ್ಧವಾಗಿಸುತ್ತದೆ. ನಂತರ ಯೋಗ, ಪ್ರಾಣಾಯಾಮವನ್ನು ಮಾಡಿ ಧ್ಯಾನ ಮಾಡಬೇಕು. ನಂತರ ಪೂಜೆ ಅರ್ಚನೆಗಳನ್ನು ಮಾಡಬೇಕು. ಮನೆಯಲ್ಲಿ ಈ ಭಾವದಲ್ಲಿದ್ದು ಹೊರಗಿನ ಪ್ರಪಂಚಕ್ಕೆ ಹೋದ ತಕ್ಷಣ ಜಗಳ ಮಾಡುವುದು, ದ್ವೇಷ ಮಾಡುವುದು ಮಾಡಬಾರದು. ಮನೆಯಲ್ಲಿ  ರಾಮ, ರಾಮ ಎಂದು ಧ್ಯಾನಿಸಿದ ಹಾಗೆ ಹೊರಗಿನ ಪ್ರಪಂಚದಲ್ಲೂ ಅದೇ ಭಾವವಿರಬೇಕು. ನಾವು ಮಾಡುವ ಕಾರ್ಯದಿಂದಾಗಿ ಇನ್ನೊಬ್ಬರನ್ನು ಮೋಸಗೊಳಿಸಬಾರದು. ಜ್ಞಾನವೆಂದರೆ ಪುಸ್ತಕ ಓದುವುದರಿಂದ ಬರುವುದಿಲ್ಲ. ಬೇರೆಯವರಿಂದ ಕೇಳುವ ವ್ಯಾಖ್ಯಾನ, ಪ್ರವಚನಗಳಿಂದಲೂ ಬರುವುದಿಲ್ಲ. ಹೊರಗಿನಿಂದ ಬರುವುದೆಲ್ಲವನ್ನು ವಿಜ್ಞಾನವೆನ್ನುತ್ತೇವೆ. ವಿವೇಚಕರ ಮಾತು ನಮ್ಮ ಕಿವಿಗಳನ್ನು ತಲುಪುತ್ತದೆ. ಅದು ವಿಜ್ಞಾನವೇ. ನಮ್ಮೊಳಗಿನಿಂದ ವಿಷಯ ಪ್ರಸ್ಪುಟಿತಗೊಂಡರೆ, ಅದನ್ನು ನಮ್ಮ ಅನುಭವದಿಂದ ಅರಿತರೆ, ಅದೇ ನಿಜವಾದ ಜ್ಞಾನ. ನಮ್ಮಲ್ಲಿ ಹಲವಾರು ಸಾಧುಸಂತರಿಗೆ ವೃಕ್ಷದ ಕೆಳಗೆ ಧ್ಯಾನಸ್ತರಾಗಿದ್ದಾಗ ಜ್ಞಾನದ ಪ್ರಾಪ್ತಿಯಾಗಿದೆ. ಗೌತಮ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನದ ಪ್ರಾಪ್ತಿಯಾಯಿತು. ನಾನು ಯಾರು? ಎಂಬ ಪ್ರಶ್ನೆಗೆ ತನ್ನ ಅಂತರಾತ್ಮದ ದ್ವಾರ ತೆರೆದು ನಾನೇ ಆ ಭಗವತ್ ತತ್ತ್ವವೆಂದು ಉತ್ತರವನ್ನು ಕಂಡುಕೊಂಡನು.

ಒಂದು ಕೋಣೆಯಲ್ಲಿ ಒಂದು ಘಟವಿದೆ ಎಂದು ಭಾವಿಸೋಣ. ಆ ಘಟದ ಆಕಾಶವು, ಆ ಕೋಣೆಯ ಆಕಾಶವು ಬೇರೆ ಬೇರೆ ಎಂದು ಭಾಸವಾಗುತ್ತದೆ. ಆದರೆ ಘಟ ಒಡೆದುಹೋದರೆ ಘಟದ ಆಕಾಶ ಕೋಣೆಯ ಆಕಾಶದೊಂದಿಗೆ ಸೇರಿ ಹೋಗುತ್ತದೆ.

ಪುರಾತನ ಕಾಲದಿಂದಲೂ ಜ್ಞಾನವೆನ್ನುವುದು ಬದಲಾಗಿಲ್ಲ, ಆದರೆ ವಿಜ್ಞಾನ ಬದಲಾಗುತ್ತಿರುತ್ತದೆ. ಹಿಂದಿನ ದಿನಗಳಲ್ಲಿ ಭೂಮಿ ಚಪ್ಪಟೆಯಾಗಿದೆ ಎಂದು ಹೇಳಲಾಗಿತ್ತು. ನಂತರ ಭೂಮಿ ವೃತ್ತಾಕಾರವಾಗಿದೆ ಎನ್ನಲಾಯಿತು. ತದನಂತರ ಅದನ್ನು ಅಲ್ಲಗಳೆದು ಭೂಮಿ ಗೋಳಾಕಾರವಾಗಿದೆ ಎನ್ನಲಾಯಿತು. ವಿಜ್ಞಾನ ಹೀಗೆ ಬದಲಾಗುತ್ತಿರುತ್ತದೆ.

ಮೊದಲಿನ ದಿನಗಳಲ್ಲಿ ಸ್ಥಿರ ದೂರವಾಣಿಗಳಿದ್ದವು. ನಂತರ ಮೊಬೈಲ್ ಬಳಕೆಯನ್ನು ಕಂಡುಕೊಳ್ಳಲಾಯಿತು. ಅದರಲ್ಲಿ 1ಜಿ, 2ಜಿ, 3ಜಿ,.... 5ಜಿ ಹೀಗೆ ಹೆಚ್ಚುತ್ತಲೇ ಇದೆ. ವಿಜ್ಞಾನ ಬದಲಾಗುತ್ತದೆ. ಆದರೆ ಜ್ಞಾನ ಸನಾತನವಾದದ್ದು. ಭಗವದ್ಗೀತೆಯು ಸನಾತನವೇ. ಹಲವು ಸಹಸ್ರ ವರ್ಷಗಳ ಹಿಂದೆ ಹೇಳಿದ ಶ್ಲೋಕಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಅಂದರೆ ಜ್ಞಾನ ಪರಿವರ್ತನೆ ಹೊಂದುವುದಿಲ್ಲ. ಜ್ಞಾನ ಮತ್ತು ಯೋಗವನ್ನು ಪಡೆಯಲು ಬೇಕಾದ ಅವಶ್ಯಕತೆಯನ್ನು ನಿರ್ಮಿಸಿಕೊಳ್ಳಲು ನಮ್ಮ ದಿನಚರಿಯನ್ನು ರೂಪುಗೊಳಿಸಿ ಕೊಳ್ಳಬೇಕು.

ದಾನ ಮಾಡುವುದು, ದಮನ ಮಾಡುವುದು, ಯಜ್ಞ ಮಾಡುವುದು - ಈ ಮೂರು ಗುಣಗಳು ಸಹ ದೈವೀ ಸಂಪತ್ತುಗಳಾಗಿವೆ.

ದಾನ ಮಾಡುವುದು :
ದಾನ ಮಾಡುವುದು ಎಂದರೆ ಕೇವಲ ಹಣವನ್ನು ಕೊಡುವುದು ಎಂದಲ್ಲ. ದ್ರವ್ಯ ದಾನ, ಜ್ಞಾನ ದಾನ, ಯೋಗದ ವಿಷಯವನ್ನು ತಿಳಿಸುವುದು, ರಕ್ತದಾನ, ಅನ್ನದಾನ, ಶ್ರಮದಾನ, ಸಮಯದಾನ, ಹೀಗೆ ಹಲವಾರು ಬಗೆಯ ದಾನಗಳಿವೆ. ಬಹಳ ಮಹತ್ತ್ವಪೂರ್ಣವಾದ ದಾನವೆಂದರೆ ಶ್ರೇಯೋ ದಾನ. ನಾನೇನು ಮಾಡಲಿಲ್ಲ, ಎಲ್ಲಾ ಭಗವಂತನ ಕೃಪೆ ಎನ್ನುವ ಭಾವ. ಬೇರೆಯವರು ಮಾಡಿದ ಕಾರ್ಯವನ್ನು ನಾನೇ ಮಾಡಿದೆ ಎಂದು ಹೇಳಿದರೆ ಅದು ಆಸುರೀ ಗುಣವಾಗುತ್ತದೆ. ಸೊಸೆ ಮಾಡಿದ ಸೇವೆಯನ್ನು ಅವಳ ತಾಯಿಗೆ ಕರೆ ಮಾಡಿ ನಿಮ್ಮ ಮಗಳಿಗೆ ಎಂಥ ಒಳ್ಳೆಯ ಸಂಸ್ಕಾರ ಕೊಟ್ಟಿದ್ದೀರಿ. ನಮ್ಮ ಸೇವೆಯನ್ನು ಅವಳು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾಳೆ ಎಂದು ಹೇಳಿದಾಗ ಆ ತಾಯಿಗೂ ಸಂತೋಷವಾಗುತ್ತದೆ. ಸಂಬಂಧ ಗಟ್ಟಿಯಾಗಿರುತ್ತದೆ.

ದಮನ ಮಾಡುವುದು:
ದಮನ ಎಂಬುದು ಕ್ಷಣಿಕವಾಗಿರುತ್ತದೆ. ಆಲಸ್ಯವನ್ನು ದಮನ ಮಾಡಬೇಕು. ಬೆಳಗ್ಗೆ 5:00 ಗಂಟೆಗೆ ಏಳಲು  ಅಲಾರಾಮ್ ಅನ್ನು ಇಟ್ಟು, ಅದು ಬೆಳಗ್ಗೆ ಹೊಡೆದು ಕೊಂಡಾಗ ಆಲಸ್ಯದ ಮೇಲೆ ವಿಜಯವನ್ನು ಪಡೆಯಲು ಆ ಆಲಸ್ಯವನ್ನು ದಮನ ಮಾಡಲೇಬೇಕು. ನಾಲ್ಕು ದಿನ ಆಲಸ್ಯವನ್ನು ದಮನ ಮಾಡಿದರೆ, ಐದನೇ ದಿನ ತಾನಾಗೆ 5:00ಗೆ ಎದ್ದುಬಿಡಬಹುದು. ಪ್ರಾರಂಭದಲ್ಲಿ ಮಾಡಿದ ಈ ದಮನ, ನಂತರ ಒಳ್ಳೆಯ ಅಭ್ಯಾಸವನ್ನು ನಮ್ಮಲ್ಲಿ ರೂಢಿಸುತ್ತದೆ. ಹಾಗಾಗಿ ದಮನವನ್ನು ದೈವೀ ಗುಣ ಎನ್ನಲಾಗಿದೆ.

ಯಜ್ಞ ಮಾಡುವುದು :
ನಿಸ್ವಾರ್ಥಭಾವದಿಂದ  ಅರ್ಪಿಸುವುದೇ ಯಜ್ಞ. ವಾಣಿಯ ಯಜ್ಞ (ನಾನು ಹೇಗೆ ಮಾತನಾಡುತ್ತಿದ್ದೇನೆ), ವಿಚಾರ ಯಜ್ಞ (ನಾನು ಯಾವ ಆಲೋಚನೆಗಳನ್ನು ಇಟ್ಟುಕೊಂಡಿದ್ದೇನೆ). ಯಜ್ಞ ವೆಂದರೆ ಕೇವಲ ಆಹುತಿಯನ್ನು ಕೊಡುವುದಲ್ಲ. ಯಜ್ಞದಲ್ಲಿ ಹಲವಾರು ಪ್ರಕಾರಗಳಿವೆ. ಭೋಜನ ಮಾಡುವುದು ಸಹ ಒಂದು ಪ್ರಕಾರದ ಯಜ್ಞ. ನಮ್ಮ ದೇಹ ನಿರೋಗಿಯಾಗಿ, ಸದೃಢವಾಗಿರಲೆಂದು ಜಠರಾಗ್ನಿಗೆ ಆಹುತಿಯನ್ನು ಕೊಡುತ್ತೇವೆ. ದೇವರಿಗೂ ನೈವೇದ್ಯ ಅರ್ಪಿಸುವಾಗ ಯೋಚಿಸಿ, ಯೋಗ್ಯವಾದದ್ದನ್ನು ಅರ್ಪಿಸುತ್ತೇವೆ. ಈರುಳ್ಳಿ, ಬೆಳ್ಳುಳ್ಳಿ ಅಥವಾ ಮಾಂಸಹಾರವನ್ನು ಅರ್ಪಿಸುವುದಿಲ್ಲ. ಸಾತ್ವಿಕವಾದ ಆಹಾರವನ್ನೇ ಅರ್ಪಿಸುತ್ತೇವೆ. ನಮ್ಮ ಋಷಿಮುನಿಗಳು ಹೇಳಿದಂತೆ, ನಮ್ಮ ಭೋಜನ ಹೇಗಿರುತ್ತದೆಯೋ ನಮ್ಮ ಮನಸ್ಸು ಹಾಗೆ ಇರುತ್ತದೆ. ತಾಮಸಿ ಆಹಾರ ಸ್ವೀಕರಿಸಿದರೆ ಮನಸ್ಸು ತಾಮಸಿ ಆಗಿರುತ್ತದೆ. ರಾಜಸೀ ಆಹಾರ ಮನಸ್ಸನ್ನು ರಾಜಸಿಯನ್ನಾಗಿ ಮಾಡುತ್ತದೆ. ಸಾತ್ತ್ವಿಕ ಆಹಾರ ನಮ್ಮನ್ನು ಸಾತ್ತ್ವಿಕರನ್ನಾಗಿ ಮಾಡುತ್ತದೆ. 17ನೇ ಅಧ್ಯಾಯದಲ್ಲಿ ಆಹಾರದಲ್ಲಿ ಎಷ್ಟು ಪ್ರಕಾರಗಳಿವೆ ಎಂದು ವಿಸ್ತಾರವಾಗಿ ತಿಳಿಸಲಾಗಿದೆ.

ದ್ರವ್ಯ ಯಜ್ಞದಲ್ಲಿ ಒಳ್ಳೆಯ ಕಾರ್ಯಕ್ಕಾಗಿ ಹಣವನ್ನು ದಾನ ಮಾಡುತ್ತೇವೆ. ಸ್ವಾಧ್ಯಾಯ ಎಂದರೆ ಸ್ವಯಂ ಅಧ್ಯಯನ ಮಾಡುವುದು. ನಿಯಮಿತವಾಗಿ ಒಂದು ಒಳ್ಳೆಯ ಪುಸ್ತಕವನ್ನು ಓದುವುದು ಕೂಡ ದೈವೀ ಗುಣ.

ತಪ : ನಮ್ಮ ಕ್ಷಮೆತೆಗೂ ಮೀರಿ ಪ್ರಯತ್ನಿಸುವುದು.

ಆರ್ಜವ : ವಿಚಾರಗಳ ಜೊತೆಗೆ ಆಚಾರವು ಶುದ್ಧವಾಗಿರುವುದು. ಆಚಾರ ಮತ್ತು ವಿಚಾರಗಳ ಮಧುರತೆಯೇ ಆರ್ಜವ.

ಅಹಿಂಸೆ : ಅಹಿಂಸೆಯನ್ನು ಸಹ ದೈವೀ ಗುಣ ಎನ್ನಲಾಗಿದೆ. ಹಿಂಸೆ ಎಂದರೆ ಕೇವಲ ಹುಳಹುಪ್ಪಟ್ಟೆಗಳನ್ನು ಕೊಲ್ಲುವುದಲ್ಲ. ಕಾಯ, ವಾಚಾ, ಮಾನಸ ಯಾರಿಗೂ ಕೆಡಕನ್ನು ಬಯಸದಿದ್ದರೆ ಅದು ಅಹಿಂಸೆಯೇ ಆಗಿರುತ್ತದೆ.

ಸತ್ಯ : ನಾವು ಸತ್ಯದ ಆಧಾರದ ಮೇಲೆ ನಡೆಯಬೇಕು. ಕೆಲವರಂತು ನನಗೆ ಸುಳ್ಳು ಹೇಳಲು ಬರುವುದಿಲ್ಲವೆಂದು ಹೇಳಿ ಸುಳ್ಳೇ ಹೇಳುತ್ತಿರುತ್ತಾರೆ. ನಾವು ಹೇಳುವ ಮಾತು ಮತ್ತು ನಮ್ಮ ಆಚರಣೆಗಳು ಸತ್ಯವೇ ಆಗಿರಬೇಕು.

ಅಕ್ರೋಧ : ಅಕ್ರೋಧ ಎಂದರೆ ಕ್ರೋಧ ಮಾಡಿಕೊಳ್ಳದೆ ಇರುವುದು.

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ ।
ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ತ್ರಯಂ ತ್ಯಜೇತ್ ll (16.21)

ಭಗವಂತನೇ ಭಗವದ್ಗೀತೆಯಲ್ಲಿ ಹೇಳಿದಂತೆ ಕಾಮ, ಕ್ರೋಧ ಮತ್ತು ಲೋಭ ಈ ಮೂರು ನಮ್ಮನ್ನು ನರಕದ ಬಾಗಿಲಿಗೆ ಕರೆದುಕೊಂಡು ಹೋಗುತ್ತವೆ. ಇವು ಸರ್ವನಾಶಕ್ಕೆ ಕಾರಣವಾಗುತ್ತವೆ. ಮರಣ ಹೊಂದಿದಾಗ ನರಕಕ್ಕೆ ಹೋಗುತ್ತೇವೆ ಆದರೆ ಈ ಮೂರರಿಂದ ನರಕದ ಬಾಗಿಲಿನಲ್ಲಿ ಇರುತ್ತೇವೆ. ಇದರ ಅರ್ಥ ನಾವು ಪ್ರತಿ ಸಾರಿ ಕ್ರೋಧ ಮಾಡಿಕೊಂಡಾಗ ನಮ್ಮ ರಕ್ತ ಕುದಿಯಲು ಪ್ರಾರಂಭಿಸುತ್ತದೆ. ಅದರಿಂದಾಗಿ ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳು ಬರುತ್ತವೆ. ಆ ಕಾಯಿಲೆಗಳಿಂದಾಗಿ ಮಾವಿನಹಣ್ಣಿನ ಕಾಲವಾಗಿದ್ದರೂ ಸಹ ಮಾವಿನ ಹಣ್ಣನ್ನು ಸವಿಯಲು ಆಗುವುದಿಲ್ಲ. ಇದೇ ನರಕ. ನಮ್ಮ ಜೀವನ ಶೈಲಿಯ ಅವ್ಯವಸ್ಥೆಯಿಂದ ನಾವು ಕಾಯಿಲೆಗಳಿಗೆ ತುತ್ತಾಗುತ್ತೇವೆ.

ತ್ಯಾಗ ಶಾಂತಿ ಪೈಶುನಮ್ : 

ತ್ಯಾಗ ಮತ್ತು ಶಾಂತಿಯ ಅರ್ಥ ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ತಿಳಿದೇ ಇರುತ್ತವೆ.

ಶಾಂತಿ ಎಂಬ ಹೆಸರಿನ ಗೃಹಿಣಿಯ ಮನೆಗೆ ಒಬ್ಬ ತೇಜಸ್ವಿ ಸನ್ಯಾಸಿ ಭಿಕ್ಷೆಗಾಗಿ ಬಂದನು. ಗೃಹಿಣಿ ಸನ್ಯಾಸಿಯನ್ನು ಕುರಿತು ನಮ್ಮ ಮನೆಯಲ್ಲಿ ಬಹಳ ಅಶಾಂತಿ ತುಂಬಿದ ವಾತಾವರಣವಿರುತ್ತದೆ ಇದಕ್ಕೆ ಕಾರಣವೇನೆಂದು ಕೇಳಿದಳು. ಅದಕ್ಕೆ ಸನ್ಯಾಸಿ ಈಗ ನನಗೆ ಬಹಳ ಹಸಿವಾಗಿದೆ ಮೊದಲು ಭಿಕ್ಷೆಯನ್ನು ಕೊಡು ಆಮೇಲೆ ಯಾವಾಗಲಾದರೂ ಹೇಳುತ್ತೇನೆ ಎಂದನು. ಈ ಮಾತುಗಳನ್ನು ಕೇಳಿ  ಗೃಹಿಣಿ, ಬರೀ ಭಿಕ್ಷೆ ತೆಗೆದುಕೊಳ್ಳಲು ಬರುತ್ತದೆ. ಒಂದೆರಡು ಜ್ಞಾನದ ಮಾತನಾಡಲು ಬರುವುದಿಲ್ಲವೇ, ಬಿಟ್ಟಿ ತಿನ್ನುತ್ತೀರಿ ಅಷ್ಟೇ ಎಂದು ಕ್ರೋಧದಿಂದ ಮಾತನಾಡಲು ಶುರು ಮಾಡಿದಳು. ಆಗ ಆ ಸನ್ಯಾಸಿ ನಸು ನಕ್ಕು, ನಿನ್ನ ಮನೆಯ ಅಶಾಂತಿಗೆ ನಿನ್ನ ಕ್ರೋಧವೇ ಕಾರಣ ಎಂದನು. ನಾವು ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಮನೆಯಲ್ಲಿ ಶಾಂತಿ ಅಥವಾ ಅಶಾಂತಿ ಯಾವುದು ಇರುತ್ತದೆ ಎಂದು ನಿರ್ಧರಿಸುತ್ತದೆ. ಶಾಂತಿಯನ್ನು ದೈವೀ ಗುಣ ಎನ್ನಲಾಗಿದೆ.

ಅಪೈಶುನಮ್ : ಅಪೈಶುನಮ್ ಎಂದರೆ ಯಾರನ್ನು ನಿಂದಿಸದೇ ಇರುವುದು. ನಾವು ಯಾರನ್ನೂ ಬೆನ್ನ ಹಿಂದೆ ನಿಂದಿಸಬಾರದು. ಈ ನಿಂದಿಸದೆ ಇರುವ ಭಾವವೇ ದೈವೀ ಗುಣ.

ಒಬ್ಬ ಹೆಣ್ಣು ಮಗಳ ಮನೆಗೆ ಅವಳ ತವರಿನಿಂದ ಅಣ್ಣ ಅತ್ತಿಗೆ ಬರುವವರಿದ್ದರು. ಆದರೆ ಅಂದಿನ ದಿನವೇ ಅವಳ ಸ್ನೇಹಿತರು ಕಿಟಿ ಪಾರ್ಟಿಯನ್ನು ಆಯೋಜಿಸಿಕೊಂಡಿದ್ದರು. ಅವಳು ಅತ್ತೆಯನ್ನು ಕುರಿತು, "ನಾನು ಕಿಟಿ ಪಾರ್ಟಿಗೆ ಹೋಗಲೇಬೇಕು. ನನ್ನ ಅಣ್ಣ ಮತ್ತು ಅತ್ತಿಗೆ ಬಂದಾಗ ಅವರೊಂದಿಗೆ ಮಾತನಾಡುತ್ತಾ ಇರಿ ನಾನು ಬೇಗ ಬರುತ್ತೇನೆ" ಎಂದು ಹೇಳಿದಳು. ಅತ್ತೆಗೆ ಆಶ್ಚರ್ಯವಾಯಿತು. ಅದಕ್ಕೆ ಅವಳು ನಾನು ಅಲ್ಲಿಗೆ ಹೋಗದೆ ಇದ್ದರೆ ನನ್ನ ಸ್ನೇಹಿತರು ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಯಾರು ಗೈರು ಹಾಜರಾಗುತ್ತಾರೋ ಅವರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇದು ಅಲ್ಲಿಯ ಪದ್ಧತಿ ಎಂದಳು. ಇನ್ನೊಬ್ಬರನ್ನು ಅವಹೇಳನ ಮಾಡಿಕೊಂಡು ಸಂತೋಷಪಡುವುದೇ ಪೈಶುನಮ್. ಯಾರ ಬಗ್ಗೆಯೂ ನಮ್ಮ ಬಾಯಿಂದ ತಪ್ಪು ಮಾತುಗಳು ಬರದೇ ಇರುವ ಹಾಗೆ ನಾವು ಎಚ್ಚರಿಕೆ ವಹಿಸಬೇಕು. ಯಾವ ದೈವೀ ಗುಣಗಳು ಇಲ್ಲದಿದ್ದರೂ ಈ ಗುಣವನ್ನು ಅಳವಡಿಸಿಕೊಳ್ಳಲೇಬೇಕು.

ದಯಾ ಭೂತೇಷು :
ಎಲ್ಲ ಪ್ರಾಣಿಗಳ ಪ್ರತಿ ದಯೆಯನ್ನು ಹೊಂದಿರಬೇಕು. ಆಗ ಮನೆಗೆ ಹಲ್ಲಿ ಬಂದರೂ ಅದನ್ನು ಹೊಡೆಯುವ ಬದಲು ಮನೆಯಿಂದ ಹೊರಗಾದರೂ ಹಾಕಬಹುದು. ಅದರ ಬಗ್ಗೆಯೂ ನಾವು ದಯೆಯನ್ನು ಹೊಂದಿರಬೇಕು.

ಅಲೋಲುಪ್ತ್ವಂ :
ಲೋಲುಪ್ತ್ವಂ ಎಂದರೆ ಒಂದು ವಸ್ತುವಿನ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿರುವುದು. ನನ್ನದು ಎನ್ನುವ ಭಾವ. ಇದರ ವಿರುದ್ಧ ಪದವೇ ಅಲೋಲುಪ್ತ್ವಂ.

ಮಾರ್ದವಂ :
ಇದು ಅಹಿಂಸೆಯ ಇನ್ನೊಂದು ರೂಪ. ಕೋಮಲತೆಯಿಂದ ಎಲ್ಲರನ್ನು ಮಾತನಾಡಿಸುವುದೇ ಮಾರ್ದವಂ.

ಹ್ರೀಃ : ಹ್ರೀಃ ಎಂದರೆ ಲಜ್ಜೆ. ನಮ್ಮಿಂದ ಏನಾದರೂ ತಪ್ಪು ಕಾರ್ಯ ನಡೆದರೆ ನಾವು ಲಜ್ಜೆಗೊಳಗಾಗುತ್ತೇವೆ.

ಅಚಾಪಲಮ್ : ಚಾಪಲಮ್ ಎಂದರೆ ಚಂಚಲತೆ. ಅಚಾಪಲಮ್ ಎಂದರೆ ಸ್ಥಿರತೆ. ಚಂಚಲತೆಯನ್ನು ಸಂಕುಚಿತಗೊಳಿಸುವುದೇ ಅಚಾಪಲಮ್.

ತೇಜಃ : ತೇಜಃ ಎಂದರೆ ತೇಜಸ್ಸು.

ಕ್ಷಮಾ : ಕ್ಷಮಾ ಎಂದರೆ ಕ್ಷಮೆ. ಇದು ಎಲ್ಲರಿಗೂ ತಿಳಿದಿರುವುದು.

ಧೃತಿ : ಧೃತಿ ಎಂದರೆ ಧೈರ್ಯ. ತಾಳ್ಮೆಯಿಂದ ಇರುವುದು. ಗಾಬರಿ ಪಡೆದೆ ಇರುವುದೇ ಧೃತಿ.

ಶೌಚ : ನಾವು ಶೌಚಾಲಯ ಪದವನ್ನು ಕೇಳಿದ್ದೇವೆ. ಶೌಚ ಎಂದರೆ ಸ್ವಚ್ಛತೆ. ಹೊಟ್ಟೆಯ ಸ್ವಚ್ಛತೆಗಾಗಿ ನಾವು ಶೌಚಾಲಯಕ್ಕೆ ಹೋಗುತ್ತೇವೆ. ಶೌಚವೆಂದರೆ ಕೇವಲ ಹೊಟ್ಟೆಯ ಸ್ವಚ್ಛತೆ ಅಲ್ಲ. ಶರೀರದ ಸ್ವಚ್ಛತೆಯ ಜೊತೆಗೆ ಮನ, ಬುದ್ಧಿ, ಅಹಂಕಾರದ ಸ್ವಚ್ಛತೆಯೂ ಸೇರಿದೆ.

ಅದ್ರೋಹ : ಯಾರಲ್ಲಿಯೂ ಶತ್ರು ಭಾವವಿಲ್ಲದೆ ಇರುವುದು. ದ್ವೇಷ ಭಾವನೆ ನಮ್ಮ ಮನಸ್ಸಿನಲ್ಲಿ ಇರಲೇಬಾರದು. ಅರ್ಜುನನಿಗೆ ಭಗವಂತ ವೈರಿಗಳು ಯಾರೆಂದು ಹೇಳುತ್ತಿದ್ದಾನೆ. ಕೇವಲ ದುರ್ಯೋಧನ, ದುಶ್ಯಾಸನರು ವೈರಿಗಳಾಗಿರದೇ, ಕಾಮ ಕ್ರೋಧಗಳು ವೈರಿಗಳೆಂದು ಹೇಳಿದ್ದಾನೆ.
ಶ್ರೀಭಗವಾನುವಾಚ ।
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥ (3.37)

ದುರ್ಯೋಧನ, ದುಶ್ಯಾಸನನನ್ನು ಸಾಯಿಸುವುದು ನಿನ್ನ ಕರ್ತವ್ಯ. ಅವರು ತಪ್ಪೆಸಗಿರುವ ಕಾರಣ ಕ್ಷತ್ರಿಯನಾದ ನೀನು ಅವರನ್ನು ಸಂಹರಿಸುವುದು ನಿನ್ನ ಕರ್ತವ್ಯವಾಗುತ್ತದೆ ಎಂದು ಭಗವಂತ ಹೇಳುತ್ತಾನೆ. ಇಲ್ಲಿಯೂ ಸಹ ಭಗವಂತನು ಭೀಷ್ಮ ಮತ್ತು ದ್ರೋಣಾಚಾರ್ಯರ ಮೇಲೆ ಬಾಣವನ್ನು ಹೂಡಿ ಅವರನ್ನು ಕೊಲ್ಲಲು ಹೇಳುತ್ತಾನೆ. ಏಕೆಂದರೆ ಅವರು ಅಧರ್ಮೀಯರಾದ ದುರ್ಯೋಧನ ದುಶ್ಯಾಸನರ ಪಕ್ಷದಲ್ಲಿದ್ದರು. ಒಬ್ಬ ಅಬಲೆಯ ವಸ್ತ್ರಹರಣ ಮಾಡಿದವರ ಪಕ್ಷದಲ್ಲಿದ್ದರು. ಆ ಹೆಣ್ಣು ನಿನ್ನ ಪತ್ನಿ ಆಗಿರದೆ ನಿನ್ನ ರಾಜ್ಯದ ಯಾವುದೇ ಹೆಣ್ಣು ಮಗುವಾಗಿದ್ದರೂ ಈ ಕೃತ್ಯ ಎಸೆಗಿದ್ದಕ್ಕಾಗಿ ನೀನು ಅವರ ಕೈಗಳನ್ನು ಕತ್ತರಿಸಿ ಹಾಕಬೇಕು ಎಂದು ಹೇಳುತ್ತಾನೆ. ಮೋದಿಯವರು ಸಹ ಇದೇ ಕರ್ತವ್ಯವನ್ನು ಪಾಲಿಸಿದರು. ಆತಂಕವಾದಿಗಳ 9 ಸ್ಥಾನಗಳನ್ನು ದ್ವಂಸಗೊಳಿಸಿದರು. ನಮ್ಮ ಸೇನೆ ಶತ್ರುತ್ವ ಭಾವದಿಂದ ಈ ಕಾರ್ಯವನ್ನು ಮಾಡಲಿಲ್ಲ. ಇದು ಅವರ ಕರ್ತವ್ಯವಾಗಿತ್ತು. ಪಹಲ್ ಗಾಮ್ ನಲ್ಲಿ ಆತಂಕಿಗಳು ಎಸೆಗಿದ್ದ ಕೃತ್ಯಕ್ಕೆ ಇದು ತಕ್ಕ ಪಾಠವಾಗಿತ್ತು. ಪಾಕಿಸ್ತಾನದ ಬೇರೆ ನಾಗರಿಕರಿಗೆ ತೊಂದರೆ ಆಗದಂತೆ, ಕೇವಲ ಆತಂಕವಾದಿಗಳ ಬಿಡಾರದ ಮೇಲೆ ಮತ್ತು ಅವರುಗಳನ್ನು ಬೆಂಬಲಿಸುತ್ತಿದ್ದವರ ಮೇಲೆ ದಾಳಿಯನ್ನು ಮಾಡಲಾಯಿತು.

ನಾತಿ ಮಾನಿತ : ನಾತಿ ಮಾನಿತ ಎಂದರೆ ಅಹಂಕಾರದಿಂದ ಮುಕ್ತವಾಗಿರುವುದು. ದೈವೀ ಗುಣಗಳಲ್ಲಿ ಇದು ಕೊನೆಯ ಗುಣ. ನಾನು ಮಾಡಿದೆ ಎಂಬ ಹೆಗ್ಗಳಿಕೆಯನ್ನು ಹೊಂದದೆ ಇರುವುದು. ಮನದಲ್ಲಿ ಅಹಂಕಾರದ ಭಾವ ಎಂದೂ ಬೆಳೆಯದಂತೆ ನೋಡಿಕೊಳ್ಳಬೇಕು.

26 ದೈವೀ ಗುಣಗಳ ತರುವಾಯ ಭಗವಂತನು ಆಸುರೀ ಸಂಪತ್ತನ್ನು ಹೇಳಲು ಪ್ರಾರಂಭಿಸುತ್ತಾನೆ. ಮೂರು ಶ್ಲೋಕಗಳಲ್ಲಿ ದೈವೀ ಗುಣಗಳನ್ನು ವರ್ಣಿಸಿದ್ದಾನೆ. ಆದರೆ ಒಂದೇ ಶ್ಲೋಕದಲ್ಲಿ ಆಸುರೀ ಗುಣಗಳನ್ನು ಹೇಳಿದ್ದಾನೆ.

16.4

ದಂಭೋ ದರ್ಪೋಽಭಿಮಾನಶ್ಚ, ಕ್ರೋಧಃ(ಫ್) ಪಾರುಷ್ಯಮೇವ ಚ |
ಅಜ್ಞಾನಂ(ಞ್) ಚಾಭಿಜಾತಸ್ಯ, ಪಾರ್ಥ ಸಂಪದಮಾಸುರೀಮ್ ।।16.4।।

ಹೇ ಅರ್ಜುನಾ ! ದಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ ಮತ್ತು ಅಜ್ಞಾನ ಇವೆಲ್ಲಾ ಆಸುರೀ ಸಂಪತ್ತನ್ನು ಪಡೆದು ಹುಟ್ಟಿರುವ ಪುರುಷರ ಲಕ್ಷಣಗಳಾಗಿವೆ.

ಇಲ್ಲಿ ಆರು ಆಸುರೀ ಗುಣಗಳನ್ನು ಹೇಳಲಾಗಿವೆ. ನಮ್ಮಲ್ಲಿ 26 ದೈವೀ ಗುಣಗಳಿದ್ದು, ಒಂದು ಆಸುರೀ ಗುಣ ಸೇರಿಕೊಂಡರೂ ಅವು ವ್ಯರ್ಥವಾಗುತ್ತವೆ. ಒಂದು ಶುದ್ಧವಾದ ಬಿಳಿ ಕಾಗದದ ಹಾಳೆಯ ಮೇಲೆ ಒಂದು ಕಪ್ಪು ಚುಕ್ಕೆ ನಮ್ಮ ಗಮನವನ್ನು ಅದರ ಕಡೆಗೆ ಸೆಳೆದುಬಿಡುತ್ತದೆ. ಇಲ್ಲಿ ಶುದ್ಧವಾದ ಬಿಳಿ ಕಾಗದವನ್ನು ದೈವಿ ಗುಣಕ್ಕೂ, ಕಪ್ಪು ಚುಕ್ಕೆಯನ್ನು ಆಸುರೀ ಗುಣಕ್ಕೆ ಹೋಲಿಸಲಾಗಿದೆ.

ದಂಭ : ನಾವು ಅಲ್ಲದೆ ಇರುವುದನ್ನು ಪ್ರದರ್ಶಿಸುವುದು.

ದರ್ಪ : ನನ್ನ ಬಳಿ ಇರುವುದರ ಬಗ್ಗೆ ಜಂಭಪಡುವುದು. ಕೆಲವರು ತಮ್ಮ ರೂಪದ ಬಗ್ಗೆ ಜಂಭ ಹೊಂದಿರುತ್ತಾರೆ. ಈ ರೂಪ ಒಂದಲ್ಲ ಒಂದು ದಿನ ಕ್ಷೀಣಿಸುತ್ತದೆ.

ನಾವು ಎಷ್ಟೇ ದುಡಿದು ಸಂಪಾದಿಸಿದ ಆಸ್ತಿಯಾದರೂ ಅದನ್ನು ಇಲ್ಲಿಯೇ ಬಿಟ್ಟು ಹೋಗಬೇಕು. ನಾವು ಹತ್ತು ಬೆರಳುಗಳಿಗೆ ಹತ್ತು ವಜ್ರದ ಉಂಗುರವನ್ನು ಹಾಕಿ ಬೀಗುತ್ತೇವೆ. ಆದರೆ ಮರಣ ನಂತರ ಸಂಬಂಧಿಗಳು ನಮ್ಮ ಕೈಯಿಂದ ಆ ಉಂಗುರಗಳನ್ನು ಕಿತ್ತು ತೆಗೆದುಕೊಳ್ಳುತ್ತಾರೆ. ಒಂದು ಉಂಗುರವನ್ನು ಸಹ ಬಿಡುವುದಿಲ್ಲ. ಇದು ನಮ್ಮ ವಾಸ್ತವ ಸಂಪತ್ತಲ್ಲ. ಹಾಗಾಗಿ ಈ ದರ್ಪ ದಂಭಾಚಾರಗಳ ಪ್ರಯೋಜನವೇನು?

ಸ್ವಾಭಿಮಾನ ಮತ್ತು ಅಭಿಮಾನಗಳ ನಡುವೆ ಏನು ವ್ಯತ್ಯಾಸವಿದೆ?

ದೇಶಕ್ಕಾಗಿ, ಕುಟುಂಬಕ್ಕಾಗಿ ಸಮರ್ಥನೆ ಕೊಡುವುದು ಸ್ವಾಭಿಮಾನ. ನಾನು ನನ್ನದು ಎಂದು ಮಾತನಾಡುವುದು ಅಭಿಮಾನ.

ಕ್ರೋಧ : ಕ್ರೋಧವನ್ನು ಆಸುರೀ ಗುಣ ಎನ್ನಲಾಗಿದೆ. ಅದೇ ಅಕ್ರೋಧ ದೈವೀ ಗುಣವಾಗುತ್ತದೆ. ಭಗವಂತ ಭಗವದ್ಗೀತೆಯಲ್ಲಿ ಹಲವಾರು ಶ್ಲೋಕಗಳ ಮೂಲಕ ಕ್ರೋಧದ ಬಗ್ಗೆ ತಿಳಿ ಹೇಳಿದ್ದಾನೆ. ಆದರೂ ನಾವು ಕ್ರೋಧದ ಮೇಲೆ ಸಂಯಮ ಸಾಧಿಸಲಿಲ್ಲ.

ವಿವೇಚಕರು, ಒಂದು ಚಿಕ್ಕ ಪರೀಕ್ಷೆ ಮಾಡಿಕೊಳ್ಳಲು ಹೇಳಿದರು. ಒಂದು ದಿನದಲ್ಲಿ ನಾವು ಎಷ್ಟು ಬಾರಿ ಕೋಪಗೊಳ್ಳುತ್ತೇವೆ ಎಂದು ರಾತ್ರಿ ಮಲಗುವ ಮೊದಲು ಲೆಕ್ಕ ಹಾಕಿಕೊಳ್ಳಲು ತಿಳಿಸಿದರು. ಉದಾಹರಣೆಗೆ ಬೆಳಗ್ಗಿನಿಂದ 10 ಬಾರಿ ಕೋಪಗೊಂಡಿದ್ದೇವೆ ಎಂದರೆ, 10*100 ರ ಹಾಗೆ ಶ್ರೀ ಕೃಷ್ಣ ಶರಣಂ ಮಮ ಎಂದು ಜಪ ಮಾಡಬೇಕು ಎಂದುರು. ಪ್ರತಿ ದಿನ ಹೀಗೆ ಮಾಡುವುದರಿಂದ ಐದು ದಿನದ ಹೊತ್ತಿಗೆ ಕೋಪ ಮಾಡಿಕೊಳ್ಳುವ ಸಮಯದಲ್ಲಿ ನಮಗೇ ಅರಿವಾಗಿ ಕೋಪವನ್ನು ನಿಯಂತ್ರಿಸುತ್ತೇವೆ. ನಮ್ಮ ವಿವೇಕ ಜಾಗೃತಿ ಹೊಂದುತ್ತದೆ. ವಿವೇಕ ಜಾಗೃತಗೊಳ್ಳದಿದ್ದರೆ ಅದನ್ನು ಪಾರುಷ್ಯ ಎನ್ನಲಾಗುತ್ತದೆ. ಅದೇ ಕಠೋರತೆ. ಇದು ಸಹ ಆಸುರೀ ಗುಣದ ಲಕ್ಷಣ.

ಅಜ್ಞಾನ : ನನಗೆ ತಿಳಿದಿಲ್ಲ ಎನ್ನುವುದೇ ಅಜ್ಞಾನ. ಯಾಕೆಂದರೆ ನಾವು ತಿಳಿಯಲು ಪ್ರಯತ್ನಿಸುವುದೇ ಇಲ್ಲ. ನೀವೆಲ್ಲ ಗೀತಾ ಸಾಧಕರು, ಗೀತೆಯನ್ನು ಕಲಿಯಲು ಮುಂದಾಗಿರುವ ಕಾರಣ ನಿಮ್ಮಲ್ಲಿ ಅಜ್ಞಾನವೆಂಬುದಿಲ್ಲವೆಂದು ವಿವೇಚಕರ ಅಭಿಮತ.

16.5

ದೈವೀ ಸಂಪದ್ವಿಮೋಕ್ಷಾಯ, ನಿಬಂಧಾಯಾಸುರೀ ಮತಾ |
ಮಾ ಶುಚಃ(ಸ್) ಸಂಪದಂ(ನ್) ದೈವೀಮ್, ಅಭಿಜಾತೋಽಸಿ ಪಾಂಡವ।।16.5।।

ದೈವೀ ಸಂಪತ್ತು ಮುಕ್ತಿಗಾಗಿ ಮತ್ತು ಆಸುರೀ ಸಂಪತ್ತು ಬಂಧಿಸುವುದಕ್ಕಾಗಿ ಎಂದು ತಿಳಿಯಲಾಗಿದೆ. ಆದ್ದರಿಂದ ಹೇ ಅರ್ಜುನಾ ! ನೀನು ಶೋಕಪಡಬೇಡ ; ಏಕೆಂದರೆ ನೀನು ದೈವೀ ಸಂಪತ್ತನ್ನು ಪಡೆದು ಜನಿಸಿರುವೆ.

ಹೇ ಅರ್ಜುನ! ನೀನು ಶೋಕ ಪಡಬೇಡ. ನೀನು ದೈವೀ ಸಂಪತ್ತನ್ನು ಹೊಂದಿರುವೆ. ದೈವೀ ಸಂಪತ್ತು ಮುಕ್ತಿದಾಯಕ ಮತ್ತು ಆಸುರೀ ಸಂಪತ್ತು ಬಂಧನಕಾರಕವಾಗಿದೆ. ಒಂದೇ ಒಂದು ಸಣ್ಣ ಆಸುರೀ ಗುಣ ನಮ್ಮಲ್ಲಿದ್ದರೂ, ಅದು ಒಂದು ಸಣ್ಣ ಸರ್ಪದಂತೆ ನಮ್ಮನ್ನು ಕಚ್ಚಿಬಿಡುತ್ತದೆ. ಸರ್ಪ ಚಿಕ್ಕದಾಗಿದ್ದರೂ ಅದರ ವಿಷ ಪ್ರಭಾವಶಾಲಿಯಾಗಿರುತ್ತದೆ.

ಸಂತ ಜ್ಞಾನೇಶ್ವರ ಮಹಾರಾಜರು ಹೇಳುವಂತೆ, ದಂಭ, ದರ್ಪ, ಅಭಿಮಾನ, ಕ್ರೋಧ, ಪಾರುಷ್ಯ ಮತ್ತು ಅಜ್ಞಾನ ಈ ಆರು ಆಸುರೀ ಗುಣಗಳು ಮರಣ ಸಮಯದಲ್ಲಿ ನಮ್ಮನ್ನು ಪೀಡಿಸುತ್ತವೆ. ನಾವು ಮೋಕ್ಷವನ್ನು ಬಯಸುವುದಾದರೆ ಈ ಆರು ಗುಣಗಳ ಸಂಹಾರ ಮಾಡಬೇಕು.

16.6

ದ್ವೌ ಭೂತಸರ್ಗೌ ಲೋಕೇಽಸ್ಮಿನ್, ದೈವ ಆಸುರ ಏವ ಚ |
ದೈವೋ ವಿಸ್ತರಶಃ(ಫ್) ಪ್ರೋಕ್ತ, ಆಸುರಂ(ಮ್) ಪಾರ್ಥ ಮೇ ಶೃಣು ।।16.6।।

ಹೇ ಅರ್ಜುನಾ! ಈ ಲೋಕದಲ್ಲಿ ಜೀವಿಗಳ ಸೃಷ್ಟಿ ಅಂದರೆ ಮನುಷ್ಯ ಸಮುದಾಯವು ಎರಡೇ ಪ್ರಕಾರದ್ದಾಗಿದೆ. ಒಂದಾದರೋ ದೈವೀ ಪ್ರಕೃತಿಯುಳ್ಳದ್ದು ಮತ್ತು ಇನ್ನೊಂದು ಆಸುರೀಪ್ರಕೃತಿಯುಳ್ಳದ್ದು. ಅವುಗಳಲ್ಲಿ ದೈವೀ ಪ್ರಕೃತಿಯುಳ್ಳವರನ್ನು ವಿಸ್ತಾರಪೂರ್ವಕವಾಗಿ ಹೇಳಲಾಯಿತು. ಈಗ ನೀನು ಆಸುರೀಪ್ರಕೃತಿಯುಳ್ಳ ಮನುಷ್ಯ ಸಮುದಾಯವನ್ನೂ ಕೂಡ ವಿಸ್ತಾರಪೂರ್ವಕವಾಗಿ ನನ್ನಿಂದ ಕೇಳು.

ಈ ಜಗತ್ತಿನಲ್ಲಿ ಎರಡು ಪ್ರಕಾರದ ಜನರಿರುತ್ತಾರೆ. ಅವರೇ ದೈವೀ ಸಂಪತ್ತನ್ನು ಹೊಂದಿದವರು ಮತ್ತು ಆಸುರೀ ಸಂಪತ್ತನ್ನು ಹೊಂದಿದವರು. ಇವುಗಳಲ್ಲಿ ದೈವೀ ಸಂಪತ್ತನ್ನು ವಿಸ್ತಾರವಾಗಿ ಹೇಳಲಾಯಿತು. ಇನ್ನು ಆಸುರೀ ಸಂಪತ್ತನ್ನು ಹೊಂದಿದವರ ಕುರಿತು ವಿಸ್ತಾರವಾಗಿ ನನ್ನಿಂದ ಕೇಳು ಎಂದಿದ್ದಾನೆ ಭಗವಂತ.

ನಮ್ಮಲ್ಲಿ ದೈವೀ ಗುಣಗಳು ಎಷ್ಟಿವೆ? ಆಸುರೀ ಗುಣಗಳು ಎಷ್ಟಿವೆ? ಎಂದು ಪರೀಕ್ಷಿಸಿಕೊಳ್ಳಬೇಕು. ಈ ವಾರದ ವಿವೇಚನೆಯಲ್ಲಿ ದೈವೀ ಗುಣದ ಬಗ್ಗೆ ತಿಳಿದುಕೊಂಡಿದ್ದೇವೆ. ಮುಂದಿನ ವಾರದ ವಿವೇಚನೆಯಲ್ಲಿ ಆಸುರೀ ಗುಣಗಳ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ ಎಂದು ಹೇಳಿದರು. ನಂತರ ಪ್ರಶ್ನೋತ್ತರಗಳನ್ನು ತೆಗೆದುಕೊಳ್ಳಲಾಯಿತು.


ಪ್ರಶ್ನೋತ್ತರಗಳು

1) ಸತ್ಯ ಪ್ರಕಾಶ್ ಗೋಯಂಕ ಅಣ್ಣ
ಪ್ರಶ್ನೆ : ನಮ್ಮ ಮನಸ್ಸನ್ನು ಶ್ರೀ ಕೃಷ್ಣನಲ್ಲಿ ಸ್ಥಿರವಾಗಿಡಲು ಭಕ್ತಿಯನ್ನು ಹೇಗೆ ರೂಢಿಸಿಕೊಳ್ಳಬೇಕು?
ಉತ್ತರ : ನೀವು ಇನ್ನೊಮ್ಮೆ 12ನೇ ಅಧ್ಯಾಯದ ವಿವೇಚನೆಯನ್ನು ಕೇಳಬೇಕು. ಏಕೆಂದರೆ ಆ ಅಧ್ಯಾಯದಲ್ಲಿ ಭಕ್ತಿಯನ್ನು ಬಹಳ ಸುಲಭಗೊಳಿಸಿ ಹೇಳಲಾಗಿದೆ. ನಾಮ ಸ್ಮರಣೆ ಭಕ್ತಿಯ ಬಹಳ ಸುಲಭದ ಉಪಾಯ. ಅದನ್ನು ಮಾಡುವುದು ಕಷ್ಟವಾದರೆ ನೀನು ಮಾಡುವ ಪ್ರತಿ ಕಾರ್ಯವನ್ನು ನನಗಾಗಿ ಮಾಡುತ್ತಿದ್ದೀಯಾ ಎಂಬ ಭಾವನೆಯಿಂದ ಮಾಡು ಎಂದು ಹೇಳಿದ್ದಾನೆ. ಶಿಕ್ಷಕನಾಗಿದ್ದರೆ ವಿದ್ಯಾರ್ಥಿಗಳೇ ಭಗವಂತನ ರೂಪವೆಂದು ತಿಳಿದು ವಿವರಿಸಬೇಕು. ಅಂಗಡಿಯವನಾಗಿದ್ದರೆ ಬರುವ ಗ್ರಾಹಕರೇ ಭಗವಂತನ ರೂಪವೆಂದು ತಿಳಿಯಬೇಕು. ಅವರಿಗೆ ಮೋಸವಾಗದಂತೆ ವ್ಯವಹಾರವನ್ನು ಮಾಡಬೇಕು. ಗೃಹಿಣಿಯಾಗಿದ್ದರೆ ತಾನು ಮಾಡುತ್ತಿರುವ ಅಡುಗೆ ಭಗವಂತನಿಗೋಸ್ಕರ ಎನ್ನುವ ಭಾವವನ್ನು ಹೊಂದಿರಬೇಕು. ಇದೇ ಭಕ್ತಿ.

ಇದು ಮಾಡಲು ಸಾಧ್ಯವಾಗದಿದ್ದರೆ ಮಾಡುವ ಕಾರ್ಯದ ಫಲದ ಆಕಾಂಕ್ಷೆಯನ್ನು ಬಿಟ್ಟು ಅದನ್ನು ಪರಮಾತ್ಮನಿಗೆ ಅರ್ಪಿಸಬೇಕು. ಲಾಭ ಅಥವಾ ನಷ್ಟ ಏನೇ ಆದರೂ ಓಂ ಶ್ರೀ ಕೃಷ್ಣಾರ್ಪಣಮಸ್ತು ಎಂದು ಅರ್ಪಿಸಬೇಕು. ನಾವು ಯಾವಾಗಲೂ ಸಮತ್ವದ ಭಾವದಲ್ಲಿರಬೇಕು. ಸಮತ್ವದ ಬಗ್ಗೆ ಭಗವದ್ಗೀತೆಯಲ್ಲಿ ಹಲವಾರು ಶ್ಲೋಕಗಳಲ್ಲಿ ವಿವರಿಸಲಾಗಿದೆ. ಒಂದನೇ ಅಧ್ಯಾಯದಿಂದ 12ನೇ ಅಧ್ಯಾಯದವರೆಗೆ ಸುಮಾರು 24 ಸಲ ಸಮತ್ವದ ಬಗ್ಗೆ ಹೇಳಲಾಗಿದೆ.

ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನಚಿತ್ ।
ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರಃ ॥ (12.19)

ನಮ್ಮನ್ನು ಯಾರಾದರೂ ಹೊಗಳಿದಾಗಲೂ ಅಥವಾ ತೆಗಳಿದಾಗಲೂ ಸಮತ್ವದಲ್ಲೇ ಇರಬೇಕು.

ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಃ ।
ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ ॥ (12.18)

ಶೀತ ಉಷ್ಣದಲ್ಲಿ, ಸುಖ ದುಃಖದಲ್ಲಿ, ಮಾನ ಅಪಮಾನಗಳಲ್ಲಿ, ಕಲ್ಲು ಚಿನ್ನದಲ್ಲಿ ಸಮತ್ವವನ್ನು ಸಾಧಿಸಬೇಕು. ಭಕ್ತನ ಲಕ್ಷಣಗಳನ್ನು ಹೇಳುತ್ತಿರುವುದು ಸಮತ್ವವನ್ನು ಸಾಧಿಸಲು ಬೇಕಾದ ಅಂಶಗಳೇ ಆಗಿವೆ. ಪ್ರಿಯರು ಅಪ್ರಿಯರು ಎನ್ನುವ ಭಾವವಿಲ್ಲದೆ ಎಲ್ಲರಲ್ಲೂ ಭಗವಂತನ ಅಂಶವಿದೆ ಎಂದು ತಿಳಿಯಬೇಕು. ನಾವು ಕೋಪಿಸಿಕೊಳ್ಳುವುದಕ್ಕಿಂತ ನಗುತಿರುವುದೇ ಬಹಳ ಸುಲಭದ ಕೆಲಸ.

2) ವಿದ್ಯಾಸಾಗರ ಅಣ್ಣ
ಪ್ರಶ್ನೆ :
ಅ ) ವಿಷ್ಣುವಿನ ಕೆಳಗೆ ಇನ್ನಿಬ್ಬರು ವಿಷ್ಣು ಇರುತ್ತಾರೆ ಎಂದು ಕೇಳಲ್ಪಟ್ಟಿದ್ದೇನೆ. ಇದು ಬಹಳ ಗೊಂದಲವನ್ನು ಉಂಟು ಮಾಡಿದೆ. ಇದು ಸತ್ಯವೇ?
ಉತ್ತರ : ಈ ಗೊಂದಲಗಳನ್ನೆಲ್ಲ ಬಿಟ್ಟುಬಿಡಿ. ಮಾಮೇಕಂ ಶರಣಂ ವ್ರಜ ಎಂದು ಭಗವಂತನೇ ಹೇಳಿದ್ದಾನೆ. ಹಾಗಾಗಿ ಉಳಿದದ್ದನ್ನು ಬಿಟ್ಟು ಇದೊಂದಕ್ಕೆ ಶರಣಾಗಿ.

ಆ) : ಗೀತೆಯಲ್ಲಿ ಹೇಳಿರುವ ಯಾವುದಾದರೂ ಒಂದು ಮಹತ್ವಪೂರ್ಣವಾದ ಉಪದೇಶವನ್ನು ತಿಳಿಸಿ.
ಉತ್ತರ : ಗೀತೆ ತಾಯಿ ಇದ್ದ ಹಾಗೆ. ಹೇಗೆ ತಾಯಿ ಹಾಲು ಕುಡಿಯುವ ಮಗುವಿಗೆ ಏನು ಆಹಾರ ಕೊಡಬೇಕು ಎಂದು ಅರಿತಿರುತ್ತಾಳೆ. ವಯಸ್ಕ ಮಗುವಿಗೆ ಏನು ಆಹಾರ ಕೊಡಬೇಕೆಂದೂ ತಿಳಿದಿರುತ್ತಾಳೆ. ಹಾಗೆಯೇ ಈ ಗೀತೆ ಯಾರಿಗೆ ಏನು ಅವಶ್ಯಕತೆ ಇದೆಯೋ ಅದನ್ನೇ ದಯಪಾಲಿಸುತ್ತದೆ.

ಸ್ನಾನ ಮಾಡುವಾಗ, ಊಟ ಮಾಡುವಾಗ, ಪ್ರತಿ ಕೆಲಸ ಮಾಡುವಾಗ ಭಗವಂತನನ್ನು ಸ್ಮರಿಸಬೇಕು. ಆಗ ನಮ್ಮ ಜೀವನ ಆನಂದದಿಂದ ಕೂಡಿರುತ್ತದೆ. ನಮ್ಮ ಮನಸ್ಸಿನಲ್ಲಿ ಆನಂದ ತುಂಬಿದ್ದರೆ ಅದು ಹೊರಗೂ ತುಳುಕುತ್ತದೆ.

3) ಅರ್ಚನಾ ವೀರೇಂದರ್ ಪರಮಾರ್ ಅಕ್ಕ
ಪ್ರಶ್ನೆ : ಭಗವದ್ಗೀತೆಯನ್ನು ಪೂರ್ಣ ಓದಲು ಆಗದಿದ್ದರೆ, ಯಾವ ಅಧ್ಯಾಯವನ್ನು ದಿನವೂ ಓದಿದರೆ ಒಳ್ಳೆಯದು?
ಉತ್ತರ : ಶ್ರೀ ಕೃಷ್ಣ ಶರಣಂ ಮಮ ಎಂಬ ಜಪಮಾಡಿದರೂ ಉತ್ತಮ. ಭಗವದ್ಗೀತೆ ನಮ್ಮ ಮನಸ್ಸಿನ ಸಂಶಯಗಳನ್ನೆಲ್ಲ ನಿವಾರಿಸುತ್ತದೆ. ನಾವು  ಕಂಠಸ್ಠೀಕರಣ  ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಗೀತಾ ಪರಿವಾರದೊಂದಿಗೆ ಸೇರಿ 18 ಅಧ್ಯಾಯಗಳನ್ನು ಓದಲಾದರೂ ಕಲಿಯಬೇಕು. ನಮ್ಮ ಸಮಯವನ್ನು ನೋಡಿಕೊಂಡು ಒಂದೆರಡು ಅಧ್ಯಾಯವನ್ನಾದರೂ ಓದಿದರೆ ಉತ್ತಮ. ಅದರಿಂದ ಬಹಳ ಲಾಭಗಳಿವೆ. ಕೇವಲ ಒಂದೇ ಅಧ್ಯಾಯಕ್ಕೆ ಸೀಮಿತರಾಗಬೇಡಿ. ಕೇವಲ ಒಂದೇ ಅಧ್ಯಾಯ ಓದಬೇಕೆಂದರೆ ಭಕ್ತಿ ಯೋಗವನ್ನು ಓದಿ. ಅದರಲ್ಲಿ ಸುಲಭವಾದ ವಿಷಯಗಳನ್ನು ಸುಲಭವಾಗಿ ಹೇಳಲಾಗಿದೆ. ಓದುವುದರ ಜೊತೆಗೆ ಅದರಲ್ಲಿರುವ ಒಂದು ಅಂಶವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

4) ಆದರ್ಶ ಅಣ್ಣ
ಪ್ರಶ್ನೆ :
ಅ) ನಾನು ಸಮಯ ಸಿಕ್ಕಾಗ ಸ್ವಲ್ಪ ಸ್ವಲ್ಪ ಭಗವದ್ಗೀತೆಯ ಶ್ಲೋಕಗಳನ್ನು ಓದುತ್ತೇನೆ. ಇದು ಸರಿಯೇ? ಭಗವದ್ಗೀತೆಯನ್ನು ಓದುವ ಸರಿಯಾದ ನಿಯಮವೇನು?
ಉತ್ತರ : ನಾವು ಸ್ಮಶಾನದಿಂದ ಅಂತಿಮ ಕ್ರಿಯೆಯನ್ನು ಮುಗಿಸಿ ಮನೆಗೆ ಬಂದಾಗ ಸ್ನಾನ ಮಾಡಬೇಕು, ಬಟ್ಟೆಗಳನ್ನು ಒಗೆಯಬೇಕು, ಯಜ್ಞೋಪವೀತ ಬದಲಿಸಬೇಕೆಂಬುದು ಶಾಸ್ತ್ರಗಳಲ್ಲಿ ಉಲ್ಲೇಖ ಗೊಂಡಿದೆ. ಆದರೆ ಶುದ್ಧವಾದ ಚಿನ್ನಕ್ಕೆ ದೋಷವಿಲ್ಲ ಎಂದು ಹೇಳಲಾಗಿದೆ. ಯಾಕೆಂದರೆ ಅದು ಶುದ್ಧವಾಗಿರುತ್ತದೆ. ಭಗವದ್ಗೀತೆ ಭಗವಂತನ ಕಂಠದಿಂದ ಬಂದಂತಹ ಗೀತೆ. ಅದಕ್ಕಿಂತ ಪವಿತ್ರವಾದದ್ದು ಇನ್ನೊಂದಿಲ್ಲ. ಸ್ನಾನ ಮಾಡಿ, ಮಾಡದೆ, ಯಾವುದೇ ಸಮಯದಲ್ಲಿ ಅದನ್ನು ಓದಬಹುದು. ಮೃತ ದೇಹ ಮನೆಯೊಳಗೆ ಇದ್ದರೂ ಭಗವದ್ಗೀತೆಯನ್ನು ಓದಬಹುದು. ಇದಕ್ಕೆ ವಿಧಿ ನಿಷೇಧವಿಲ್ಲ.

) ಲರ್ನ್ ಗೀತಾದ ಶ್ಲೋಕಗಳ ವ್ಯಾಖ್ಯೆಯ ಪುಸ್ತಕವಿಲ್ಲವೇ?
ಉತ್ತರ : ಸದ್ಯಕ್ಕೆ ಇಲ್ಲ. ನಾವು ಪೂಜ್ಯ ಗುರುಗಳಾದ ಗೋವಿಂದ್ ದೇವ್ ಗಿರಿಜೀ ಮಹಾರಾಜರ ಮೊರೆ ಹೋಗಿದ್ದೇವೆ. ಅವರು ಇದನ್ನು ಪರಿಶೀಲಿಸಿ ಇದರ ವ್ಯಾಖ್ಯೆಯನ್ನು ನೀಡಬೇಕೆಂದು ಕೇಳಿಕೊಂಡಿದ್ದೇವೆ. ಸ್ವಾಮೀಜಿಗಳ ಅನುಗ್ರಹದಿಂದ ಮಾತ್ರ ಇದು ಸಾಧ್ಯವಾಗುತ್ತದೆ.

5) ಸವಿತಾ ಕಪೂರ್ ಅಕ್ಕ
ಪ್ರಶ್ನೆ : ಕಂಠಸ್ಠೀಕರಣ ಹೇಗೆ ಮಾಡುವುದು?
ಉತ್ತರ : ಕಂಠಸ್ಠೀಕರಣ ಮಾಡುವುದು ಅನಿವಾರ್ಯವೇನಲ್ಲ. ಕಂಠಸ್ಠೀಕರಣ ಮಾಡಲು ಸಾಧ್ಯವಾಗದೆ ಇದ್ದರೆ ಯಾವುದೇ ಗ್ಲಾನಿಯನ್ನು ಇಟ್ಟುಕೊಳ್ಳಬೇಡಿ. ಈ ಗ್ಲಾನಿ ಬಿಟ್ಟ ತಕ್ಷಣವೇ ಕಂಠಸ್ಠೀಕರಣ ಮಾಡಲು ಶುರು ಮಾಡುತ್ತೀರಿ. ಓದಲು ಸಾಧ್ಯವಾಗದಿದ್ದರೆ ಆಡಿಯೋವನ್ನು ಕೇಳುತ್ತಲೇ ಇರಿ. ಮನಸ್ಸು ಮತ್ತು ಬುದ್ಧಿ ಎರಡನ್ನೂ ಬಳಸಿ ಪ್ರಯತ್ನ ಪಡಿ. ನಮ್ಮಲ್ಲಿ ಹಲವು ಹಿರಿಯ ಸಾಧಕರು ಇದನ್ನು ಸಾಧಿಸಿದ್ದಾರೆ.

ಸಮಾಪನ ಪ್ರಾರ್ಥನೆ, ಹನುಮಾನ್ ಚಾಲೀಸಾ ಪಠಣೆಯೊಂದಿಗೆ ಇಂದಿನ ವಿವೇಚನಾ ಸತ್ರವನ್ನು ಮುಕ್ತಾಯಗೊಳಿಸಲಾಯಿತು.

ಓಂ ತತ್ಸತ್. ಶ್ರೀ ಕೃಷ್ಣಾರ್ಪಣಮಸ್ತು