विवेचन सारांश
ಅರ್ಜುನ ವಿಷಾದಯೋಗ
ಗೀತಾ ಪರಿವಾರದ ಪದ್ಧತಿಯಂತೆ ಪರಮ ಪೂಜ್ಯ ಗೋವಿಂದದೇವ್ ಗಿರಿಜೀ ಮಹಾರಾಜ್ ಅವರ ಉಪಸ್ಥಿತಿಯನ್ನು ಸ್ಮರಿಸಿ, ಸುಂದರ ವಿಗ್ರಹಗಳ ಸಮ್ಮುಖದಲ್ಲಿ ದೀಪ ಪ್ರಜ್ವಲನೆಯಾಯಿತು. ಗುರುಕೃಪೆಯಿಲ್ಲದೆ ಈ ಎಲ್ಲಾ ಜ್ಞಾನ ಪಡೆಯುವುದು ವಾಸ್ತವವಾಗಿ ಅಸಾಧ್ಯವಾಗಿದೆ. ಈ ಗುರುಪರಂಪರೆಯ "ಕೃಷ್ಣಂ ವಂದೇ ಜಗದ್ಗುರುಮ್" ಇಲ್ಲಿಂದ ಆರಂಭಿಸಿ ಪರಮ ಶ್ರದ್ಧೇಯ ಸ್ವಾಮಿ ಗೋವಿಂದದೇವ್ ಗಿರಿಜೀ ಮಹಾರಾಜ್ ತನಕ ಎಲ್ಲ ಗುರುಗಳಿಗೆ ವಂದನೆ ಸಲ್ಲಿಸಿ ವಿವೇಚನೆಯನ್ನು ಆರಂಭಿಸಿದರು.
ಹಿಂದಿನ ವಾರ ಮೊದಲನೆ ಅಧ್ಯಾಯ ಅರ್ಜುನವಿಷಾದಯೋಗದ ಮೊದಲ ಭಾಗ ತಿಳಿದುಕೊಂಡೆವು. ವಿಷಾದ ಎಂದರೆ ದುಃಖ. ಅರ್ಜುನನ ದುಃಖ, ವ್ಯಾಕುಲತೆ ಕೂಡ ಒಂದು ಯೋಗವಾಗಬಹುದು. ಏಕೆಂದರೆ ಅವನ ದುಃಖ ತನಗಾಗಿ ಅಲ್ಲ. ತನ್ನ ಪರಿವಾರ ಜನರ ಚಿಂತೆಯಲ್ಲಿ ಅರ್ಜುನ ವ್ಯಾಕುಲನಾಗಿದ್ದಾನೆ. ಅವನು ಯುದ್ಧದಿಂದ ಭಯಭೀತನಾಗಿದ್ದಾನೆಂದೇನೂ ಅಲ್ಲ. ಇದಕ್ಕೂ ಮುನ್ನ ಅವನು ಹಲವು ಬಾರಿ ಕೌರವರು ಹಾಗು ಕೌರವರ ಸೈನ್ಯವನ್ನು ಪರಾಭವಗೊಳಿಸಿದ್ದಾನೆ. ಅಜ್ಞಾತವಾಸದ ಸಮಯದಲ್ಲಿ ಕೀಚಕನ ವಧೆಯಾದಾಗ, ಮತ್ತೆಲ್ಲಾ ಅನುಕೀಚಕರು ಹತರಾದಾಗ, ಕೀಚಕನನ್ನು ವಧಿಸುವ ಮಲ್ಲ ಭೀಮನಲ್ಲದೆ ಬೇರಾರು ಆಗಿರಲಿಕ್ಕೆ ಸಾಧ್ಯವಿರಲಿಲ್ಲ. ತನ್ನ ಬಾಣಗಳ ವರ್ಷದಿಂದ ನೂರು ಅನುಕೀಚಕರನ್ನು ಸಂಹರಿಸುವವ ಅರ್ಜುನನಲ್ಲದೇ ಮತ್ತಾರು ಆಗುವುದಕ್ಕೆ ಸಾಧ್ಯವಿಲ್ಲ. ಅಜ್ಞಾತವಾಸವನ್ನು ಕಳೆಯಲು ಕೇವಲ ಕೆಲವು ದಿನಗಳಷ್ಟೇ ಉಳಿದಿದ್ದವು ಎಂದೂ, ಪಾಂಡವರು ಪತ್ತೆಯಾದರೆ ಅವರಿಗೆ ಮತ್ತೊಂದು ವರುಷ ಅಜ್ಞಾತವಾಸವೆಂದು ದುರ್ಯೋಧನನಿಗೆ ತಿಳಿದಿತ್ತು. ಎರಡು ದಿಕ್ಕುಗಳಿಂದ ಆಕ್ರಮಣ ಮಾಡಲು ಕೌರವರ ಸೈನ್ಯ ಯೋಜಿಸಿತ್ತು. ಎರಡೂ ಬದಿಗಳಿಂದ ಆಕ್ರಮಣವಾಗಬಹುದೆಂಬ ಸುಳಿವು ಕೊನೆ ಘಳಿಗೆಯ ತನಕ ವಿರಾಟರಾಜನಿಗೆ ಸಿಕ್ಕಿರಲಿಲ್ಲ. ಕೌರವರ ಸೈನ್ಯ ಆಗಮಿಸುತ್ತಿದೆ ಎಂದು ಗೊತ್ತಾದ ಕ್ಷಣವೇ ಸ್ವಯಂ ತನ್ನ ಸೇನೆಯನ್ನು ಸಜ್ಜುಗೊಳಿಸಿ, ಯುದ್ಧಕ್ಕೆ ಹೊರಟನು. ಸ್ವಲ್ಪ ಹೊತ್ತಿನ ನಂತರ ಮತ್ತೊಂದು ಕಡೆಯಿಂದಲೂ ಆಕ್ರಮಣವಾಗುತ್ತಿದೆಯೆಂದು ಗೊತ್ತಾದ ಕ್ಷಣವೇ, ಸ್ವಾಭಾವಿಕವಾಗಿಯೇ ಅವನ ಪುತ್ರನಾದ ಉತ್ತರಕುಮಾರನನ್ನು ಯುದ್ಧಕ್ಕೆ ಕಳುಹಿಸುವ ಅವಶ್ಯಕತೆ ಬಂದಿತ್ತು. ಅವನು ಬಹಳ ಪುಕ್ಕಲನಾಗಿದ್ದನು. ಸಾಧನೆಗಳ ಪ್ರಭಾವ ಅಧಿಕವಾಗಿದ್ದಾಗ, ಸಂಘರ್ಷಗಳು ಕಡಿಮೆಯಾಗುತ್ತವೆ. ಹಾಗಾಗಿ ಈ ಉತ್ತರನಿಗೆ ಸಂಘರ್ಷಗಳ ಅನುಭವವೇ ಇಲ್ಲ. ತನ್ನ ಸಾರಥಿಯನ್ನು ತನ್ನ ತಂದೆಯವರು ಕರೆದುಕೊಂಡು ಹೋಗಿದ್ದಾರೆಂದು ಅವನು ನೆಪ ಹೇಳುತ್ತಿದ್ದನು. ಆ ಸಮಯದಲ್ಲಿ ಉತ್ತರೆಗೆ ನೃತ್ಯ ಗುರುವಾಗಿ, ಬೃಹನ್ನಳೆಯ ರೂಪದಲ್ಲಿ ಅರ್ಜುನನು ಹಾಗು ಅವಳನ್ನು ಶೃಂಗರಿಸಲು ಸೈರಂಧ್ರಿ ರೂಪದಲ್ಲಿ ದ್ರೌಪದಿ ಉಪಸ್ಥಿತರಿದ್ದರು. ಸೈರಂಧ್ರಿಯು ಉತ್ತರೆಯ ತಾಯಿಗೆ ಬೃಹನ್ನಳೆಯು ಅತ್ಯುತ್ತಮವಾಗಿ ರಥವನ್ನು ಓಡಿಸುತ್ತಾಳೆಂದೂ, ಉತ್ತರನಿಗೆ ಇವಳನ್ನು ಕರೆದುಕೊಂಡು ಹೋಗಲೆಂದೂ, ಅವನು ಎಂದೂ ಪರಾಭವನಾಗುವುದಿಲ್ಲವೆಂದೂ ಹೇಳಿದಳು. ವಿಧಿಯಿಲ್ಲದೆ ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿದರು. ಉತ್ತರನಿಗೆ ಇವನು ಅರ್ಜುನನೆಂದು ಗೊತ್ತಿರಲಿಲ್ಲ. ಅರ್ಧ ದಾರಿಯಲ್ಲಿ, ಉತ್ತರನು ಹೆದರಿಕೊಂಡು ರಥದಿಂದಿಳಿದು ಒಡಿ ಹೋಗಲು ಯತ್ನಿಸುತ್ತಾನೆ. ಬೃಹನ್ನಳೆಯು ರಥದಿಂದೆದ್ದು ಉತ್ತರನ ಹಿಂದೆ ಓಡಿ, ಅವನನ್ನು ಹಿಡಿದು ತಂದು ಸಾರಥಿಯ ಜಾಗದಲ್ಲಿ ಅವನನ್ನು ಕೂಡಿಸಿದ್ದಲ್ಲದೆ ಮತ್ತೆ ಓಡಿಹೋಗದಂತೆ ಅವನನ್ನು ಕಟ್ಟಿ ಹಾಕುತ್ತಾಳೆ! ಕೇವಲ ರಥವನ್ನು ನಡೆಸಬೇಕೆಂದೂ, ಯುದ್ಧವನ್ನು ತಾನು ಮಾಡುತ್ತೇನೆಂದು ಭೃಹನ್ನಳೆ ಹೇಳುತ್ತಾಳೆ. ರಥವನ್ನು ಸ್ಮಶಾನದೆಡೆಗೆ ಎಳೆಯುತ್ತಾಳೆ. ಶಮೀ ವೃಕ್ಷದಲ್ಲಿ ಪಾಂಡವರ ಶಸ್ತ್ರಾಸ್ತ್ರಗಳನ್ನು ಬಿಳಿಬಟ್ಟೆಯಲ್ಲಿ ಮೃತದೇಹವನ್ನು ಕಟ್ಟುವ ರೀತಿಯಲ್ಲಿ ಕಟ್ಟಿದ್ದರು. ಬೃಹನ್ನಳೆಯು ಆ ಶಮೀ ವೃಕ್ಷವನ್ನು ಹತ್ತುತ್ತಿರುವುದನ್ನು ಉತ್ತರನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದನು. ಬಿಳಿವಸ್ತ್ರದಲ್ಲಿ ಸುತ್ತಿದ್ದ ಆ ಮೃತದೇಹವನ್ನು ಬೃಹನ್ನಳೆಯು ಕೆಳಗಿಳಿಸಿ ಅದರಲ್ಲಿದ್ದ ಗಾಂಡೀವ, ಭೀಮನ ಗದೆ, ಮುಂತಾದ ಆಯುಧಗಳನ್ನು ರಥದಲ್ಲಿಟ್ಟುಕೊಳ್ಳುತ್ತಾಳೆ. ಯಾರಿಗೂ ಇದನ್ನು ಹೇಳಬಾರದೆಂದನು ಉತ್ತರನಿಗೆ ತಿಳಿಸುತ್ತಾಳೆ. ಕೌರವರ ವಿರುದ್ಧ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನು ಮಾಡಿದ ಯುದ್ಧ ಅದ್ಭುತವಾಗಿತ್ತು. ಅರ್ಜುನನು ಯುದ್ಧದಿಂದ ಭಯಭೀತನಾಗಿಲ್ಲ. ತನ್ನ ಸಹೋದರರನ್ನು, ಗುರುವನ್ನು, ತಾತನನ್ನು ಹೇಗೆ ಸಂಹರಿಸಲೆಂದು ಹತಾಶನಾದ್ದಾನೆ. ಈ ವಿಷಾದವು ಮತ್ತೊಬ್ಬರಿಗಾಗಿ.
1.11
ಅಯನೇಷು ಚ ಸರ್ವೇಷು, ಯಥಾಭಾಗಮವಸ್ಥಿತಾಃ
ಭೀಷ್ಮಮೇವಾಭಿರಕ್ಷಂತು, ಭವಂತಃ(ಸ್) ಸರ್ವ ಏವ ಹಿ ॥11॥
ಆದ್ದರಿಂದ ಎಲ್ಲ ವ್ಯೂಹದ್ವಾರಗಳಲ್ಲಿ ನಿಮ್ಮ ನಿಮ್ಮ ಜಾಗಗಳಲ್ಲಿ ಸ್ಥಿರವಾಗಿರುತ್ತ ನೀವೆಲ್ಲರೂ ನಿಸ್ಸಂದೇಹರಾಗಿ ಭೀಷ್ಮಪಿತಾಮಹರನ್ನೇ ಎಲ್ಲ ಕಡೆಯಿಂದ ರಕ್ಷಿಸಿರಿ.
ದುರ್ಯೋಧನನು, ತನ್ನ ಗುರು ದ್ರೋಣಾಚಾರ್ಯರ ಬಳಿಗೆ ಹೋಗಿ ಕೆಲವು ಮಾತುಗಳನ್ನು ಆಡಿದ ನಂತರ, ತನ್ನ ತಾತ ಭೀಷ್ಮರಿಗೆ ಕೇಳಿಸಲೆಂದೇ ಇನ್ನಷ್ಟು ಜೋರಾಗಿ, 'ಎಲ್ಲರೂ
ಅವರನ್ನು ಸರಿಯಾಗಿ ನೋಡಿಕೊಳ್ಳಿರಿ' ಎಂದು ಹೇಳುತ್ತಾನೆ.
ತಸ್ಯ ಸಂಜನಯನ್ಹರ್ಷಂ(ಙ್), ಕುರುವೃದ್ಧಃ(ಫ್) ಪಿತಾಮಹಃ
ಸಿಂಹನಾದಂ(ವ್) ವಿನದ್ಯೋಚ್ಚೈಃ(ಶ್), ಶಂಖಂ(ನ್) ದಧ್ಮೌ ಪ್ರತಾಪವಾನ್॥1.12॥
ಕೌರವರಲ್ಲಿ ವೃದ್ಧರಾದ, ಬಹಳ ಪ್ರತಾಪಿಯಾದ ಪಿತಾಮಹ ಭೀಷ್ಮರು ಆ ದುರ್ಯೋಧನನ ಹೃದಯದಲ್ಲಿ ಹರ್ಷವನ್ನುಂಟುಮಾಡುತ್ತ ಉಚ್ಚ ಸ್ವರದಲ್ಲಿ ಸಿಂಹದ ಗರ್ಜನೆಗೆ ಸಮನಾಗಿ ಗರ್ಜಿಸಿ ಶಂಖವನ್ನು ಊದಿದರು.
ದುರ್ಯೋಧನನ ಹೃದಯದಲ್ಲಿ ಹರ್ಷವನ್ನುಂಟುಮಾಡಲು ಕೌರವರಲ್ಲಿ ವೃದ್ಧರಾದ ಪಿತಾಮಹ ಭೀಷ್ಮರು ಶಂಖದಿಂದ ಸಿಂಹನಾದವನ್ನು ಮಾಡಿದರು. ವಾಸ್ತವದಲ್ಲಿ ಕೌರವ ಸೇನೆಯಲ್ಲಿ ಉಪಸ್ಥಿತರಿದ್ದವರಲ್ಲಿ ಶಂತನುವಿನ ಕಿರಿಯ ಸಹೋದರ ಹಾಗು ಭೀಷ್ಮನ ಚಿಕ್ಕಪ್ಪನಾದ ಬಾಹ್ಲಿಕಿ ಕುರುವಂಶದಲ್ಲಿ ಜ್ಯೇಷ್ಟನಾಗಿದ್ದರೂ, ಭೀಷ್ಮರಿಗೆ ಈ ದೊಡ್ಡ ಸನ್ಮಾನ ಸಿಕ್ಕಿದೆ. ಕುರುವಂಶಕ್ಕಾಗಿ ಅವರು ಮಾಡಿರುವ ತ್ಯಾಗ, ಆಜನ್ಮ ಬ್ರಹ್ಮಚಾರಿಯಾಗಿರುವೆನೆಂಬ ಅವರ ಪ್ರತಿಜ್ಞೆ, ಹಾಗು ಸಿಂಹಾಸನದ ಸೇವೆ ಈ ಎಲ್ಲವುಗಳಿಂದ ಅವರಿಗೆ ಈ ಉನ್ನತ ಸ್ಥಾನ ದೊರಕಿದೆ. ಅವರ ಪ್ರತಿಜ್ಞೆಯೇ ಅವರನ್ನು ದೊಡ್ಡವರನ್ನಾಗಿ ಮಾಡಿದೆ. ಅವರು ಅನುಭವ ಸಂಪನ್ನರು, ಅತ್ಯಂತ ಶಕ್ತಿಶಾಲಿಗಳು, ಜ್ಞಾನ ವೃದ್ಧರು, ಹಾಗು ಅನುಭವ ವೃದ್ಧರು. ಅವರ ನಡವಳಿಕೆಯೂ ಅಜ್ಜನಿಗೆ ಒಪ್ಪುವಂತೆಯೇ ಇದೆ. ಪಿತಾಮಹ ಭೀಷ್ಮರು ಕೌರವರ ಸೇನೆಯಲ್ಲಿ ಪ್ರಮುಖ ಸೇನಾಪತಿ. ಯುದ್ಧ ಆರಂಭವಾಯಿತೆಂದು ಸಾರಿ ಕೌರವರನ್ನು ಉತ್ಸಾಹಿಸಲು ಶಂಖವನ್ನು ಊದಿದರು. ಕೌರವರ ಸೇನೆಯಲ್ಲಿ ಉತ್ಸಾಹ ಸಂಚಾರ ಉಂಟುಮಾಡಲು ಇತರರು ಡೋಲು, ನಗಾರಿ, ಶಂಖ, ಭೇರಿ, ಮುಂತಾದ ರಣವಾದ್ಯಗಳನ್ನು ಮೊಳಗಿಸಿದರು.
ತತಃ(ಶ್) ಶಂಖಾಶ್ಚ ಭೇರ್ಯಶ್ಚ, ಪಣವಾನಕಗೋಮುಖಾಃ
ಸಹಸೈವಾಭ್ಯಹನ್ಯಂತ, ಸ ಶಬ್ದಸ್ತುಮುಲೋಽಭವತ್ ॥13॥
ಇದಾದ ನಂತರ ಶಂಖಗಳು, ನಗಾರಿಗಳು ಹಾಗೂ ಡೋಲು, ಮೃದಂಗ, ಕಹಳೆ ಮೊದಲಾದ ವಾದ್ಯಗಳು ಒಟ್ಟಿಗೆ ಮೊಳಗಿದವು. ಅವುಗಳ ಆ ಶಬ್ದವು ಬಹಳ ಭಯಂಕರವಾಯಿತು.
ಯೋಧರು ನಗಾರಿಗಳನ್ನು ಬಾರಿಸುತ್ತಿದ್ದಾರೆ, ಡೋಲು ಬಡಿಯುತ್ತಿದ್ದಾರೆ, ಆನಕ ಅಂದರೆ ಮೃದಂಗವನ್ನು, ಹಲವು ರೀತಿಯ ಪ್ರಾಣಿಗಳ ಮುಖವುಳ್ಳ ವಾದ್ಯಗಳನ್ನು ಬಾರಿಸುತ್ತಿದ್ದಾರೆ. ಕೊಂಬಿನಿಂದ ಮಾಡಿದ ಕಲಾತ್ಮಕತೆಯಿಂದ ಕೂಡಿದ ಕಹಳೆಗಳನ್ನು ಊದುತ್ತಿದ್ದಾರೆ. ಈ ವಾದ್ಯಗಳಿಂದ ಹಲವು ರೀತಿಯ ಭಯಂಕರ ಸದ್ದುಗಳು ಪ್ರತಿಧ್ವನಿಸಲಾರಂಭಿಸಿದವು. ಏಕ ಕಾಲಕ್ಕೆ ವಿವಿಧ ವಾದ್ಯಗಳ ಶಬ್ದಗಳು ಹೊರಹೊಮ್ಮಿದಾಗ ಕೌರವರ ಸೇನೆಯು ಅಸ್ತವ್ಯಸ್ತವಾಗಿ, ಉದ್ವೇಗೋತ್ಸಾಹಿತರಾದ ವಾತವರಣವು ನಿರ್ಮಾಣವಾಯಿತೆಂದು ಸಂಜಯನು ವರ್ಣಿಸುತ್ತಿದ್ದಾನೆ.
ತತಃ(ಶ್) ಶ್ವೇತೈರ್ಹಯೈರ್ಯುಕ್ತೇ, ಮಹತಿ ಸ್ಯಂದನೇ ಸ್ಥಿತೌ
ಮಾಧವಃ(ಫ್) ಪಾಂಡವಶ್ಚೈವ, ದಿವ್ಯೌ ಶಂಖೌ ಪ್ರದಧ್ಮತುಃ ॥14॥
ಇದಾದ ನಂತರ ಬಿಳಿಯ ಬಣ್ಣದ ಕುದುರೆಗಳಿಂದ ಯುಕ್ತವಾದ ಉತ್ತಮ ರಥದಲ್ಲಿ ಕುಳಿತಿದ್ದ ಭಗವಾನ್ ಶ್ರೀ ಕೃಷ್ಣನು ಮತ್ತು ಅರ್ಜುನನೂ ಕೂಡ ಅಲೌಕಿಕವಾದ ಶಂಖಗಳನ್ನು ಊದಿದರು.
ಪಾಂಡವರ ಸೇನೆ ಹೇಗಿದೆಯೆಂದು ಸಂಜಯನು ಹೇಳಲು ಆರಂಭಿಸುತ್ತಾನೆ.
ನಾಲ್ಕು ಬಿಳಿ ಅಶ್ವಗಳಿರುವ ದೊಡ್ಡ ರಥದ ಮೇಲೆ ಕುಳಿತಿರುವ ಶ್ರೀ ಕೃಷ್ಣ ಮತ್ತು ಅರ್ಜುನ ತಮ್ಮ ದಿವ್ಯವಾದ ಶಂಖಗಳನ್ನು ಎತ್ತಿಕೊಂಡು ಊದಲಾರಂಭಿಸಿದರು. ಇಲ್ಲಿಯ ತನಕವೂ ಅರ್ಜುನ ಧೈರ್ಯದಿಂದಲೇ ಇದ್ದಾನೆ. ಅವನ ಮನಸ್ಸಿನಲ್ಲಿ ಇನ್ನೂ ವಿಷಾದ ಸ್ಫುಟಿಸಿಲ್ಲ.
೪ ಬಿಳಿ ಅಶ್ವಗಳನ್ನು ಚಿತ್ರರತನೆಂಬ ಗಂಧರ್ವನು ಅರ್ಜುನನಿಗೆ ಕಾಣಿಕೆಯಾಗಿ ನೀಡಿದ್ದನು. ಒಂದು ಕುದುರೆ ಸತ್ತರೆ ಅದರ ಜಾಗದಲ್ಲಿ ಮತ್ತೊಂದು ಕುದುರೆಯು ಉದ್ಭವಿಸುವುದು ವಿಶೇಷತೆಯಾಗಿತ್ತು.
ಇಲ್ಲಿ ದೃಷ್ಟದ್ಯುಮ್ನ ಸೇನಾಪತಿಯಾದರೂ ಶ್ರೀಕೃಷ್ಣ ಮತ್ತು ಅರ್ಜುನರು ಶಂಖವನ್ನು ಊದುತ್ತಿದ್ದಾರೆ. ಶ್ರೀಕೃಷ್ಣನು ಶಸ್ತ್ರವನ್ನು ಹಿಡಿಯುವುದಿಲ್ಲವೆಂದು ಶಪಥ ಮಾಡಿದ್ದ, ಅದರೆ ವಾದ್ಯವನ್ನು ನಿರಾಕರಿಸಿರಲಿಲ್ಲ. ಶಂಖವು ಶಸ್ತ್ರವಲ್ಲವಾದ್ದರಿಂದ ಶ್ರೀಕೃಷ್ಣನಿಗೆ ಶಂಖ ಊದಲು ಅವನಿಗೆ ಅಧಿಕಾರವಿದೆ. ತಾನು ಯುದ್ಧ ಮಾಡದೆ ಕೃಷ್ಣ ರಣತಂತ್ರ ರೂಪಿಸಿದ್ದಾನೆ. ಸುದರ್ಶನ ಚಕ್ರದಂತಹ ಶಸ್ತ್ರ ಕೈಯಲ್ಲಿದ್ದರೂ, ಕೈಯಲ್ಲಿ ಕೊಳಲು ಹಿಡಿದಿರುವ ಮುರಳೀಧರ ಶ್ರೀಕೃಷ್ಣ ಶಕ್ತಿಸಂಪನ್ನ. ಆದರೂ ಸೃಜನ ಪ್ರೇಮಿ. ಸುಧಾಮನಂತಹ ಮಿತ್ರನನ್ನು ಪಡೆದಿರುವವನು. ಸಾರಥಿಯ ಪದವಿಯ ಗರಿಮೆ ಹೆಚ್ಚು ಮಾಡಿದವನು. ಭಗವಂತನ ಸಾರಥ್ಯದಿಂದ ರಥಿಗಿಂಥ ಸಾರಥಿ ದೊಡ್ಡವನೆನಿಸಿಕೊಂಡನು. ಈ ಭೂಮಿಕೆ ಪರಿವಾರದಲ್ಲೂ ಅಗತ್ಯವಿದೆ.
ಪಾಂಚಜನ್ಯಂ(ಮ್) ಹೃಷೀಕೇಶೋ, ದೇವದತ್ತಂ(ನ್) ಧನಂಜಯಃ
ಪೌಂಡ್ರಂ(ನ್) ದಧ್ಮೌ ಮಹಾಶಂಖಂ(ಮ್), ಭೀಮಕರ್ಮಾ ವೃಕೋದರಃ ॥15॥
ಭಗವಾನ್ ಶ್ರೀಕೃಷ್ಣನು ಪಾಂಚಜನ್ಯವೆಂಬ ಹೆಸರಿನ ಶಂಖವನ್ನೂ, ಅರ್ಜುನನು ದೇವದತ್ತವೆಂಬ ಹೆಸರಿನ ಶಂಖವನ್ನೂ ಮತ್ತು ಭಯಾನಕ ಕರ್ಮಗಳನ್ನು ಮಾಡುವ ಭೀಮಸೇನನು ಪೌಂಡ್ರವೆಂಬ ಹೆಸರಿನ ಮಹಾಶಂಖವನ್ನು ಊದಿದರು.
ಹೃಷಿಕೇಶ ಎಂದರೆ ಅಂತರ್ಯಾಮಿ. ಶ್ರೀಕೃಷ್ಣನು ಪಾಂಚಜನ್ಯವೆಂಬ ಶಂಖವನ್ನು, ಧನಂಜಯನು ದೇವದತ್ತವೆಂಬ ಶಂಖವನ್ನು ಊದಿದರು. ಧನಂಜಯ ಎಂದರೆ ಧನವನ್ನು ಜಯಿಸಿರುವವನು. ಖಾಂಡವನದಲ್ಲಿ ಇಂದ್ರಪ್ರಸ್ಥ ಎಂಬ ನವೀನ ನಗರ ಕಟ್ಟುವುದಕ್ಕಾಗಿ ಮಹಾ ಪರಾಕ್ರಮಿಯಾದ ಅರ್ಜುನನು ಅನೇಕ ರಾಜರುಗಳನ್ನು ಸೋಲಿಸಿ, ಅವರಿಂದ ಹಣ ಪಡೆದದ್ದರಿಂದ ಅರ್ಜುನನಿಗೆ "ಧನಂಜಯ" ಎಂಬ ಹೆಸರೂ ಇದೆ.
ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವ ಶ್ರೀಕೃಷ್ಣ ಹಾಗು ಅರ್ಜುನನ ಹೆಸರುಗಳಿಗೆ ತಮ್ಮದೇ ಅದ ಹಿನ್ನೆಲೆ ಇವೆ. ಗೀತೆಯು ಕೇವಲ ಶಬ್ದಗಳಿಂದಾಗಿರದೆ ಶಬ್ದಾಲಂಕಾರದಿಂದ ರಚಿತವಾಗಿದೆ. ಗೀತೆಯು ಸರ್ವಶ್ರೇಷ್ಠವಾಗಿದೆ.
ಭೀಮ ಕರ್ಮಾ ಅಂದರೆ ಭಯಾನಕವಾದ ಕರ್ಮಗಳನ್ನು ಮಾಡುವವನು, ಅತ್ಯಂತ ಕಠಿಣವಾದ ಕೆಲಸಗಳನ್ನು ಮಾಡುವವನು. ವೃಕೋದರವೆಂಬುದು ಭೀಮನ ಅಂಕಿತ. ಭೀಮನ ಉದರದಲ್ಲಿ ವೃಕೋದರವೆಂಬ ಹೆಸರಿನ ಅಗ್ನಿ ಸ್ಥಾಪಿತವಾಗಿದೆ. ನಮ್ಮೆಲ್ಲರ ಉದರದಲ್ಲಿ ಜಠರಾಗ್ನಿ ಹೆಸರಿನ ಅಗ್ನಿ ಇದೆ. ಈ ಶರೀರವು ಪಂಚ ಮಹಾಭೂತಗಳಿಂದ ಮಾಡಲ್ಪಟ್ಟಿವೆ. ಹಲವು ರೀತಿಯ ವಾಯುಗಳಿವೆ, ಅಗ್ನಿಗಳಿವೆ. ಈ ಎಲ್ಲಾ ವಾಯುಗಳು ಹಾಗು ಅಗ್ನಿಗಳನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ.
ಬಕಾಸುರ ಒಬ್ಬ ಭಯಂಕರ ರಾಕ್ಷಸ. ಅವನಿಗೆ ಪ್ರತಿನಿತ್ಯವೂ ಒಂದು ಎತ್ತಿನಗಾಡಿಯಲ್ಲಿ ಅನ್ನ, ಆಹಾರಗಳನ್ನು ತುಂಬಿ ಆ ಊರಿನ ನಿವಾಸಿಗಳು ಕಳುಹಿಸುತ್ತಿದ್ದರು. ಬಕಾಸುರನು ಆ ಆಹಾರವನ್ನಲ್ಲದೇ, ಆ ಎತ್ತಿನಗಾಡಿಯ ಎತ್ತುಗಳನ್ನು ಹಾಗು ಎತ್ತಿನಗಾಡಿಯನ್ನು ನಡೆಸುವವನನ್ನೂ ಕೊಂದು ತಿಂದು ಬಿಡುತ್ತಿದ್ದನು. ಅವನನ್ನು ನೋಡಿ ಇಡೀ ಗ್ರಾಮದವರು ಹೆದರಿದ್ದರು. ಅವನನ್ನು ಎದುರಿಸಲು ಭೀಮನು ಅನ್ನ, ಆಹಾರಗಳಿಂದ ತುಂಬಿದ ಎತ್ತಿನಗಾಡಿಯಲ್ಲಿ ಹೊರಟನು. ಬಕಾಸುರನು ಬರುವ ಸ್ಥಳಕ್ಕೆ ಅವನು ಬರುವ ಮುಂಚೆಯೇ ಬಂದು ಕುಳಿತು, ತಾನು ತಂದಿದ್ದ ಆಹಾರವನ್ನೆಲ್ಲಾ ತಾನೇ ತಿಂದುಬಿಡುತ್ತಾನೆ. ಬಕಾಸುರನಿಗಾಗಿ ತಂದ ಆಹಾರವನ್ನು ಭೀಮನು ಆಗಲೇ ತಿಂದುಬಿಟ್ಟಿದ್ದಾನೆ. ಅವನ ಉದರದಲ್ಲಿರುವ ವೃಕ ಎಂಬ ಅಗ್ನಿಯಿಂದ ಈ ಆಹಾರ ಒಂದೇ ಕ್ಷಣದಲ್ಲಿ ಪಚನವಾಗುತ್ತದೆ. ಇಂತಹ ಭೀಮನು ಪೌಂಡ್ರವೆಂಬ ಹೆಸರಿನ ಶಂಖವನ್ನು ಊದಿದನು. ಈ ಶಂಖವು ಅಸಮಾನ್ಯ ರೂಪದಲ್ಲಿರುವುದು ಹಾಗು ಭಯಂಕರ ಧ್ವನಿ ಮೊಳಗಿಸುವುದು. ಇತರ ವೀರರು ಸಹ ತಮ್ಮ ತಮ್ಮ ಶಂಖಗಳನ್ನು ಊದಿದರು.
ಅನಂತವಿಜಯಂ(ಮ್) ರಾಜಾ, ಕುಂತೀಪುತ್ರೋ ಯುಧಿಷ್ಠಿರಃ
ನಕುಲಃ(ಸ್) ಸಹದೇವಶ್ಚ, ಸುಘೋಷಮಣಿಪುಷ್ಪಕೌ ॥16॥
ಕುಂತಿಯ ಪುತ್ರನಾದ ರಾಜಾ ಯುಧಿಷ್ಠಿರನು ಅನಂತವಿಜಯವೆಂಬ ಹೆಸರಿನ ಮತ್ತು ನಕುಲ ಹಾಗೂ ಸಹದೇವರು ಸುಘೋಷ ಮತ್ತು ಮಣಿಪುಷ್ಪಕವೆಂಬ ಹೆಸರಿನ ಶಂಖಗಳನ್ನು ಊದಿದರು.
ಅನಂತವಿಜಯವೆಂಬ ಶಂಖವನ್ನು ಕುಂತಿಪುತ್ರ, ರಾಜ ಯುಧಿಷ್ಠಿರನು ಊದಿದನು. ಅವನು ಹಿಂದೆಯೂ ರಾಜನಾಗಿದ್ದನು, ಮುಂದೆಯೂ ಆಗುವವನು ಎಂಬುದನ್ನು ಅರಿತಿರುವ ಚತುರನಾದ ಸಂಜಯನು ಯುಧಿಷ್ಠಿರನನ್ನು ರಾಜನೆಂದು ಸಂಬೋಧಿಸಿದ್ದಾನೆ. ಆದರೆ ಸಂಜಯನ ರಾಜ ಧೃತರಾಷ್ಟ್ರ. ಅವನ ನಂತರ ಅವನ ಮಗ ದುರ್ಯೋಧನ ರಾಜನಾಗಬೇಕಿತ್ತು. ಸಂಜಯನು ಬಹಳ ಯುಕ್ತಿಯಿಂದ ಕುಂತಿಪುತ್ರನಾದ ಯುಧಿಷ್ಠಿರನನ್ನು ರಾಜನೆಂದಿದ್ದಾನೆ. ಪಾಂಡುವನ್ನು ನೆನಪಿಸುತ್ತಿದ್ದಾನೆ. ಪಾಂಡುವಿನ ಹಿರಿಯ ಪುತ್ರನಾದ ಯುಧಿಷ್ಠಿರನಿಗೆ ರಾಜ್ಯ ಸಿಗಬೇಕಿತ್ತು. ವಾಸ್ತವವಾಗಿ ಅವನೇ ರಾಜನಾಗಬೇಕಿತ್ತು. ಸಂಜಯನ ಮಾತುಗಳಲ್ಲಿ ಪರಮಾರ್ಥವು ಅಡಗಿದೆ. ಎರಡು ಶಬ್ದಗಳ ನಡುವೆ ಇರುವ ಅರ್ಥವನ್ನು ತಿಳಿಯಬೇಕಾಗಿದೆ.
ನಕುಲ ಹಾಗು ಸಹದೇವರು ಸುಘೋಷ ಹಾಗು ಮಣಿಪುಷ್ಪಕಗಳೆಂಬ ಶಂಖಗಳನ್ನು ಊದಿದರು. ಸುಘೋಷದ ಧ್ವನಿ ಅತ್ಯದ್ಭುತವಾಗಿದೆ, ಹಾಗು ಹಿತವಾದ ಶಬ್ದವನ್ನುಂಟು ಮಾಡುವಂತಹದ್ದು.
ಕಾಶ್ಯಶ್ಚ ಪರಮೇಷ್ವಾಸಃ(ಶ್), ಶಿಖಂಡೀ ಚ ಮಹಾರಥಃ
ಧೃಷ್ಟದ್ಯುಮ್ನೋ ವಿರಾಟಶ್ಚ, ಸಾತ್ಯಕಿಶ್ಚಾಪರಾಜಿತಃ ॥17॥
ಶ್ರೇಷ್ಠವಾದ ಧನುಸ್ಸುಳ್ಳ ಕಾಶಿರಾಜನು ಮತ್ತು ಮಹಾರಥಿಯಾದ ಶಿಖಂಡೀ ಹಾಗೂ ಧೃಷ್ಟದ್ಯುಮ್ನ, ರಾಜಾ ವಿರಾಟನು ಮತ್ತು ಅಜೇಯನಾದ ಸಾತ್ಯಕಿಯು, ರಾಜನಾದ ದ್ರುಪದನು,
1.17 writeup
ದ್ರುಪದೋ ದ್ರೌಪದೇಯಾಶ್ಚ, ಸರ್ವಶಃ(ಫ್) ಪೃಥಿವೀಪತೇ
ಸೌಭದ್ರಶ್ಚ ಮಹಾಬಾಹುಃ(ಶ್), ಶಂಖಾಂದಧ್ಮುಃ(ಫ್) ಪೃಥಕ್ಪೃಥಕ್ ॥18॥
ದ್ರೌಪದಿಯ ಐವರು ಪುತ್ರರು ಮತ್ತು ಮಹಾಬಾಹುವಾದ ಸುಭದ್ರಾಪುತ್ರ ಅಭಿಮನ್ಯುವು - ಇವರೆಲ್ಲರೂ ಎಲ್ಲ ಕಡೆಗಳಿಂದ ಬೇರೆ-ಬೇರೆಯಾಗಿ ಶಂಖಗಳನ್ನು ಊದಿದರು.
ಒಬ್ಬೊಬ್ಬರಾಗಿ ಎಲ್ಲರೂ ತಮ್ಮ ತಮ್ಮ ಶಂಖವನ್ನು ತೆಗೆದು ಊದಿಸಲಾರಂಭಿಸಿದರು. ಹೇ ರಾಜಾ, ಯಾರ್ಯಾರು ಇದ್ದಾರೆಂದು ಕೇಳಿರಿ. ಕಾಶಿರಾಜ ನರೇಶ, ಮಹಾರಥಿ ಶಿಖಂಡಿ ದೊಡ್ಡ ದೊಡ್ಡ ಧನುಸ್ಸನ್ನು ಹಿಡಿದಿರುವರು.
ಶಿಖಂಡಿ ನಪುಂಸಕ. ಜನ್ಮತಹ ಅವನು ಸ್ತ್ರೀಯಾದರೂ, ಯಕ್ಷನೆಂಬ ರಾಕ್ಷಸನನ್ನು ಕುರಿತು ಕಠೋರ ತಪಸ್ಸು ಮಾಡಿದನು. ಯಕ್ಷನು ಪ್ರಸನ್ನನಾಗಿ ಪುರುಷತ್ವದ ವರವನ್ನು ನೀಡಿದನು. ಪುರುಷನಾಗಿ ಯುದ್ಧದಲ್ಲಿ ಸಮ್ಮಿಲಿತನಾಗಿದ್ದಾನೆ. ಆದರೆ ಭೀಷ್ಮರಿಗೆ ಇವನು ಸ್ತ್ರೀ ಎಂದು ತಿಳಿದಿದೆ ಮತ್ತು ಅವನ ಮೇಲೆ ಬಾಣ ಹೂಡುವುದಿಲ್ಲವೆಂದು ಖಚಿತವಾಗಿ ಎಲ್ಲರಿಗೂ ಇಳಿದಿದೆ. ಆದರೆ ಶಿಖಂಡಿ ಬಾಣ ಹೂಡಿದರೆ, ಭೀಷ್ಮರ ವಧೆಯಾಗುವುದೆಂಬ ಚಿಂತೆಯಿಂದ ದುರ್ಯೋಧನನು ತನ್ನ ಎಲ್ಲಾ ಸೈನಿಕರನ್ನು ಕರೆದು ಭೀಷ್ಮರ ಸಂರಕ್ಷಣೆಯನ್ನು ಮಾಡಿರೆಂದು ಹೇಳಿದುದರ ಕಾರಣ ಶಿಖಂಡಿಯು ಎದುರು ನಿಂತಿರುವುದಾಗಿದೆ.
ಧೃಷ್ಟದ್ಯುಮ್ನನಿದ್ದಾನೆ. ರಾಜ ವಿರಾಟನಿದ್ದಾನೆ. ವಿರಾಟ ರಾಜನ ಪುತ್ರಿ ಉತ್ತರೆಯ ವಿವಾಹವು ಅರ್ಜುನನ ಪುತ್ರನೊಂದಿಗೆ ಆಗುತ್ತದೆ. ವಿರಾಟನಿಗೆ ಉತ್ತರೆ ಅರ್ಜುನನ ಮಡದಿಯಾಗಬೇಕೆಂಬ ಇಚ್ಛೆಯಿದ್ದಿತು. ಆದರೆ ಅರ್ಜುನ, ತಾನು ಅವಳಿಗೆ ಗುರು ಹಾಗು ಪಿತನ ಸಮಾನನೆಂದು, ಅವಳು ತನ್ನ ಪುತ್ರಿಗೆ ಸಮಾನಳೆಂದು, ಆಕೆಯನ್ನು ಅಭಿಮನ್ಯುವಿನ ಜೊತೆ ವಿವಾಹ ಮಾಡಿಸುತ್ತಾನೆ.
ಅಜೇಯ ಸಾತ್ಯಕಿ, ರಾಜಾ ದ್ರುಪದ, ದ್ರೌಪದಿಯ ಐವರು ಪುತ್ರರು, ಉದ್ದವಾದ ಭುಜಗಳುಳ್ಳ ಸುಭದ್ರೆಯ ಪುತ್ರ ಅಭಿಮನ್ಯು, ಇವರೆಲ್ಲರೂ ವಿವಿಧ ನಮೂನೆಯ ತಮ್ಮ ತಮ್ಮ ಶಂಖಗಳನ್ನು ಊದಿದರು. ಇದರಿಂದ ಭಯಾನಕವಾದ ಸದ್ದುಗಳು ಪ್ರತಿಧ್ವನಿಸುತ್ತಿದ್ದವು.
ಸ ಘೋಷೋ ಧಾರ್ತರಾಷ್ಟ್ರಾಣಾಂ(ಮ್), ಹೃದಯಾನಿ ವ್ಯದಾರಯತ್
ನಭಶ್ಚ ಪೃಥಿವೀಂ(ಞ್) ಚೈವ, ತುಮುಲೋ ವ್ಯನುನಾದಯನ್ ॥19॥
ಮತ್ತು ಆ ಭಯಾನಕವಾದ ಶಬ್ದವು ಆಕಾಶ ಮತ್ತು ಪೃಥ್ವಿಯನ್ನು ಸಹ ಪ್ರತಿಧ್ವನಿಗೊಳಿಸುತ್ತ ದುರ್ಯೋಧನಾದಿಗಳ ಅಂದರೆ ನಿಮ್ಮ ಪಕ್ಷದವರ ಹೃದಯಗಳನ್ನು ಭೇದಿಸಿತು.
ಪಾಂಡವ ಸೇನೆಯ ಶಂಖ ಧ್ವನಿಯ ಕಾರಣ ಭಯಂಕರ ನಾದವು ಉತ್ಪನ್ನವಾಗುತ್ತಿದೆ. ಆಕಾಶ ಮತ್ತು ಪೃಥ್ವಿಯನ್ನು ಕಂಪಿಸುವಂತಹ ಈ ಪ್ರತಿಧ್ವನಿಯು ಧೃತರಾಷ್ಟ್ರನ ಸೇನೆಯ ಹೃದಯವನ್ನು ಸೀಳುವಂತಹ ಶಬ್ದವಾಗಿದೆ. ಇದನ್ನು ಧೃತರಾಷ್ಟ್ರನಿಗೆ ಸಂಜಯ ಸುಂದರ ಶಬ್ದಗಳಲ್ಲಿ ತಿಳಿಸುತ್ತಾನೆ. ಇಲ್ಲಿ ಧಾರ್ತರಾಷ್ಟ್ರ ಎಂಬುದು ಬಹಳ ಅಲಂಕಾರಯುಕ್ತ ಶಬ್ದವಾಗಿದೆ. ಇದು ಶ್ಲೇಷಾಲಂಕಾರವಾಗಿದೆ. ಧೂರ್ತತೆಯಿಂದ ರಾಷ್ಟ್ರವನ್ನು ಕಸಿದುಕೊಂಡವನು ಹಾಗು ಧೈರ್ಯದಿಂದ ರಾಜ್ಯವನ್ನು ಆಳುವವನು ಎಂಬರ್ಥವೂ ಇದೆ.
ಕೌರವರ ಕಡೆ ಇರುವ ೧೧ ಅಕ್ಷೋಹಿಣಿ ಸೇನೆಯಲ್ಲಿ ೨ ಅಕ್ಷೋಹಿಣಿ ಸೇನೆ ಪಾಂಡವಪಕ್ಷಪಾತಿಎಂದು ಗೊತ್ತಿದೆ. ಎರಡನೇ ಅಕ್ಷೌಹಿಣಿ ಮದ್ರ ರಾಜನಾದ ಶಲ್ಯನದು. ಇವನು ಮಾದ್ರಿಯ ಸಹೋದರ, ಕಿರಿಯ ಪಾಂಡವರಾದ ನಕುಲ ಸಹದೇವರ ಸ್ವಂತ ಸೋದರ ಮಾವ.
ಕರ್ಣನನ್ನು ಸೇನಾಪತಿಯನ್ನಾಗಿ ಮಾಡಿದಾಗ, ಕರ್ಣನಿಗೆ ಸಾರಥಿ ಯಾರಾಗಬೇಕೆಂದು ಪ್ರಶ್ನೆ ಎದುರಾಗುತ್ತದೆ. ಮದ್ರ ನರೇಶ ಶಲ್ಯನಿಗೆ ಕುದುರೆಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಶಲ್ಯನು ಸಾರಥ್ಯ ವಿದ್ಯೆಯ ಪ್ರವೀಣ. ಕೌರವರಲ್ಲಿ ಒಳ್ಳೆಯ ಸಾರಥಿಯೆಂದರೆ ಇವನೇ. ಕರ್ಣನ ಸಾರಥಿಯಾಗಬೇಕೆಂಬ ದುರ್ಯೋಧನನ ಮಾತಿಗೆ ಒಪ್ಪಲು ಶಲ್ಯ ಎರಡು ಷರತ್ತುಗಳನ್ನು ವಿಧಿಸುತ್ತಾನೆ. ಸಾರಥ್ಯವಲ್ಲದೇ ಬೇರೇನನ್ನೂ ಮಾಡುವುದಿಲ್ಲ ಮತ್ತು ಕರ್ಣ ನನಗೆ ಯಾವ ಸೂಚನೆಯೂ ಕೊಡಬಾರದೆಂಬುದೇ ಈ ಷರತ್ತುಗಳು. ಶಲ್ಯನ ಷರತ್ತುಗಳಿಗೆ ದುರ್ಯೋಧನನು ಒಪ್ಪಿದ ವಿಷಯ ಶ್ರೀಕೃಷ್ಣನಿಗೆ ನಾರಾಯಾಣಿ ಸೇನೆಯ ಮೂಲಕ ತಿಳಿಯಿತು. ರಾತ್ರಿಯ ಸಮಯದಲ್ಲಿ ಭಗವಂತ ಶ್ರೀಕೃಷ್ಣನು ಶಲ್ಯನ ಡೇರೆಗೆ ಹೋಗಿ, ಮಾವ ನೀವು ಪಾಂಡವರ ಪಕ್ಷದಲ್ಲಿರಬೇಕಿತ್ತು. ಹೀಗೇಕೆ ಮಾಡಿದ್ದೀರಿ ಎಂದು ಕೇಳುತ್ತಾನೆ. ಶಲ್ಯನು ತಾನು ವಚನ ಕೊಟ್ಟುಬಿಟ್ಟಿದ್ದೇನೆಂದು ತಿಳಿಸುತ್ತಾನೆ. ಕರ್ಣನನ್ನು ಹೆಜ್ಜೆ ಹೆಜ್ಜೆಗೆ ಧೈರ್ಯಗೆಡಿಸುವಂತೆ ಕೃಷ್ಣನು ಶಲ್ಯನಿಗೆ ಮನವರಿಕೆ ಮಾಡುತ್ತಾನೆ.
ಮಾರನೆಯ ದಿನ ಕರ್ಣ ರಥವನ್ನೇರಿ ಒಂದು ಹೆಜ್ಜೆ ಇಟ್ಟ ಕ್ಷಣವೇ ಅಪಶಕುನವಾಗಿದೆ, ಮುಹೂರ್ತ ಸರಿಯಿಲ್ಲ, ಇಂದು ನಿನ್ನ ಗ್ರಹಗತಿಗಳು ಸರಿಯಿಲ್ಲ ಎಂದು ಶಲ್ಯ ಕರ್ಣನ ರಣೋಥ್ಸಾಹಕ್ಕೆ ಅಡ್ಡಿಯೊಡ್ಡುತ್ತಾನೆ. ಒಂದು ಕಡೆ ಉತ್ಸಾಹಿತುಂಬುವ ಶ್ರೀಕೃಷ್ಣ ಸಾರಥಿಯಾಗಿದ್ದಾನೆ. ಮತ್ತೊಂದೆಡೆ ಉತ್ಸಾಹವನ್ನು ಕುಗ್ಗಿಸುವ ಶಲ್ಯ ಸಾರಥಿಯಾಗಿದ್ದಾನೆ. ಈ ಎಲ್ಲಾ ಶಂಖಗಳ ನಾದದಿಂದ ಎಲ್ಲರಿಗೂ ಹೆದರಿಕೆಯುಂಟಾಯಿತು.
ಅಥ ವ್ಯವಸ್ಥಿತಾಂದೃಷ್ಟ್ವಾ, ಧಾರ್ತರಾಷ್ಟ್ರಾನ್ ಕಪಿಧ್ವಜಃ
ಪ್ರವೃತ್ತೇ ಶಸ್ತ್ರಸಂಪಾತೇ, ಧನುರುದ್ಯಮ್ಯ ಪಾಂಡವಃ ॥20॥
ಹೇ ರಾಜಾ ! ಇದಾದನಂತರ ಕಪಿಧ್ವಜನಾದ ಅರ್ಜುನನು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿರುವ ಧೃತರಾಷ್ಟ್ರನ ಸಂಬಂಧಿಗಳನ್ನು ನೋಡಿದವನಾಗಿ ಆ ಶಸ್ತ್ರ ಪ್ರಯೋಗ ಸಿದ್ಧತೆಯ ಸಮಯದಲ್ಲಿ ಧನುಸ್ಸನ್ನು ಎತ್ತಿಕೊಂಡು ಹೃಷೀಕೇಶನಾದ ಭಗವಾನ್ ಶ್ರೀ ಕೃಷ್ಣನಿಗೆ ಈ ವಚನವನ್ನು ಹೇಳಿದನು.
ಸಂಜಯನು ಧೃತರಾಷ್ತ್ರನಿಗೆ ಹೇಳುತ್ತಿದ್ದಾನೆ: ಹೇ ಮಹೀಪತೇ, ಪೃಥ್ವಿಯ ರಾಜನೇ, ಈಗ ಶಸ್ತ್ರವನ್ನು ಹೇಗೆ ಚಲಿಸಬೇಕೆಂಬ ತಯಾರಿ ನಡೆಯುತ್ತಿದೆ. ಆ ಸಮಯದಲ್ಲಿ ಆನ್ಯಾಯವಾಗಿ ರಾಜ್ಯವನ್ನು ಧಾರಣೆ ಮಾಡಿದ ರಾಜರು, ಹಾಗು ಅವರ ಜೊತೆಯವರು ವ್ಯವಸ್ಥಿತರೂಪದಲ್ಲಿ ನಿಂತಿರುವುದನ್ನು ನೋಡಿ ಕಪಿಧ್ವಜನು, ಪಾಂಡು ಪುತ್ರ ಅರ್ಜುನನು ತನ್ನ ಗಾಂಡೀವಿ ಧನುಸ್ಸನ್ನು ಎತ್ತಿ ಹಿಡಿದು, ಅಂತರ್ಯಾಮಿ ಶ್ರೀಕೃಷ್ಣನಿಗೆ ಏನು ಹೇಳುತ್ತಾನೆಂಬುದನ್ನು ಮುಂದಿನ ಸತ್ರದಲ್ಲಿ ತಿಳಿದುಕೊಳ್ಳೋಣವೆಂದರು ವಿವೇಚಕರು.