विवेचन सारांश
ಪರಮಾತ್ಮ ತತ್ತ್ವದ ಜೊತೆಗೆ ಏಕಾಕಾರವಾಗುವ ಮಾರ್ಗಗಳು

ID: 6235
कन्नड़ - ಕನ್ನಡ
ಶನಿವಾರ, 11 ಜನವರಿ 2025
ಅಧ್ಯಾಯ 13: ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ
3/3 (ಶ್ಲೋಕ 22-34)
ವಿವೇಚನಕಾರರು: ಗೀತಾ ವಿದುಷಿ ಸೌ. ವಂದನ ವರ್ಣೇಕರ್ ಜಿ


ಇಂದಿನ ವಿವೇಚನಾ ಸತ್ರವು ಭಕ್ತಿ ತುಂಬಿದ ಪ್ರಾರ್ಥನೆಯೊಂದಿಗೆ, ಪ್ರಕಾಶಮಾನವಾದ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು. ವಿವೇಚಕರ ಮಾವನವರಾದ ಪರಮ ಆಧರಣೀಯ, ಸಂಸ್ಕೃತ ಕವಿಗಳಲ್ಲಿ ಒಬ್ಬರಾದ ಪ್ರಜ್ಞಾ ಭಾರತಿ ಡಾಕ್ಟರ್ ಶ್ರೀಭಾವರ್ಣಿಕರ್ ರವರ ಸರ್ವೋಪರಿ ಪರಮಪ್ರಿಯ ಅಧ್ಯಾಯ ಇದಾಗಿತ್ತು. ನಾವು ಕ್ಷೇತ್ರ ಕ್ಷೇತ್ರಜ್ಞ ಯೋಗ ಎಂಬ ಅಧ್ಯಾಯದ ಉತ್ತರಾರ್ಧವನ್ನು ನೋಡುತ್ತಿದ್ದೇವೆ. ಇದು ಹೇಗೆ ನಮಗೆ ಮಾರ್ಗವನ್ನು ಸೂಚಿಸುತ್ತದೆ ಎಂದು ನೋಡೋಣ.

ಭಗವಂತನ ಅಸೀಮ ಕೃಪೆಯಿಂದ, ಗುರುಗಳ ಅನುಕಂಪದಿಂದ, ಅವರ ಚರಣ ಕಮಲಗಳಿಗೆ ನತಮಸ್ತಕರಾಗುತ್ತಾ, ಗುರುವಂದನೆ ಮಾಡುತ್ತಾ, ಭಗವದ್ಗೀತೆ ಧ್ಯಾನ ಶ್ಲೋಕದೊಂದಿಗೆ, ಸರಸ್ವತಿ ಮಾತೆಗೆ, ಸಂತ ಜ್ಞಾನೇಶ್ವರ ಮಹಾರಾಜರಿಗೆ ವಂದಿಸುತ್ತಾ, ಸದ್ಗುರು ಗೋವಿಂದ್ ಗಿರಿದೇವ್ ಮಹಾರಾಜರಿಗೆ ಕೋಟಿ-ಕೋಟಿ ಪ್ರಣಾಮಗಳನ್ನು ಮಾಡುತ್ತಾ, ಎಲ್ಲಾ ಗೀತಾ ಪ್ರೇಮಿ ಸಾಧಕರಿಗೆ ಅಭಿನಂದಿಸುತ್ತಾ, ವಿವೇಚಕರು ಇಂದಿನ ಮಹತ್ವಪೂರ್ಣ ಅಧ್ಯಾಯದ ವಿವೇಚನೆಯನ್ನು ಆರಂಭಗೊಳಿಸಿದರು.

ಪ್ರಕೃತಿ ನಿತ್ಯ ಪರಿವರ್ತನಾಶೀಲವಾಗಿರುತ್ತದೆ. ಇದು ಬದಲಾಗುತ್ತಾ ಹೊಸ ಹೊಸ ರೂಪಗಳನ್ನು ಹೊಂದುತ್ತಿರುತ್ತದೆ. ಮಕರ ಸಂಕ್ರಾಂತಿ ಬಂತೆಂದರೆ ಉತ್ತರಾಯಣ ಪರ್ವಕಾಲ ಪ್ರಾರಂಭವಾಗುತ್ತದೆ. ನಂತರ ವಸಂತ ಋತುವಿನ ಆಗಮನ. ಕೆಲವೊಂದು ಅಪವರ್ತನ ಶೀಲ ಬದಲಾವಣೆಗಳನ್ನು ಕಾಣಲಾಗುವುದಿಲ್ಲ, ಆದರೆ ಪರಿವರ್ತನಾಶೀಲ ಬದಲಾವಣೆಗಳನ್ನು ಸುಲಭವಾಗಿ ಗಮನಿಸಬಹುದು. ಇದೇ ರೀತಿ ಈ ಪ್ರಕೃತಿ ಮತ್ತು ಸಂಸಾರ ಯಾವ ಅಪವರ್ತನ ಶೀಲ ತತ್ತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆಯೋ, ಅವೆರಡರ ಸಂಗಮವನ್ನೇ ಕ್ಷೇತ್ರ ಕ್ಷೇತ್ರಜ್ಞ  ಯೋಗ ಎನ್ನಬಹುದು. ಕೇವಲ ಈ ಪ್ರಕೃತಿಯಲ್ಲಿ ಕಾಣುವ ದೃಶ್ಯ ಬದಲಾವಣೆಗಳನ್ನೇ ಸತ್ಯವೆಂದು ತಿಳಿಯಬಾರದು, ಅದರ ಅದಿಷ್ಟಾನವಾದ ಚೈತನ್ಯ ತತ್ತ್ವವನ್ನು ನಾವು ತಿಳಿಯಬೇಕು.  ಭಗವಂತನು ಈ ಪ್ರತ್ಯೇಕತೆಯನ್ನೇ ಈ ಅಧ್ಯಾಯದಲ್ಲಿ ತೋರಿಸುತ್ತಿದ್ದಾನೆ.

ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಂ
ಅಂಬ ತ್ವಾಂ ಅನುಸಂದಧಾಮಿ ಭಗವದ್ಗೀತೇ ಭವದ್ವೇಷಿಣೀಮ್ ॥೧ll  
 ಈ ಅದ್ವೈತ, ಆ ಭಗವಂತನೊಂದಿಗೆ ಏಕಾಕಾರನಾಗಿ ತೋರಿಸುವ ದಾರಿ ಸರ್ವೋಪರಿಯಾಗಿರುತ್ತದೆ. ನಾವುಗಳು ಮಹಾಭಾಗ್ಯಶಾಲಿಗಳು, ಯಾಕೆಂದರೆ ನಾವು ಪರಮಪೂಜ್ಯ ಗುರುಗಳ ಅನುಯಾಯಿಗಳು. ಗುರುಗಳು ನಮ್ಮ ಹಾದಿಯನ್ನು ಪ್ರಶಸ್ತ ಹಾಗೂ ಸುಲಭ ಮಾಡಿದ್ದಾರೆ. ನಾವುಗಳು ಅವರ ಜ್ಞಾನಧಾರೆಯ ಚಿಂತನೆಯ ಆಧಾರದ ಮೇಲೆ ಅಲ್ಲಿಗೆ ಹೋಗಲು ಬಯಸುತ್ತಿದ್ದೇವೆ.

ಕ್ಷೇತ್ರವೆಂದರೆ ಜಡ, ಕ್ಷೇತ್ರಜ್ಞ ನೆಂದರೆ ಚೈತನ್ಯ. ಇವೆರಡರ ಮಿಲಾಪದಿಂದ ಕಾರ್ಯ ಉಂಟಾಗುತ್ತದೆ. ಈ ಸಿದ್ಧಾಂತವನ್ನು ವಿಜ್ಞಾನದಲ್ಲಿ energy ಮತ್ತು matter ನ ಸಹಾಯದಿಂದ ವಿವರಿಸಲಾಗಿದೆ. ಈ ಪರಮ ತತ್ತ್ವ ವನ್ನು ಪರಬ್ರಹ್ಮ ಅಥವಾ ಅನಂತ ಕೋಟಿ ಬ್ರಹ್ಮಾಂಡ ಎನ್ನುತ್ತೇವೆ. ಈ ಬ್ರಹ್ಮಾಂಡದಲ್ಲಿ ಅನೇಕ ಆಕಾಶಗಂಗೆಗಳು ಸಮಾವೇಶಗೊಂಡಿವೆ. ಅದರ ಆಧಾರದಿಂದ ಕಾರ್ಯಗಳು ನಡೆಯುತ್ತವೆ. ಈ ಪರಬ್ರಹ್ಮ  ತತ್ತ್ವವೆಂಬುದು ಒಂದೇ, ಆದರೆ ಇದು ಹಲವು ಕ್ಷೇತ್ರಗಳಲ್ಲಿ ಪ್ರತಿಬಿಂಬಿತಗೊಂಡಿದೆ. ಪ್ರತಿಬಿಂಬ ಎನ್ನುವುದು ಕ್ಷೇತ್ರಜ್ಞ. ಹಲವು ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿ ಬಾನಿನ ಚಂದಿರನ ಪ್ರತಿಬಿಂಬವನ್ನು ಪಡೆದ ಹಾಗೆ. ಚಂದಿರ ಒಬ್ಬನೇ, ಪ್ರತಿಬಿಂಬ ಹಲವು. ಈ ಪ್ರತಿಬಿಂಬವೇ ಕ್ಷೇತ್ರಜ್ಞ. ನಾವು ಮೂಲದಲ್ಲಿ ಪರಬ್ರಹ್ಮ ತತ್ತ್ವ ವನ್ನು ಅರಿಯಬೇಕು. ಚೈತನ್ಯ ಎನ್ನುವುದು ಎಲ್ಲರನ್ನೂ  ಜಾಗೃತಗೊಳಿಸಿ ಕಾರ್ಯವನ್ನು ನಿರ್ವಹಿಸುತ್ತದೆ.

ಈ ಪರಬ್ರಹ್ಮ ತತ್ತ್ವಕ್ಕೆ ಸರ್ವತ್ರ ಪಾದಗಳಿವೆ, ಕೈಗಳಿವೆ. ಈ ಪರಬ್ರಹ್ಮ ತತ್ತ್ವ ಸರ್ವತ್ರ ವಿದ್ಯಮಾನವಾಗಿರುತ್ತದೆ. ಸ್ಥೂಲ ಮತ್ತು ಸೂಕ್ಷ್ಮ ಒಂದಾಗಿ ಹೇಗೆ ಕಾರ್ಯ ಸಂಭವಿಸುತ್ತದೆಯೋ ಹಾಗೆ ದೃಶ್ಯಮಾನವಾದದ್ದು ಜಡವಾಗಿರುತ್ತದೆ, ಅದೃಶ್ಯಮಾನವಾದದ್ದು ಚೈತನ್ಯವಾಗಿರುತ್ತದೆ ಮತ್ತು ವ್ಯಾಪಕವಾಗಿರುತ್ತದೆ.

ಒಂದು ಅಯಸ್ಕಾಂತ ಹೇಗೆ ಲೋಹಗಳ ಚೂರುಗಳನ್ನು ಕಾರ್ಯಶೀಲವನ್ನಾಗಿಸುತ್ತದೆಯೋ, ಹಾಗೆಯೇ ಈ ಪ್ರಕೃತಿಯನ್ನು ಚೈತನ್ಯತತ್ತ್ವ ಕಾರ್ಯಶೀಲವನ್ನಾಗಿಸಿದೆ. ಈ ಪ್ರತಿಬಿಂಬ, ತಾನೂ ಬಿಂಬದ ಪ್ರತಿಬಿಂಬವೆಂದು ಮರೆತು ಪ್ರಕೃತಿಯ ಗುಣಗಳನ್ನೇ ಅಳವಡಿಸಿಕೊಂಡು, ಸುಖ ದುಃಖಗಳಲ್ಲಿ ತೊಡಗಿಸಿಕೊಳ್ಳುತ್ತದೆ.  

ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್ |
ಕಾರಣಂ ಗುಣಸಂಗೋ‌Sಸ್ಯ ಸದಸದ್ಯೋನಿಜನ್ಮಸು || (೧೩. ೨೧)

ಜಡ ಚೈತನ್ಯದಲ್ಲಿ ಬಿಂಬದ ಪ್ರತಿಬಿಂಬವಾಗಿ ಸ್ಥಿತವಾಯಿತು. ಬಿಂದಿಗೆಯ ಪ್ರತಿಬಿಂಬ ಅದನ್ನೇ ತನ್ನ ಸ್ವರೂಪವೆಂದು ತಿಳಿದು ಸತ್ವ, ರಜೊ, ತಮೋ ಗುಣಗಳ ಅನುಗುಣವಾಗಿ ಕಾರ್ಯವನ್ನು ಮಾಡಲಾರಂಬಿಸುತ್ತದೆ. ಪ್ರಕೃತಿಯಲ್ಲಿ ಸ್ಥಿತನಾಗಿರುವಂತಹ ಈ ಪುರುಷ ತಾನು ದೇಹವೆಂದೇ ಭಾವಿಸಿ ಈ ಮೂರು ಗುಣಗಳನ್ನು ಅನುಭವಿಸುತ್ತಿದ್ದಾನೆ. ಪಾಪ ಪುಣ್ಯದ ಚಕ್ರದಲ್ಲಿ ಸಿಲುಕಿ ಹಲವು ಜನ್ಮಗಳನ್ನು ಪಡೆಯುತ್ತಿದ್ದಾನೆ. ಆನಂದದ ಮೂಲ ಸ್ವರೂಪವನ್ನು ಮರೆತು ಸುಖ ದುಃಖಗಳ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆ. ಅನುಕೂಲ ಸ್ಥಿತಿಯಲ್ಲಿ ಮೈಮರೆತು ಬಿಡುತ್ತಿದ್ದಾನೆ. ಪ್ರತಿಕೂಲ ಸ್ಥಿತಿಯಲ್ಲಿ ಖಿನ್ನತೆಗೆ ಒಳಗಾಗುತ್ತಿದ್ದಾನೆ.

ನಮ್ಮೆಲ್ಲರ ಒಳಗೂ ಅದೇ ಪರಮಾತ್ಮನ ಅಂಶವಿದೆ ಎಂದ ಮೇಲೆ ನಮ್ಮ ಕಾರ್ಯಗಳಲ್ಲಿ ಏಕೆ ಭಿನ್ನತೆ ಇದೆ? ನಮ್ಮ ಮನೆಗೆ ಅಳವಡಿಸಿರುವ ವಿದ್ಯುತ್ ಶಕ್ತಿ ಒಂದೇ ಆದರೂ, ಅದು ಬೇರೆ ಬೇರೆ ಉಪಕರಣಗಳಿಗೆ ಅಳವಡಿಸಿದಾಗ ಅದರ ಕಾರ್ಯ ಸ್ವರೂಪ ಬೇರೆ ಬೇರೆ ಆಗಿರುತ್ತದೆ. ಹೀಟರ್ ನಲ್ಲಿ ವಿದ್ಯುತ್ ಶಕ್ತಿ ಬಿಸಿಯನ್ನು ಉಂಟುಮಾಡಿದರೆ, ರೆಫ್ರಿಜರೇಟರ್ ಅಥವಾ ಎ ಸಿ ಯಲ್ಲಿ ಅದೇ ವಿದ್ಯುತ್ ಶಕ್ತಿ ತಂಪಿನ ಅನುಭವ ಕೊಡುತ್ತದೆ. 200 W ಬಲ್ಬ್ ನಲ್ಲಿ ವಿದ್ಯುತ್ ಶಕ್ತಿ ಪ್ರಕಾಶಮಾನವಾಗಿಯೂ, 40 W ಬಲ್ಬಿನಲ್ಲಿ ವಿದ್ಯುತ್ ಶಕ್ತಿ ಕಡಿಮೆ ಪ್ರಕಾಶಮಾನವಾಗಿಯೂ ಇರುತ್ತದೆ. ಈ ವಿದ್ಯುತ್ ಶಕ್ತಿಯ ಕೆಲಸವನ್ನು ಆ ಉಪಕರಣದ watt ನಿರ್ಧರಿಸುತ್ತದೆ. ಎಲ್ಲರಲ್ಲೂ ಪ್ರತಿಬಿಂಬ ಬಿಂಬದ್ದೇ ಇರುವಾಗ ನಮ್ಮಲ್ಲಿ ಕೆಲವರು ಅಪರಾಧಿಗಳು ಯಾಕೆ ಆಗುತ್ತಾರೆ? ಭಗವಂತ ಎಲ್ಲರಲ್ಲೂ ಇದ್ದಾನೆ ಎಂದ ಮೇಲೆ ಜನರು ಕೆಟ್ಟ ಕೆಲಸಗಳನ್ನೇಕೆ ಮಾಡುತ್ತಾರೆ? ಯಾಕೆ ನಾವು ಸೃಷ್ಟಿಯ ವಿನಾಶಶೀಲ ದೃಶ್ಯವನ್ನು ಕೂಡ ನೋಡುತ್ತಿದ್ದೇವೆ? ಈ ಜಗತ್ತಿನಲ್ಲಿ ಯುದ್ಧಗಳೇಕೆ ಆಗುತ್ತಿದೆ? ಭಗವಂತನ ಉಪಾಸನೆಯ ಪದ್ಧತಿಯಿಂದ ಉಂಟಾದ ಸಂಪ್ರದಾಯಗಳಿಂದ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುತ್ತಿದ್ದಾರೆ. ಇದು ಒಂದು ವ್ಯಂಗ್ಯದ ವಿಷಯವಾಗಿದೆ. ಎಲ್ಲರಲ್ಲೂ ಪರಮಾತ್ಮ ತತ್ತ್ವದ ಅಂಶವಿದೆ. ಆದರೆ ಆ ಪರಮಾತ್ಮ ತತ್ತ್ವ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತದೆ. ಮುಂದಿನ ಶ್ಲೋಕ ಬಹಳ ಮಹತ್ವಪೂರ್ಣವಾದ ಶ್ಲೋಕವಾಗಿದೆ. ಭಗವಂತನು ಈ ಶ್ಲೋಕದಲ್ಲಿ ಪರಮಾತ್ಮನ ಅಂಶ ಎಲ್ಲರೂ ಹೊಂದಿದ್ದರೂ, ಹೇಗೆ ಪಾತ್ರಗಳು ಬೇರೆ ಬೇರೆಯಾಗಿರುತ್ತದೆ ಎಂದು ಹೇಳಲಾಗಿದೆ.

ರಾಹಿ ಮಾಸೂಮ್ ರಜಾ ಅವರು ಹೇಳುವಂತೆ, ಎಲೆಗಳು ಅಲುಗಾಡಲೂ ಸಹ ಅವನ ಅನುಮತಿ ಬೇಕು. ಹೀಗಿರುವಾಗ ಒಬ್ಬ ವ್ಯಕ್ತಿ ಅಪರಾಧಿಯಾಗಲು ಹೇಗೆ ಸಾಧ್ಯ?

13.22

ಉಪದ್ರಷ್ಟಾನುಮಂತಾ ಚ, ಭರ್ತಾ ಭೋಕ್ತಾ ಮಹೇಶ್ವರಃ
ಪರಮಾತ್ಮೇತಿ ಚಾಪ್ಯುಕ್ತೋ, ದೇಹೇಽಸ್ಮಿನ್ಪುರುಷಃ(ಫ್) ಪರಃ॥22॥

ಪುರುಷನು ಅರ್ಥಾತ್ ಜೀವಾತ್ಮನು ಈ ಶರೀರದಲ್ಲಿ ಇದ್ದರೂ ಸಹ ಪರಮಾತ್ಮನಾಗಿದ್ದಾನೆ. ಕೇವಲ ಸಾಕ್ಷಿಯಾದುದರಿಂದ ಪ್ರೇಕ್ಷಕ ಮತ್ತು ಯಥಾರ್ಥವಾದ ಸಮ್ಮತಿಯನ್ನು ಕೊಡುವವನಾದ್ದರಿಂದ ಅನುಮೋದಕ. ಎಲ್ಲರ ಧಾರಣ- ಪಾಲನೆ ಮಾಡುವವನಾದ್ದರಿಂದ ಒಡೆಯ. ಜೀವರೂಪದಿಂದ ಫಲಾನುಭವಿ, ಬ್ರಹ್ಮಾದಿಗಳಿಗೂ ಸ್ವಾಮಿಯಾದ್ದರಿಂದ ಮಹೇಶ್ವರ ಮತ್ತು ಶುದ್ಧ ಸಚ್ಚಿದಾನಂದಘನನಾದ್ದರಿಂದ ಪರಮಾತ್ಮ ಎಂದು ಹೇಳಲಾಗಿದೆ.

ಎಲ್ಲಾ ದೇಹಗಳಲ್ಲಿಯೂ ಸ್ಥಿತನಾಗಿರುವ ಆತ್ಮನು ವಾಸ್ತವವಾಗಿ ಪರಮಾತ್ಮನೇ ಆಗಿರುತ್ತಾನೆ. ಅವನು ಉಪದ್ರಷ್ಟ, ಅನುಮಂತ, ಭರ್ತಾ, ಭೋಕ್ತ ಮತ್ತು ಮಹೇಶ್ವರ ಎಂಬ ಐದು ಪಾತ್ರಗಳನ್ನು ನಿರ್ವಹಿಸುತ್ತಾನೆ. ನದಿಯಲ್ಲಿ ಪ್ರವಾಹ ಉಂಟಾದಾಗ ತೀರದಲ್ಲಿ ನಿಂತು ನೋಡುವವನನ್ನು ತಟಸ್ಥನೆನ್ನುತ್ತೇವೆ. ಏನಾಗುತ್ತಿದೆ ಎಂದು ದ್ರಷ್ಟನ ತರಹ ನೋಡುವುದೇ ಉಪದ್ರಷ್ಟ. ಮನುಷ್ಯ ಯೋನಿಯೊಂದೇ ಯೋಗ ಯೋನಿ, ಉಳಿದಿದ್ದು ಭೋಗ ಯೋನಿ. ಹೇಗೆ ಸಿಸಿಟಿವಿ ಕ್ಯಾಮೆರಾ ಎಲ್ಲವನ್ನು ನೋಡುತ್ತಲಿರುತ್ತದೆಯೋ ಹಾಗೆ ಈ ಚೈತನ್ಯ ತತ್ತ್ವ ಎಲ್ಲಾ ಕಡೆಯೂ ಸ್ಥಿತವಾಗಿದ್ದು, ಹಲವು ಕಣ್ಣುಗಳನ್ನು, ಕೈಗಳನ್ನು, ಕಾಲುಗಳನ್ನು ಹೊಂದಿವೆ. ಗುರುದೇವರು ಇದನ್ನು ಚಿತ್ರಗುಪ್ತನಿಗೆ ಹೋಲಿಸುತ್ತಾರೆ. ಹೇಗೆ ಚಿತ್ರಗುಪ್ತನು ನಾವು ಮಾಡಿದ ಕಾರ್ಯಗಳನ್ನು ರೆಕಾರ್ಡಿಂಗ್ ಮಾಡಿಕೊಳ್ಳುತ್ತಾನೆ ಎನ್ನುತ್ತೇವೆಯೋ ಹಾಗೆ. ಈ ತತ್ತ್ವ ವು ಎಲ್ಲವನ್ನೂ ಚಿತ್ರೀಕರಿಸುವ ಗುಪ್ತ ಚಿತ್ರವಾಗಿದೆ. ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಚಿತ್ರೀಕರಿಸುವ ಉಪದ್ರಷ್ಟ ಇದಾಗಿದೆ. ಆ ವ್ಯಕ್ತಿಗೆ ಪರಮಾತ್ಮನ ಬಗ್ಗೆ ವಿಶ್ವಾಸವಿದ್ದು, ಪ್ರೇಮವಿದ್ದು, ನನ್ನ ಜೀವನದ ಮಾರ್ಗದರ್ಶನ ಪರಮಾತ್ಮನೇ ಮಾಡಲಿ ಎಂಬ ಆಸೆ ಇದ್ದರೆ, ಆಗ ಭಗವಂತನು ತನ್ನ ಪಾತ್ರವನ್ನು ಬದಲಾಯಿಸುತ್ತಾನೆ. ಭಗವಂತನೇ ಸಾರಥಿಯಾಗಿ ಬರಲಿ, ತನ್ನ ಸಂಕಷ್ಟದ ಪರಿಸ್ಥಿತಿಯಲ್ಲಿ ಭಗವಂತನು ಮಾರ್ಗದರ್ಶನವನ್ನು ಮಾಡಲಿ ಎಂಬ ಭಾವನೆ ಬಂದರೆ, ಅದು ಅನುಮಂತ ಉಪದ್ರಷ್ಟವಾಗುತ್ತದೆ.

ಅನುಮಂತ ಇದರ ಅರ್ಥ ಭಗವಂತನು ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಇರುವುದು. ಭಗವಂತನು ಯಾವುದು ಸರಿ? ಯಾವುದು ತಪ್ಪು? ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಾನೆ. ಈ ಮಾರ್ಗದರ್ಶನ ಎಲ್ಲರಿಗೂ ಸಿಗುತ್ತದೆ. ಯಾರಾದರೊ ಯುವಕ ಮೊದಲ ಬಾರಿ ಸಿಗರೇಟು ಅಥವಾ ಮಧ್ಯಪಾನ ಮಾಡಲು ಕೈಗೆತ್ತಿಕೊಂಡರೆ ಅಂತರಾತ್ಮದಿಂದ ಒಂದು ಧ್ವನಿ ಇದರ ಸೇವನೆ ಒಳ್ಳೆಯದಲ್ಲವೆಂದು ಎಚ್ಚರಿಸುತ್ತದೆ. ನೀನು ನಡೆಯುತ್ತಿರುವ ದಾರಿ ಕೆಟ್ಟ ದಾರಿ ಎಂದು ಹೇಳುತ್ತದೆ. ಆದರೆ ಅವನು ಆ ಮಾತನ್ನು ಕೇಳಿಸಿಕೊಳ್ಳದೆ ಇದ್ದಾಗ ಆ ಧ್ವನಿಯು ಕ್ಷೀಣಿಸುತ್ತದೆ.

ಇಂಗ್ಲೀಷಿನಲ್ಲಿರುವ ಗಾದೆಯಂತೆ
There is a voice inside of you
That whispers all day long,
"I feel this is right for me,
I know that, this is wrong".
No teacher, preacher, parent, friend
Or wise man can decide
What's right for you - just listen to the voice that speaks inside.
ಇದನ್ನು ಹೇಳುವ ಅನುಮಂತ ಭಗವಂತನ ಇನ್ನೊಂದು ಪಾತ್ರ.

ಯಾವಾಗ ಸಾಧಕನು ಅವನು ಹೇಳಿದ ಮಾತುಗಳನ್ನು ಕೇಳುತ್ತಾನೋ, ಅವನು ತೋರಿಸಿದ ದಾರಿಯಲ್ಲಿ ನಡೆಯುತ್ತಾನೋ, ಸತ್ಸಂಗ ಮಾಡುತ್ತಾನೋ, ಭಗವದ್ಗೀತೆ ಎಂಬ ಪರಮಾತ್ಮನ ವಾಂಗ್ಮಯ ಮೂರ್ತಿಯನ್ನು, ಆ ದಿವ್ಯ ಗ್ರಂಥವನ್ನು ಕೈಗೆತ್ತಿಕೊಳ್ಳುತ್ತಾನೋ ಮತ್ತು ಅದರ ಅನುಸಾರವಾಗಿ ಜೀವನ ನಡೆಸುತ್ತಾನೆಯೋ ಅವನನ್ನು ಭರ್ತಾ ಎನ್ನುತ್ತಾರೆ. ಇದು ಮೂರನೇ ಪಾತ್ರ, ಧಾರಣೆ, ಪೋಷಣೆ ಮಾಡುವವನು ಭರ್ತಾ.

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ಏಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ || (೯. ೨೨)

ಯೋಗಕ್ಷೇಮದ ಸಂಪೂರ್ಣ ಜವಾಬ್ದಾರಿ ಅವನದಾಗಿರುತ್ತದೆ. ಏನು ಪ್ರಾಪ್ತಿಯಾಗಿಲ್ಲವೋ ಅದು ಪ್ರಾಪ್ತಿ ಆಗುವಂತೆ, ಏನು ಪ್ರಾಪ್ತಿಯಾಗಿದೆಯೋ ಅದರ ರಕ್ಷಣೆಯನ್ನು ಸಹ ಅವನೇ ಮಾಡುತ್ತಾನೆ. ನಮ್ಮ ಸಾಧನೆಯಲ್ಲೇನಾದರೂ ಕೊರತೆ ಇದ್ದರೆ ಅದನ್ನೂ ಅವನೇ ಪರಿಪೂರ್ಣಗೊಳಿಸುತ್ತಾನೆ. ಕೊರೊನದ ಮಹಾಮಾರಿಯ ಸಮಯದಲ್ಲಿ ಪೂರ್ಣ ಸೃಷ್ಟಿ ಕಂಗಾಲಾಗಿತ್ತು. ಆ ಸಮಯದಲ್ಲಿ ಎಷ್ಟೋ ಜನ ಸಾಧಕರು ಗುರುದೇವರ ಕೃಪೆಯಿಂದ ನಡೆಯುತ್ತಿರುವ ಭಗವದ್ಗೀತಾ ಮಹಾ ಯಜ್ಞದಲ್ಲಿ ಸಮ್ಮಿಲಿತರಾಗಿ, ತಮ್ಮ ಈ ಜೀವನದ ಧನ್ಯತೆಯನ್ನು ಅನುಭವಿಸುತ್ತಿದ್ದಾರೆ. ಅಂತಹ ಕಠಿಣ ಸಮಯದಲ್ಲಿಯೂ ಸಹ ಭಗವಂತ ಭಗವದ್ಗೀತೆಯ ರೂಪದಲ್ಲಿ ನಮಗೆ ಮಾರ್ಗದರ್ಶಕನಾಗಿ ಬಂದು, ಅನುಮಂತನಾಗಿದ್ದಾನೆ. ಯಾರಿಗಾದರೂ ಜೀವನದಲ್ಲಿ ಗುರುವಿನ ಅವಶ್ಯಕತೆ ಇದ್ದರೆ ಅದನ್ನು ಸಹ ಭರ್ತಾನ ರೂಪದಲ್ಲಿ ಆ ಸಾಧಕನಿಗೆ ಅನುಗ್ರಹಿಸುತ್ತಾನೆ. ಒಂದು ಬಂಗಲೆ ಇದ್ದರೆ, ಇನ್ನೊಂದು ಬಂಗಲೆಯನ್ನು, ಒಂದು ಕಾರಿದ್ದರೆ, ಇನ್ನೊಂದು ಕಾರನ್ನು ಕೊಡುತ್ತಾನೆ ಎಂದು ತಪ್ಪು ಕಲ್ಪನೆ ಇಟ್ಟುಕೊಳ್ಳಬಾರದು. ನಮ್ಮ ಕಲ್ಯಾಣಕ್ಕಾಗಿ, ನಮ್ಮ ಶ್ರೇಯಸ್ಸಿಗೆ ಏನು ಅವಶ್ಯಕತೆ ಇದೆಯೋ ಅದನ್ನು ದಯಪಾಲಿಸುತ್ತಾನೆ.

ರಾಮಕೃಷ್ಣ ಪರಮಹಂಸರು ಕಾಳಿಮಾತೆಯ ಸಗುಣ ಆರಾಧಕರಾಗಿದ್ದರು. ತಾಯಿ ಕಾಳಿ ಅವರೊಂದಿಗೆ ಮೂರ್ತಿರೂಪದಲ್ಲಿಯೇ ಮಾತನಾಡುತ್ತಿದ್ದಳು. ಇವರ ಸಾಧನೆಯನ್ನು ನೋಡಿದ ತೋತಾಪುರಿ ಮಹಾ ಸ್ವಾಮಿಗಳು, ಸ್ವತಃ ತಾವೇ ವೇದಾಂತವನ್ನು ಕಲಿಸುವುದಾಗಿ ಹೇಳಿದರು. ರಾಮಕೃಷ್ಣರು ತಕ್ಷಣ ಕಾಳಿಯ ಬಳಿ ಓಡಿ ಹೋಗಿ ಸ್ವಾಮಿಗಳು ಹೇಳಿದ್ದನ್ನು ತಾಯಿಗೆ ತಿಳಿಸಿದರು. ಅದಕ್ಕೆ ಕಾಳಿಯೂ ಹೌದು, ನೀನು ವೇದಾಂತವನ್ನು ಓದಲೆಂದೇ ನಾನೇ ಹಿಮಾಲಯದಿಂದ ಅವರನ್ನು ಇಲ್ಲಿಗೆ ಕರೆಸಿದ್ದೇನೆ ಎನ್ನುತ್ತಾಳೆ. ಅವಳು ಜಗದಂಬೆ, ಪೂರ್ಣ ಸೃಷ್ಟಿಯೇ ಅವಳದ್ದು. ಅವಳ ಪರಮ ಭಕ್ತನ ಕಲ್ಯಾಣಕ್ಕಾಗಿ ಅವನಿಗೆ ಜ್ಞಾನವನ್ನು ಕೊಡಿಸುವ ಸಲುವಾಗಿ ಅವಳೇ ಎಲ್ಲಾ ವ್ಯವಸ್ಥೆಯನ್ನು ಮಾಡಿ ಭರ್ತಳಾಗುತ್ತಾಳೆ.

ನಾಲ್ಕನೇ ಪಾತ್ರ ಭೋಕ್ತಾ. ಈ ಸತ್ಪುರುಷ, ಈ ಸಂತ ವ್ಯಕ್ತಿ, ಮಹಾತ್ಮ, ಭಗವಂತನ ಹತ್ತಿರ ಇದ್ದು ಸಾಧನೆ ಮಾಡುತ್ತಾ ಪರಮಾತ್ಮನ ರೂಪವನ್ನೇ ಹೊಂದುತ್ತಾನೆ. ಭಗವಂತನೇ ಅವರ ಒಳಗಿದ್ದು ಎಲ್ಲವನ್ನು ಗ್ರಹಿಸಿ ಭೋಗಿಸುತ್ತಾನೆ. ಕೇವಲ ದೇಹ ರೂಪದಲ್ಲಿರದೇ, ಚೈತನ್ಯ ತತ್ತ್ವ ದೊಂದಿಗೆ ಏಕಾಕಾರನಾಗುತ್ತಾನೆ. ಹೇಗೆಂದರೆ ಸಂತ ತುಕಾರಾಮ ಮಹಾರಾಜರು ವಿಠ್ಠಲ, ವಿಠ್ಠಲ.. ಎಂದು ವಿಠ್ಠಲನ ನಾಮಸ್ಮರಣೆ ಮಾಡುತ್ತಾ ವಿಠ್ಠಲನೊಂದಿಗೆ ಏಕಾಕಾರರಾಗುತ್ತಾರೆ. ಅವರು ಹೇಳುತ್ತಾರೆ ನಾನು ಮೊದಲು ತುಕಾರಾಮನಾಗಿದ್ದೆ. ಆದರೆ ಈಗ ಆ ತುಕಾರಾಮ ಎಲ್ಲಿ ಹೋದನೆಂದೇ  ತಿಳಿಯದು. ಅವರು ಈ ದೇಹದ ಗುರುತೇ ಕಾಣಿಸುತ್ತಿಲ್ಲ ಎನ್ನುತ್ತಿದ್ದರಂತೆ. ಆದರೆ ವಿಠ್ಠಲನ ಭಜನೆಯನ್ನು ಮಾತ್ರ ಅವರು ಎಂದಿಗೂ ಬಿಟ್ಟಿರಲಿಲ್ಲ.

ಸಂತ ಜ್ಞಾನೇಶ್ವರ ಮಹಾರಾಜರಿಗೆ ಈ ಪ್ರಪಂಚ ಎಷ್ಟೆಲ್ಲಾ ಕಷ್ಟಗಳನ್ನು ತಿರಸ್ಕಾರಗಳನ್ನು, ಬಹಿಷ್ಕಾರವನ್ನು ವಿಧಿಸಿತು. ಆದರೂ ಪರಮಾತ್ಮನೊಂದಿಗೆ ಏಕಾಕಾರರಾಗಿದ್ದ ಕಾರಣ ಅಮೃತಸಮಾನವಾದ ಜ್ಞಾನೇಶ್ವರಿ ಅವರ ಮುಖಾರವಿಂದದಿಂದ ಪ್ರವಹಿಸಿತು. ಜ್ಞಾನೇಶ್ವರಿಯು ಅಮೃತದಿಂದ ಕೂಡಿದ ಗ್ರಂಥವಾಗಿದೆ. ಇಂತಹ ಮಹಾತ್ಮರಿಗೆ ಬಂದೊದಗುವ ಕಷ್ಟಗಳು ಭಗವಂತನಿಗೇ ಸೇರುತ್ತವೆ. ಗುರುಗಳು ಹೇಳುವ ಪ್ರಕಾರ ನಾವು ನಮ್ಮ ಮಂದಿರದಲ್ಲಿ ಭಗವಂತನನ್ನು ಇಟ್ಟು ಪೂಜಿಸಿ ನೈವೇದ್ಯವನ್ನು ಅರ್ಪಿಸಬಹುದು. ಆದರೆ ಸಾಧುಗಳ, ಮಹಾತ್ಮರ, ಗುರುಗಳ ಸೇವೆ ಮಾಡುವುದರಿಂದ ಆ ಸೇವೆಗಳು ಪರಮಾತ್ಮನಿಗೆ ಶೀಘ್ರವಾಗಿ ತಲುಪುತ್ತವೆ. ಯಾಕೆಂದರೆ ಭಗವಂತ ಅವರೊಂದಿಗೆ ಏಕಾಕಾರನಾಗಿರುತ್ತಾನೆ. ಅಲ್ಲಿ ಅವನೇ ಭೋಕ್ತನಾಗಿರುತ್ತಾನೆ. ಈ ೨೨ನೇ ಶ್ಲೋಕ ಮಹತ್ವಪೂರ್ಣವಾದ ಶ್ಲೋಕವಾಗಿದೆ. ಈ ಶ್ಲೋಕ ವಿವೇಚಕರ ಪರಮಪ್ರಿಯ ಶ್ಲೋಕವಾಗಿದೆ. ಈ ಶ್ಲೋಕದಿಂದ ನಮ್ಮ ಮನಸ್ಸಿನ ಅನೇಕ ಭ್ರಮೆಗಳು ದೂರವಾಗುತ್ತದೆ. ಸಾಧುಗಳು, ಸಂತರ ಹೆಸರಿನಲ್ಲಿ ಯಾವುದೇ ಆಸ್ತಿಪಾಸ್ತಿಗಳು ಇರುವುದಿಲ್ಲ. ಆದರೂ ಅವರು ಸಂಪೂರ್ಣ ಸೃಷ್ಟಿಯ ಈಶ್ವರನೆನಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ತಮ್ಮಲ್ಲಿ ಮತ್ತು ಸೃಷ್ಟಿಯಲ್ಲಿ ಯಾವ ವ್ಯತ್ಯಾಸವನ್ನು ಕಾಣುವುದಿಲ್ಲ.

ಸಂತ ಜ್ಞಾನೇಶ್ವರ ಮಹಾರಾಜರು ಹೇಳುವ ಹಾಗೆ, ಪೂರ್ಣ ಅಹಂಕಾರ ಅಳಿದು ಹೋಗಿ, ಸಂಪೂರ್ಣ ಜೀವ ಜಗತ್ತು ತಾನೇ ಎಂಬ ಜಾಗೃತಿ ಮೂಡಿದಾಗ ಅದು ಮಹೇಶ್ವರನ ಪಾತ್ರವಾಗುತ್ತದೆ. ಪ್ರತಿಯೊಬ್ಬನ ಚೈತನ್ಯ ತತ್ತ್ವದಲ್ಲಿಯೂ ಉಪದ್ರಷ್ಟ, ಅನುಮಂತ, ಭರ್ತಾ, ಭೋಕ್ತ ಮತ್ತು ಮಹೇಶ್ವರ ಈ ಐದು ಪಾತ್ರಗಳು ಕಾರ್ಯನಿರ್ವಹಿಸುತ್ತವೆ.

13.23

ಯ ಏವಂ(ಮ್) ವೇತ್ತಿ ಪುರುಷಂ(ಮ್), ಪ್ರಕೃತಿಂ(ಞ್) ಚ ಗುಣೈಃ(ಸ್) ಸಹ
ಸರ್ವಥಾ ವರ್ತಮಾನೋಽಪಿ, ನ ಸ ಭೂಯೋಽಭಿಜಾಯತೇ॥23॥

ಹೀಗೆ ಪುರುಷನನ್ನು ಮತ್ತು ಗುಣಗಳ ಸಹಿತ ಪ್ರಕೃತಿಯನ್ನು ಯಾರು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆಯೋ, ಅವನು ಎಲ್ಲಾ ರೀತಿಯಿಂದ ನಡೆದುಕೊಳ್ಳುತ್ತಿದ್ದರೂ ಸಹ ಪುನಃ ಹುಟ್ಟುವುದಿಲ್ಲ ಅರ್ಥಾತ್ ಪುನರ್ಜನ್ಮ ಪಡೆಯುವುದಿಲ್ಲ.

ನಾವು ೧೪ ನೇ ಅಧ್ಯಾಯದಲ್ಲಿ ಗುಣಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಪ್ರಕೃತಿ ಗುಣಗಳಿಂದ ಕೂಡಿದೆ. ಗುಣ ಎಂದರೆ ಬಂಧನ ಅಥವಾ ಕಟ್ಟಿ ಹಾಕುವ ಹಗ್ಗ. ಮೂರು ಗುಣಗಳನ್ನು ತನ್ನ ದೇಹದೊಂದಿಗೆ ಕಟ್ಟಿ ಹಾಕಿ ಕೊಂಡು ಈ ಪ್ರಕೃತಿ ಅಥವಾ ಚೈತನ್ಯ ತತ್ತ್ವ ಸ್ವಯಂನನ್ನು ದೇಹವೆಂದೇ ತಿಳಿಯುತ್ತದೆ. ಯಾರು ಇದನ್ನು ತಿಳಿಯಲು ಪ್ರಾರಂಭಿಸುತ್ತಾನೋ ಅವನು ವರ್ತಮಾನದಲ್ಲಿ ಇದ್ದುಕೊಂಡು ಕರ್ತವ್ಯವನ್ನು ನಿರ್ವಹಿಸುತ್ತಾನೆ. ಅವನು ಮತ್ತೊಂದು ಜನ್ಮವನ್ನು ಪಡೆಯುವುದಿಲ್ಲ. ಅಂದರೆ ಅವನು ವಾಸನಾಸಕ್ತಿಗಳಲ್ಲಿ ಸಿಲುಕಿ ಹಾಕಿಕೊಳ್ಳುವುದಿಲ್ಲ. ಭಗವಂತನು ತನ್ನ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳುವುದಕ್ಕಾಗಿಯೇ ಈ ಸಂತ ಮಹಾತ್ಮರನ್ನು ಜನ್ಮ ತಾಳುವಂತೆ ಮಾಡುತ್ತಾನೆ. ಈ ಸಂತ ಮಹಾತ್ಮರು ಸೃಷ್ಟಿಯ ರಹಸ್ಯವನ್ನು ಅರಿತಿರುವುದರಿಂದ ಅವರು ಸುಖ ದುಃಖಗಳ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುವುದಿಲ್ಲ. ಈ ತತ್ತ್ವವನ್ನು ಯಾರು ಮತ್ತು ಹೇಗೆ ಅರಿಯುವುದು? ಈ ತತ್ತ್ವವನ್ನು ಚಿದಾಭಾಸನೆನ್ನುತ್ತೇವೆ. ಚಿದಾಭಾಸನೆಂದರೆ ಆ ಪರಮಾತ್ಮನ ಅಥವಾ ಚೈತನ್ಯನ ಭಾಸ. ವೇದಾಂತದಲ್ಲಿ ಚಿತ್ ಜಡ ಗ್ರಂಥಿ ಎನ್ನುತ್ತೇವೆ. ಚಿತ್ (ಚೈತನ್ಯ), ಗ್ರಂಥಿ (ಗಂಟು). ಈ ಗಂಟನ್ನು ಮೊದಲು ಶಿಥಿಲಗೊಳಿಸಬೇಕು. ನಾನು ಕೇವಲ ದೇಹವಲ್ಲ ಚೈತನ್ಯ ರೂಪಿ ಎಂದು ಅರಿಯಬೇಕು. ಆದರೆ ಈ ಸೃಷ್ಟಿ ನನ್ನನ್ನು ಕೇವಲ ಈ ದೇಹದಿಂದ ಗುರುತಿಸುತ್ತದೆ. ನಾನು ಇವನ ತಾಯಿ, ಇವನ ಪತ್ನಿ, ಇವನ ಪುತ್ರಿ, ಎಂಬ ಪಾತ್ರದಲ್ಲಿ ಈ ಸೃಷ್ಟಿ ನಮ್ಮನ್ನು ಗುರುತಿಸುತ್ತದೆ. ಈ ತತ್ತ್ವ ನಮ್ಮ ಬುದ್ಧಿಗೆ ಬರುತ್ತದೆ. ಈ ಬುದ್ಧಿಯನ್ನು ಶುದ್ಧಿಗೊಳಿಸುತ್ತಾ ಪರಮಾತ್ಮ ತತ್ತ್ವವನ್ನು ಹೊಂದಬೇಕು. ಈ ಪ್ರಜ್ಞಾವನ್ನು ಜಾಗೃತಗೊಳಿಸಿ, ಆ ಚಿಂತನೆಯವರೆಗೆ ತಲುಪಬೇಕು. ನಮ್ಮ ಮೂಲ ರೂಪ ಆ ಚೈತನ್ಯ ತತ್ತ್ವ ಆ ಚಿದಾಭಾಸನೆಂದು ತಿಳಿಯಬೇಕು. ಮುಂದಿನ ಶ್ಲೋಕದಲ್ಲಿ ಅವರು ಹೇಗೆ ಆ ಮಟ್ಟಕ್ಕೆ ತಲುಪುತ್ತಾರೆ ಎಂದು ಭಗವಂತ ಹೇಳುತ್ತಾನೆ.

13.24

ಧ್ಯಾನೇನಾತ್ಮನಿ ಪಶ್ಯಂತಿ, ಕೇಚಿದಾತ್ಮಾನಮಾತ್ಮನಾ
ಅನ್ಯೇ ಸಾಂಖ್ಯೇನ ಯೋಗೇನ, ಕರ್ಮಯೋಗೇನ ಚಾಪರೇ॥24॥

ಅದೆಷ್ಟೋ ಜನರು ಶುದ್ಧವಾದ ಸೂಕ್ಷ್ಮ ಬುದ್ಧಿಯಿಂದ ಧ್ಯಾನದ ಮೂಲಕ ಮನಸ್ಸಿನಲ್ಲಿಯೂ, ಬೇರೆ ಎಷ್ಟೋ ಜನರು ಜ್ಞಾನಯೋಗದ ಮೂಲಕವೂ ಮತ್ತು ಇನ್ನೆಷ್ಟೋ ಮಂದಿ ನಿಷ್ಕಾಮ ಕರ್ಮಯೋಗದ ಮೂಲಕವೂ ಆ ಪರಮ ಪುರುಷ ಪರಮಾತ್ಮನನ್ನು ನೋಡುತ್ತಾರೆ.

ಸಂಸ್ಕೃತದಲ್ಲಿ ಆತ್ಮ ಶಬ್ದದ ಪ್ರಯೋಗವನ್ನು ಹಲವು ಸ್ತರಗಳಲ್ಲಿ ಮಾಡಲಾಗುತ್ತದೆ. ಉದಾಹರಣೆಗೆ ಶರೀರದ ಸ್ತರ, ಬುದ್ಧಿಯ ಸ್ತರ, ಇಂದ್ರಿಯಗಳ ಸ್ತರ, ಆತ್ಮದ ಸ್ತರ. ಸೂಕ್ಷ್ಮ ಬುದ್ಧಿಯಿಂದ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ. ಸೂಕ್ಷ್ಮ ಬುದ್ಧಿ ಎಂದರೆ ನಮ್ಮ ಬುದ್ಧಿಯಿಂದ ಎಲ್ಲಾ ಕಲ್ಮಶಗಳನ್ನು, ವಿಕಾರಗಳನ್ನು ತೆಗೆದುಹಾಕುವುದು.

ಈ ಸೂಕ್ಷ್ಮ ಬುದ್ಧಿಯನ್ನು ಧ್ಯಾನಮಾರ್ಗದಿಂದಲೂ ಸಾಧಿಸುವ ಯೋಗಿ ಜನರಿದ್ದಾರೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧಾರಣ, ಧ್ಯಾನ, ಸಮಾಧಿ. ಇವು ಪತಂಜಲಿ ಮುನಿಯ ಅಷ್ಟಾಂಗ ಯೋಗ. ಧಾರಣೆಯ ನಂತರದ ಧ್ಯಾನದಿಂದ ಸಮಾಧಿ (ಏಕಾಕಾರ) ಸ್ಥಿತಿಯನ್ನು ತಲುಪಬಹುದು. ಒಂದೇ ಜಾಗದಲ್ಲಿ ಕುಳಿತು ನಿತ್ಯ ಧ್ಯಾನಮಾಡುವುದರಿಂದ, ಆ ಸೂಕ್ಷ್ಮ ತತ್ತ್ವದ ಚಿಂತನೆ ಮಾಡುವುದರಿಂದ ಉಚ್ಚ ಸ್ಥಿತಿಗೆ ತಲುಪುತ್ತಾರೆ. ಇದಕ್ಕೆ ಮುಖ್ಯವಾಗಿ ಜೀವನವನ್ನು ಅನುಶಾಸನಬದ್ಧವಾಗಿ ಇಟ್ಟುಕೊಂಡಿರಬೇಕು. ಎಲ್ಲಿಯವರೆಗೆ ಬುದ್ಧಿ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೆ ಆ ಪರಮಾತ್ಮ ತತ್ತ್ವವನ್ನು ಕಾಣಲಾಗುವುದಿಲ್ಲ. ಉದಾಹರಣೆಗೆ ಒಂದು ಉಂಗುರವೇನಾದರೋ ಕೆರೆಯಲ್ಲಿ ಬಿದ್ದರೆ, ಅಲ್ಲಿ ತುಂಬಿದ ಕೆಸರಿನಿಂದಾಗಿ ಆ ಉಂಗುರ ಕಾಣಿಸುವುದಿಲ್ಲ. ಇದು ಕಲ್ಮಶ ಬುದ್ಧಿಯನ್ನು ತೋರಿಸುತ್ತದೆ. ಅದೇ ಉಂಗುರವೇನಾದರೂ ತಿಳಿ ನೀರಿನ ಈಜುಕೊಳದಲ್ಲಿ ಬಿದ್ದರೆ ಅದನ್ನು ನಾವು ಸುಲಭವಾಗಿ ಕಾಣಬಹುದು. ಇದು ನಮ್ಮ ಶುದ್ಧ ಬುದ್ಧಿಯನ್ನು ತೋರಿಸುತ್ತದೆ.

ಪ್ರತಿಕ್ಷಣ ಭಗವಂತನ ಧ್ಯಾನವನ್ನೇ ಮಾಡುತ್ತಾ ಇರಬೇಕು. ಹಾಗಾದರೆ ನಿರ್ಗುಣ ನಿರಾಕಾರನ ಧ್ಯಾನ ಮಾಡುವುದೋ? ಅಥವಾ ಸಾಕಾರನ ಧ್ಯಾನ ಮಾಡುವುದೋ? ಸಾಕಾರನ ಧ್ಯಾನ ಮಾಡುತ್ತಾ ನಿರಾಕಾರನನ್ನು ತಲುಪುವುದು. ಜನ್ನಬಾಯಿಯವರು ಸಗುಣ ವಿಠ್ಠಲನ ಧ್ಯಾನ ಮಾಡುತ್ತಾ, ಭಜನೆ ಮಾಡುತ್ತಾ, ನಿರ್ಗುಣ ನಿರಾಕಾರನನ್ನು ಸೇರಿದರು. ಜನ್ನಬಾಯಿ ತಾನು ತಿನ್ನುವುದು, ಕುಡಿಯುವುದು, ಯಾವುದರ ಮೇಲೆ ಮಲಗುತ್ತೇನೆಯೋ, ನಾನು ಯಾರೊಂದಿಗೆ ವ್ಯವಹರಿಸುತ್ತೇನೆಯೋ, ಎಲ್ಲವು ವಿಠ್ಠಲನೆ ಎಂಬ ಶುದ್ಧ ಬುದ್ಧಿಯನ್ನು, ಪ್ರಜ್ಞೆಯನ್ನು ಹೊಂದಿದ್ದರು. ಆದರೆ ನಮ್ಮ ಬುದ್ಧಿ ರಾಗ ದ್ವೇಷದಿಂದ ಕೂಡಿರುತ್ತದೆ. ಇದು ನನ್ನದು, ಅದು ಬೇರೆಯವರದು ಎಂಬ ಭಾವನೆ ಹೊಂದಿರುತ್ತೇವೆ.

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ।
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ॥ (೧.೧)

ಇಲ್ಲಿ ಧೃತರಾಷ್ಟ್ರನು ತನ್ನ ಮತ್ತು ಪಾಂಡುವಿನ ಪುತ್ರರು ಏನು ಮಾಡುತ್ತಿದ್ದಾರೆ ಎಂಬ ಭೇದ ಬುದ್ಧಿಯನ್ನು ತೋರಿಸುತ್ತಾನೆ, ಇದೇ ದೇಹ ಬುದ್ಧಿ.

ಬುದ್ಧಿಯನ್ನು ಶುದ್ಧಗೊಳಿಸಿ ಆ ತತ್ತ್ವದ ಕಡೆಗೆ ಹೋಗಬಹುದಾದ ಇನ್ನೊಂದು ಮಾರ್ಗವೆಂದರೆ ಜ್ಞಾನ ಮಾರ್ಗ. ಜ್ಞಾನಮಾರ್ಗವೆಂದರೇನು? ಕಪಿಲ ಮುನಿಗಳು ಸಾಂಖ್ಯ ಯೋಗವನ್ನು ತನ್ನ ತಾಯಿ ದೇವಹುತಿಗೆ ಉಪದೇಶಿಸಿದರು. ಸಾಂಖ್ಯ ಯೋಗವನ್ನು ಜ್ಞಾನ ಯೋಗವೆಂದು ಕರೆಯುತ್ತಾರೆ. ಪ್ರಕೃತಿ ಮತ್ತು ಪುರುಷನೊಂದಿಗೆ ಹೇಗೆ ಈ ಸೃಷ್ಟಿಯ ಕಾರ್ಯ ನಡೆಯುತ್ತದೆ ಎಂದು ವಿವರಿಸಿದ ಆಧಾರವನ್ನು ಇಲ್ಲಿ ಹೇಳಲಾಗಿದೆ. ಜ್ಞಾನ ಯೋಗವೆಂದರೆ ಎಲಿಮಿನೇಷನ್ (elimination) ಮಾಡುವುದು. ನಾನು ನಾನಲ್ಲ, ನನ್ನ ಕೈಯಲ್ಲ, ನಾನು ವಾಣಿ ಅಲ್ಲ, ಹೀಗೆ ಎಲಿಮಿನೇಷನ್ ಮಾಡಿ ನಾನು ಯಾರೆಂದು ಅರಿಯುವುದೇ ಜ್ಞಾನ ಯೋಗ.

ಇನ್ನು ಕೆಲವರು ತಮ್ಮ ಬುದ್ಧಿಯನ್ನು ಶುದ್ಧಗೊಳಿಸಲು ಕರ್ಮ ಮಾರ್ಗವನ್ನು ಅನುಸರಿಸುತ್ತಾರೆ. ಭಗವಂತನು ಕರ್ಮ ರೂಪದಲ್ಲಿ ನಮಗೆ ಕೆಲವೊಂದು ಕರ್ತವ್ಯಗಳನ್ನು ಕೊಟ್ಟಿದ್ದಾನೆ. ನಾವು ಎಲ್ಲಿ ಹುಟ್ಟಿದ್ದೇವೆಯೋ ನಮ್ಮ ಪರಿವಾರದ ಪರವಾಗಿ, ನಮ್ಮ ಪರವಾಗಿ, ನಮ್ಮ ಸಮಾಜದ ಪರವಾಗಿ, ರಾಷ್ಟ್ರದ ಪರವಾಗಿ ಇರುವ ಕರ್ತವ್ಯಗಳನ್ನು ಅನುಸಂಧಾನ ಮಾಡುತ್ತಾ ಭಗವಂತನಿಗೆ ಅರ್ಪಿಸುವುದು. ಮಾಡಿದ ಕರ್ತವ್ಯದಿಂದ ಫಲದ ಅಪೇಕ್ಷೆ ಇಲ್ಲದೆ ಸಂಪೂರ್ಣವಾಗಿ ಪರಮಾತ್ಮನಿಗೆ ಅರ್ಪಿಸುವುದೇ ಕರ್ಮಯೋಗ. ಪ್ರಸ್ತುತ ಜೀವನದಲ್ಲಿ ನಾನು ಅದನ್ನು ಗಳಿಸಬೇಕು, ಇದನ್ನು ಗಳಿಸಬೇಕು, ಎಂದು ಓಡುತ್ತಿರುತ್ತೇವೆ. ಆ ಪದವಿ ಬೇಕು, ಪ್ರತಿಷ್ಠೆ ಬೇಕೆಂದು ಫಲದ ಆಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತೇವೆ. ಇದು ತಪ್ಪಲ್ಲ, ಆದರೆ ಅಲ್ಲಿಗೆ ತಲುಪಲು ಯಾವ ಮಾರ್ಗವನ್ನು ಅನುಸರಿಸುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ಈ ಆಸೆಗಳ ಪೂರೈಕೆಯಲ್ಲಿಯೇ ಜೀವನ ಮುಗಿದು ಹೋಗಬಾರದು. ಏಕೆಂದರೆ ಎಲ್ಲಾ ಪದವಿ, ಪ್ರತಿಷ್ಠೆಗಳನ್ನು ಪ್ರಾಪ್ತಿಗೊಳಿಸಿಕೊಳ್ಳುತ್ತಾ, ಭಗವಂತನನ್ನೇ ಪ್ರಾಪ್ತಿಗೊಳಿಸಿಕೊಳ್ಳಲಿಲ್ಲವೆಂದ ಮೇಲೆ ಏನು ಪ್ರಯೋಜನ? ಭಗವಂತನೆಂದರೆ ಏನು? ಅವನ ಸ್ವರೂಪವೇನು? ಎಂದು ತಿಳಿಯಲು ಕೆಲವು ಜನರು ಕರ್ಮ ಯೋಗವನ್ನು ಆಯ್ದುಕೊಳ್ಳುತ್ತಾರೆ.

ಈ ಶ್ಲೋಕದಲ್ಲಿ ಮೂರು ಪ್ರಕಾರದ ಜನಗಳ ಬಗ್ಗೆ ಭಗವಂತನು ವರ್ಣಿಸಿದ್ದಾನೆ.

೧) ಧ್ಯಾನಮಾರ್ಗದಿಂದ, ಪಾರದರ್ಶಕ ಬುದ್ಧಿಯಿಂದ ಪರಮಾತ್ಮನ ಪ್ರತಿಬಿಂಬವನ್ನು ಕಾಣುವ ಜನರು.

೨) ಜ್ಞಾನ ಯೋಗದ ಮಾಧ್ಯಮದಿಂದ, ಬುದ್ಧಿಯೋಗದಿಂದ ಆ ಸೂಕ್ಷ್ಮ ತತ್ತ್ವ ವನ್ನು ತಲುಪುವ ಜನರು.

೩) ಫಲದ ಆಸಕ್ತಿ ತೊರೆದು ಕೆಲಸವನ್ನೇ ಕರ್ತವ್ಯವೆಂದು ಮಾಡುವ ಕರ್ಮ ಯೋಗಿ ಜನರು.

ಇನ್ನು ನಮ್ಮಂತಹ ಜನರು ನಮಗೆ ಧ್ಯಾನಕ್ಕೆ ಕೂರಲು ಬರುವುದಿಲ್ಲ, ಸಾಂಖ್ಯ ಯೋಗವನ್ನು ತಿಳಿಯಲು ಶಕ್ತಿ ಇರುವುದಿಲ್ಲ, ಕರ್ಮ ಯೋಗವನ್ನು ಮಾಡುವ ಅರ್ಹತೆಯೂ ಇರುವುದಿಲ್ಲ. ಈ ತರಹದ ಜನರು ಹೇಗೆ ಆ ಪರಮಾತ್ಮ ತತ್ತ್ವ ವನ್ನು ಅರಿಯುವುದು? ಭಗವಂತ ನಮ್ಮಂತವರಿಗೂ ಉಪಾಯವನ್ನು, ದಾರಿಯನ್ನು ಮುಂದಿನ ಶ್ಲೋಕದಲ್ಲಿ ತೋರಿಸುತ್ತಾನೆ. ಹಾಗಾಗಿ ಈ ಅಧ್ಯಾಯ ಬಹಳ ಮಹತ್ವಪೂರ್ಣದ್ದಾಗಿದೆ.

13.25

ಅನ್ಯೇ ತ್ವೇವಮಜಾನಂತಃ(ಶ್), ಶ್ರುತ್ವಾನ್ಯೇಭ್ಯ ಉಪಾಸತೇ
ತೇಽಪಿ ಚಾತಿತರಂತ್ಯೇವ, ಮೃತ್ಯುಂ(ಮ್) ಶ್ರುತಿಪರಾಯಣಾಃ॥25॥

ಆದರೆ ಇವರಿಗಿಂತ ಬೇರೆಯವರು ಅರ್ಥಾತ್ ಮಂದಬುದ್ಧಿಯುಳ್ಳವರು ಈ ರೀತಿ ತಿಳಿದುಕೊಳ್ಳದೆ ಇತರರಿಂದ ಅರ್ಥಾತ್ ತತ್ವಾರ್ಥವನ್ನು ತಿಳಿದವರಿಂದ ಕೇಳಿ ಅರಿತುಕೊಂಡು ಉಪಾಸನೆ ಮಾಡುತ್ತಾರೆ ಮತ್ತು ಆ ಶ್ರವಣ-ಪರಾಯಣರೂ ಸಹ ಮೃತ್ಯುರೂಪೀ ಸಂಸಾರ ಸಾಗರವನ್ನು ಸಂದೇಹವಿಲ್ಲದೆ ದಾಟುತ್ತಾರೆ.

ಪರಮಾತ್ಮ ತತ್ತ್ವವನ್ನು ಅರಿತ ಸಾಧು ಸಂತರಿಂದ, ಶ್ರೇಷ್ಠ ವ್ಯಕ್ತಿಗಳಿಂದ ಅಲ್ಪಮತಿಗಳಾದ ನಾವು ಕೇಳಿ ತಿಳಿದುಕೊಂಡು ಅದರ ಉಪಾಸನೆ ಮಾಡುವುದು ಸುಲಭದ ಮಾರ್ಗ. ನಾವು ಸದಾ ಒಳ್ಳೆಯ ವಿಚಾರಗಳನ್ನು ಕೇಳುತ್ತಲೇ ಇರಬೇಕು. ಅದರಿಂದ ಸಹ ಬಹಳ ಲಾಭಗಳಾಗುತ್ತವೆ. ವಿವೇಚಕರು ಗುರುಗಳ ವಿವೇಚನೆಯನ್ನು ಅಮೃತವಾಣಿಯನ್ನು ಕೇಳುತ್ತಲೇ ಇರುತ್ತಾರಂತೆ. ಅಷ್ಟೇ ಅಲ್ಲದೆ ಅವರ ಪ್ರವಚನಗಳನ್ನು ಬರೆದಿಟ್ಟುಕೊಳ್ಳುತ್ತಾರಂತೆ. ಬರೆಯುವುದರಿಂದ ಆ ಶಬ್ದ, ಶಬ್ದದ ಅರ್ಥ ಮನಸ್ಸಿನಲ್ಲಿ ಬೇರೂರುತ್ತದೆ. ಆ ಶಬ್ದದ ತರಂಗಗಳು ಸಹ ನಮ್ಮನ್ನು ಪರಮಾತ್ಮ ತತ್ತ್ವದ ಕಡೆಗೆ ಕರೆದುಕೊಂಡು ಹೋಗುತ್ತದೆ.

ಶ್ರೀ ರಾಮನು ಶಬರಿಗೆ ನವವಿಧ ಭಕ್ತಿಯನ್ನು ವಿವರಿಸುತ್ತಾನೆ. ಶ್ರವಣಂ ಕೀರ್ತನಂ ವಿಷ್ಣು ಪಾದ ಸೇವನಂ. ಇಲ್ಲಿ ಮೊದಲಿಗೆ ಶ್ರವಣಂ ಎನ್ನಲಾಗಿದೆ, ಚೆನ್ನಾಗಿ ಆಲೈಸುವವನನ್ನು ಬಹುಶ್ರುತ ಎನ್ನುತ್ತಾರೆ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಗೆ ಬಿಡಬಾರದು. ಶ್ರವಣ ಪಾರಾಯಣ ಮಾಡಿದರೂ, ಮೃತ್ಯುರೂಪಿ ಸಂಸಾರ ಸಾಗರವನ್ನು ನಿಸ್ಸಂದೇಹವಾಗಿ ದಾಟಬಹುದು.

ಒಂದು ಔಷಧಾಲಯಕ್ಕೆ ಹೋಗಿ ಅಲ್ಲಿ ನಮಗೆ ಬೇಕಾದದ್ದನ್ನು ಮಾತ್ರ ಕೇಳಿ ಪಡೆಯುತ್ತೇವೆ. ಭಗವದ್ಗೀತೆಯಲ್ಲಿ ಹಲವು ಸಿದ್ಧಾಂತಗಳನ್ನು ಕೊಡಲಾಗಿದೆ ನಮ್ಮ ಗ್ರಹಣಶೀಲತೆ ಏನು? ಎಷ್ಟು? ಎಂದು ತಿಳಿದು ನಮ್ಮ ಸಾಧನೆಯನ್ನು ಮಾಡಬೇಕು.

13.26

ಯಾವತ್ಸಂಜಾಯತೇ ಕಿಂಚಿತ್, ಸತ್ತ್ವಂ(ಮ್) ಸ್ಥಾವರಜಂಗಮಮ್
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್, ತದ್ವಿದ್ಧಿ ಭರತರ್ಷಭ ॥26॥

ಎಲೈ ಅರ್ಜುನ ! ಒಟ್ಟಾರೆ ಎಷ್ಟೊಂದು ಯಾವ-ಯಾವ ಅಚರ ಮತು ಚರ ವಸ್ತುಗಳು ಉತ್ಪತ್ತಿಯಾಗುತ್ತವೆಯೋ ಆ ಸಮಸ್ತವನ್ನೂ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದಲೇ ಉತ್ಪತ್ತಿಯಾದವುಗಳೆಂದು ತಿಳಿ.

ಹೇ, ಭರತ ಶ್ರೇಷ್ಠ ಅರ್ಜುನ! ನಮ್ಮ ಋಷಿಮುನಿಗಳು ಅವರ ಪ್ರಜ್ಞೆಯಿಂದ ಗ್ರಹಣ ಮಾಡಿದ ಈ ಜ್ಞಾನ, ನಮ್ಮ ದೇಶದ ಅತ್ಯಂತ ಸುಂದರ ಉಪಲಬ್ಧಿಯಾಗಿದೆ. ಜ್ಞಾನದಲ್ಲಿ ರತವಾಗಿರುವ ದೇಶವೇ ಭಾರತ. ಈ ದೇಶದಲ್ಲಿ ಜನಿಸಿದ ನೀನು ಹೇ ಅರ್ಜುನ, ನಿನ್ನಲ್ಲಿಯೂ ಜ್ಞಾನದ ಲಾಲಸೆ ಉಂಟಾಗಿರುವ ಕಾರಣ ನಿನ್ನನ್ನು ಭರತ ಶ್ರೇಷ್ಠನೆನ್ನುತ್ತಾರೆ ಎಂದು ಭಗವಂತ ಹೇಳುತ್ತಿದ್ದಾನೆ.

ಸ್ಥಾವರ - ಜಂಗಮ ಎಂದರೆ ಚಲ (ಚಲಿಸುವ) ಮತ್ತು ಅಚಲ (ಚಲಿಸದೆ ಇರುವುದು). ಇದರಿಂದ ಉತ್ಪನ್ನಗೊಳ್ಳುವ ಎಲ್ಲಾ ಪ್ರಾಣಿಗಳು, ಚೈತನ್ಯಗಳು ಈ ಕ್ಷೇತ್ರ ಕ್ಷೇತ್ರಜ್ಞನ ಮಿಲಾಪದಿಂದಲೇ ಉಂಟಾಗಿದೆ. ಒಂದು ಕಲ್ಲಿನಲ್ಲಿ ಕೂಡ ಕೋಶಗಳು ಇರುತ್ತದೆ. ಆ ಕಣಗಳಲ್ಲಿಯೂ neutron, proton, electron ಗಳು ಇರುತ್ತವೆ. ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ ಎಂಬ ಐದು ಕೋಶಗಳು ವಿಕಸಿತಗೊಳ್ಳುವುದರ ಮೂಲಕ ಚೈತನ್ಯ ತತ್ತ್ವ ನಮ್ಮೊಳಗೆ ಕಾರ್ಯವನ್ನು ನಿರ್ವಹಿಸುತ್ತವೆ. ಈ ಪರಿವರ್ತನಾಶೀಲ ಸಂಸಾರದಲ್ಲಿ ಗುಣಗಳ ಕಾರಣದಿಂದ ವಿವಿಧತೆಯನ್ನು ಕಾಣಬಹುದು. ಯಾವ ಚೈತನ್ಯ ನಮ್ಮೊಳಗೆ ಕಾರ್ಯನಿರ್ವಹಿಸುತ್ತದೆಯೋ ಅದು ನಮ್ಮ ಜೀವನವನ್ನು ಉದ್ದಾರಗೊಳಿಸುತ್ತದೆಯೇ ಹೊರತು ಆತ್ಮಘಾತವನ್ನು ಉಂಟು ಮಾಡುವುದಿಲ್ಲ. ನಮ್ಮ ಜೀವನದಲ್ಲಿ ಎರಡು ಮಾರ್ಗಗಳು ಇವೆ ಎಂದು ಗುರುಗಳು ಹೇಳುತ್ತಾರೆ. ಅದೇನೆಂದರೆ ಒಂದು ಆತ್ಮೋದ್ಧಾರ ಇನ್ನೊಂದು ಆತ್ಮಘಾತ.

ನಮ್ಮ ಉದ್ಧಾರದ ಕಡೆಗೆ ಮುನ್ನಡೆಯದಿದ್ದರೆ ನಾವು ಅಧೋಗತಿಗೆ ತಲುಪುತ್ತೇವೆ. ಉದ್ಧಾರದ ಶಿಖರಕ್ಕೆ ಹತ್ತುವುದು ಸ್ವಲ್ಪ ಕಠಿಣ, ಆದರೆ ಅಧೋಗತಿಗೆ ಪತನಗೊಳ್ಳುವುದು ಬಹಳ ಸುಲಭ. ಯಾರೆಲ್ಲಾ ಸಾಧಕರು ಉದ್ದಾರದ ಶಿಖರವನ್ನು ಹತ್ತುತ್ತಾರೆ? ಎಂದು ಭಗವಂತ ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ.

13.27

ಸಮಂ(ಮ್) ಸರ್ವೇಷು ಭೂತೇಷು, ತಿಷ್ಠಂತಂ(ಮ್) ಪರಮೇಶ್ವರಮ್
ವಿನಶ್ಯತ್ಸ್ವವಿನಶ್ಯಂತಂ(ಮ್), ಯಃ(ಫ್) ಪಶ್ಯತಿ ಸ ಪಶ್ಯತಿ ॥27॥

ಯಾರು ನಾಶಯುತವಾದ ಎಲ್ಲಾ ಚರಾಚರ ಪ್ರಾಣಿವಸ್ತುಗಳಲ್ಲಿಯೂ ಪರಮೇಶ್ವರನನ್ನು ನಾಶರಹಿತವಾದ ಮತ್ತು ಸಮಭಾವದಿಂದ ಇರುವಂತೆ ನೋಡುತ್ತಾನೆಯೋ ಅವನೇ ಯಥಾರ್ಥವಾಗಿ ತಿಳಿದು ನೋಡುತ್ತಾನೆ.

ಯಾವುದು ವಿನಾಶವಾಗುತ್ತದೆಯೋ ಅದು ವಿನಾಶಿ. ಯಾವುದು ವಿನಾಶವಾಗುವುದಿಲ್ಲವೋ ಅದು ಅವಿನಾಶಿ. ಒಂದು ಅಸೀಮ ಇನ್ನೊಂದು ಸಸೀಮ. ಪ್ರಕೃತಿ ಮತ್ತು ಪುರುಷ ಎರಡು ಅನಾದಿ, ಒಂದು ಅನಂತ ಇನ್ನೊಂದು ಶಾಂತ. ಈ ವಿನಾಶಶೀಲ, ಪರಿವರ್ತನಾಶೀಲ ಸಂಸಾರದಲ್ಲಿ ಪರಮಾತ್ಮ ತತ್ತ್ವವೊಂದೇ ಅವಿನಾಶೀ. ಎಲ್ಲದರಲ್ಲೂ ಬೇರೆ ಬೇರೆ ಪಾತ್ರವಿದ್ದರೂ, ಅದರಲ್ಲಿರುವ ಭಾವವು ಒಂದೇ ಎಂದು ಯಾವ ವ್ಯಕ್ತಿ ತಿಳಿದಿರುತ್ತಾನೋ ಅವನು ಪರಮಾತ್ಮ ತತ್ತ್ವದ ದರ್ಶನ ಮಾಡುತ್ತಾನೆ. ಅವನ ಜ್ಞಾನ ಚಕ್ಷುಗಳು ತೆಗೆದಿರುತ್ತವೆ. ಭಗವಂತನು ಸಮತ್ವದ ಬಗ್ಗೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದಾನೆ. ಯಾರ ಜ್ಞಾನ ಚಕ್ಷುಗಳು ತೆಗೆದಿರುತ್ತದೆಯೋ ಅವನು ಸಮತ್ವ ಸ್ಥಿತಿಗೆ ತಲುಪುತ್ತಾನೆ. ಒಂದು ವೃತ್ತದಲ್ಲಿ ಒಂದು ಕೇಂದ್ರಬಿಂದುವಿರುತ್ತದೆ. ಆ ಕೇಂದ್ರ ಬಿಂದುವಿನಿಂದ ವೃತ್ತದ ಮೇಲಿರುವ ಯಾವುದೇ ಬಿಂದುವಿಗೆ ಅಳೆದರೂ ಅದು ಸಮವಾದ ದೂರದಲ್ಲಿರುತ್ತದೆ (equidistant). ಭಗವದ್ಗೀತೆ ನಮ್ಮನ್ನು ಆ ಕೇಂದ್ರದೊಂದಿಗೆ ಜೋಡಿಸಲು ಪ್ರಯತ್ನಿಸುತ್ತದೆ.

ಜ್ಞಾನೇಶ್ವರ ಮಹಾರಾಜರು ಹೇಳುವಂತೆ, ಒಂದು ವೃಕ್ಷದ ಕೊಂಬೆಗಳು, ಚಿಕ್ಕದು ಅಥವ ದೊಡ್ಡದಾಗಿ ಇರಬಹುದು. ಆದರೆ ಅವುಗಳಲ್ಲಿ ಒಂದೇ ತರಹದ ಎಲೆಗಳು ಇರುತ್ತವೆ. ಹೂವುಗಳು ಚಿಕ್ಕದು ಅಥವಾ ದೊಡ್ಡದು ಇರಬಹುದು ಆದರೆ ಅವುಗಳು ಕೂಡ ಒಂದೇ ತರಹ ಇರುತ್ತವೆ. ನೀರಿನ ಮೂಲ ಧಾರೆ ಒಂದೇ ಆದರೂ ಅವು ಹಲವು ಧಾರೆಗಳಾಗಿ ಹರಿದು ಬರುತ್ತವೆ.

ಸಮೋ‌Sಹಂ ಸರ್ವಭೂತೇಷು ನ ಮೇ ದ್ವೇಷ್ಯೋ‌Sಸ್ತಿ ನ ಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || (೯. ೨೯)

ಯಾರು ಪರಮಾತ್ಮ ತತ್ತ್ವವನ್ನು ಅರಿತಿರುತ್ತಾನೋ, ಅವನು ಭಗವಂತನ ವಿಶೇಷತೆಯ ಬಗ್ಗೆ ಮಾತನಾಡದೆ ಅವನು ಸಾಮಾನ್ಯನೆಂದು ತಿಳಿಯುತ್ತಾನೆ.

ಏಕನಾಥ ಮಹಾರಾಜರು ಕಾಶಿಯಿಂದ ಗಂಗಾಜಲವನ್ನು ರಾಮೇಶ್ವರನಿಗೆ ಅರ್ಪಿಸಲು ತೆಗೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಒಂದು ಕತ್ತೆಯು ಬಾಯಾರಿಕೆಯಿಂದ ಚಡಪಡಿಸುತ್ತಿತ್ತು. ಅದರಲ್ಲಿ ಪರಮಾತ್ಮನ ಪ್ರತಿಬಿಂಬವನ್ನು ಕಂಡ ಅವರು ಗಂಗಾಜಲವನ್ನು ಅದಕ್ಕೆ ಕುಡಿಸಿ, ರಾಮೇಶ್ವರನಿಗೆ ಅರ್ಪಣೆಯಾಯಿತು ಎಂದರು. ಆದರೆ ಇದನ್ನು ನಾವು ಮಾಡಿದರೆ ಅನೈಸರ್ಗಿಕವಾಗಿ ತೋರುತ್ತದೆ. ಅವರು ಸಂತ ಮಹಾತ್ಮರು ಸಮತ್ವವನ್ನು ತಲುಪಿರುವ ಕಾರಣ ಇದು ಅವರಿಗೆ ಸ್ವಾಭಾವಿಕ. ನಾವು ದೇವಸ್ಥಾನಕ್ಕೆ ಹೋಗುವಾಗ ಆ ಪರಮಾತ್ಮ ತತ್ತ್ವ ವನ್ನು ಸೇರಲು ಹೋಗುತ್ತಿದ್ದೇನೆ ಎಂಬ ಭಾವನೆಯನ್ನು ದೃಢವಾಗಿಸಿಕೊಳ್ಳಬೇಕು ಎಂದು ಗುರುಗಳು ಹೇಳುತ್ತಾರೆ. ಆ ಮೂರ್ತಿಯಲ್ಲಿ ಪರಮಾತ್ಮ ತತ್ತ್ವವನ್ನು ನೋಡಿ ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿ ಏಕಾಕಾರವಾಗಬೇಕು. ಮೊದಲು ದೇವಸ್ಥಾನದಲ್ಲಿ, ನಂತರ ತನ್ನಲ್ಲಿ, ಆಮೇಲೆ ಎಲ್ಲಾ ಚರಾಚರಗಳಲ್ಲಿಯೂ ಪರಮಾತ್ಮ ತತ್ತ್ವವನ್ನು ಕಾಣಬೇಕು.

13.28

ಸಮಂ(ಮ್) ಪಶ್ಯನ್ಹಿ ಸರ್ವತ್ರ, ಸಮವಸ್ಥಿತಮೀಶ್ವರಮ್
ನ ಹಿನಸ್ತ್ಯಾತ್ಮನಾತ್ಮಾನಂ(ನ್), ತತೋ ಯಾತಿ ಪರಾಂ(ಙ್) ಗತಿಮ್ ॥28॥

ಏಕೆಂದರೆ, ಎಲ್ಲಾ ಕಡೆಗಳಲ್ಲಿಯೂ ಸಮಭಾವದಿಂದಿರುವ ಪರಮೇಶ್ವರನನ್ನು ಸಮಾನವಾಗಿ ನೋಡುತ್ತಾ ತನ್ನಿಂದಲೇ ತನ್ನನ್ನು ಹಾಳುಮಾಡಿಕೊಳ್ಳುವುದಿಲ್ಲ ಅದರಿಂದ ಅವನು ಪರಮ ಗತಿಯನ್ನು ಪಡೆಯುತ್ತಾನೆ.

ಆಭರಣಗಳ ವಿನ್ಯಾಸಗಳು ಬೇರೆ ಬೇರೆಯಾಗಿದ್ದರೂ ಅದರಲ್ಲಿರುವ ಚಿನ್ನವು ಒಂದೇ ಆಗಿರುತ್ತದೆ. ಒಬ್ಬರ ಮನೆಯಲ್ಲಿ ದತ್ತಾತ್ರೇಯ ಗುರುಗಳ ಚಿನ್ನದ ಮೂರ್ತಿ ಇರುತ್ತದೆ ಮತ್ತು ಒಂದು ಶ್ವಾನದ  ಚಿನ್ನದ ಮೂರ್ತಿಯೂ ಇರುತ್ತದೆ. ಕಾರಣಾಂತರಗಳಿಂದ ಅವರ ಪರಿಸ್ಥಿತಿಯು ಸರಿ ಇಲ್ಲದೆ ಇದ್ದ ಸಲುವಾಗಿ ಅವೆರಡನ್ನು ಮಾರಲು ಹೋಗುತ್ತಾರೆ. ಆಗ ಅಕ್ಕಸಾಲಿಗನು ಅವೆರಡರ ಪರೀಕ್ಷೆಯನ್ನು ಮಾಡಿ ದತ್ತಮೂರ್ತಿ ವಿಗ್ರಹಕ್ಕೆ ಕಡಿಮೆ ಬೆಲೆಯನ್ನು, ಶ್ವಾನದ ಮೂರ್ತಿಗೆ ಹೆಚ್ಚಿನ ಬೆಲೆಯನ್ನು ಕೊಡುತ್ತೇನೆಂದು ಹೇಳುತ್ತಾನೆ. ಏಕೆ ಹೀಗೆಂದು  ಕೇಳಿದಾಗ ದತ್ತನ ಮೂರ್ತಿಯಲ್ಲಿ ಬಳಕೆಯಾಗಿರುವ ಚಿನ್ನ ಪೂರ್ಣ ಶುದ್ಧತೆಯನ್ನು ಹೊಂದಿಲ್ಲ, ಆದರೆ ಈ ಶ್ವಾನದ ಮೂರ್ತಿಗೆ ಬಳಸಿರುವ ಚಿನ್ನ ಶುದ್ಧವಾಗಿದೆ ಎನ್ನುತ್ತಾನೆ ಅಕ್ಕಸಾಲಿಗ. ಇಲ್ಲಿ ಅಕ್ಕಸಾಲಿಗನಿಗೆ ಚಿನ್ನದ ತತ್ತ್ವ ಮುಖ್ಯವಾಗುತ್ತದೆಯೇ ಹೊರತು ಆಕಾರವಲ್ಲ.

ಈ ಮಾನವ ಶರೀರ ಆತ್ಮೋದ್ಧಾರಕ್ಕಾಗಿ ಇರುವುದು, ಆತ್ಮಘಾತಕಕ್ಕಾಗಿ ಅಲ್ಲ. ಯಾರು ಸಮತ್ವ ಸ್ಥಿತಿಗೆ ಬರುತ್ತಾನೋ, ಅವನು ತನ್ನ ಉದ್ಧಾರವನ್ನು ಮಾಡಿಕೊಳ್ಳುತ್ತಾನೆ. ನಾವು ಯಾವ ಬೀಜವನ್ನು ಬಿತ್ತುತ್ತೇವೆಯೋ, ಅದೇ ಫಸಲನ್ನುಗಳಿಸುತ್ತೇವೆ. ಹಾಗೆಯೇ, ನಮ್ಮ ದೇಹ ಬುದ್ಧಿಯಲ್ಲಿ ಹೇಗೆ ಕಲ್ಮಶ ಸೇರಿದೆಯೋ ಹಾಗೆಯೇ ನಮ್ಮ ಕಾರ್ಯವು ಕಲ್ಮಶಗೊಳ್ಳುತ್ತದೆ. ನಮ್ಮ ದೇಹಬುದ್ಧಿ ಶುದ್ಧವಾಗಿದ್ದರೆ, ನಮ್ಮ ಕಾರ್ಯವು ಶುದ್ಧವಾಗಿರುತ್ತದೆ.

13.29

ಪ್ರಕೃತ್ಯೈವ ಚ ಕರ್ಮಾಣಿ, ಕ್ರಿಯಮಾಣಾನಿ ಸರ್ವಶಃ
ಯಃ(ಫ್) ಪಶ್ಯತಿ ತಥಾತ್ಮಾನಮ್, ಅಕರ್ತಾರಂ(ಮ್) ಸ ಪಶ್ಯತಿ ॥29॥

ಮತ್ತು ಯಾರು ಕರ್ಮಗಳೆಲ್ಲಾ ಎಲ್ಲಾ ಪ್ರಕಾರದಿಂದಲೂ ಪ್ರಕೃತಿಯಿಂದಲೇ ಮಾಡಲ್ಪಡುತ್ತವೆ ಎಂದು ನೋಡುತ್ತಾನೋ ಹಾಗೂ ಆತ್ಮನನ್ನು ಅರ್ಥಾತ್ ತನ್ನನ್ನು ಕರ್ತೃವಲ್ಲವೆಂದು ನೋಡುತ್ತಾನೋ, ಅವನೇ ಯಥಾರ್ಥವಾಗಿ ನೋಡುವವನಾಗಿದ್ದಾನೆ.

ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ, ಒಂದೇ ದೀಪದಿಂದ ಮನೆಯ ಹಲವು ಕಾರ್ಯಗಳು ನಡೆಯುತ್ತವೆ. ಆ ದೀಪದ ಪ್ರಕಾಶದಿಂದ ಓದಬಹುದು, ಅಡುಗೆ ಮಾಡಬಹುದು. ಚೈತನ್ಯಮಯಿ ಪ್ರಕಾಶದಿಂದ ನಮ್ಮ ದೇಹದ ಕಾರ್ಯಗಳು ನಡೆಯುತ್ತದೆ. ಪೊಟೆನ್ಶಿಯಲ್ ಇದ್ದರೆ ಮಾತ್ರ ವಿದ್ಯುತ್ ಹರಿಯುತ್ತದೆ, ಇಲ್ಲದಿದ್ದರೆ ವಿದ್ಯುತ್ ಪ್ರವಹಿಸುವುದಿಲ್ಲ. ಕ್ಷಮತೆ ಇದ್ದರೆ ಮಾತ್ರ ಕಾರ್ಯನಿರ್ವಹಿಸುತ್ತೇವೆ. ಇಲ್ಲದಿದ್ದರೆ ಕಾರ್ಯ ನಿರ್ವಹಿಸಲು ಆಗುವುದಿಲ್ಲ. ಕ್ಷಮತೆ ಇದ್ದರೆ ನಾವು ನೃತ್ಯ ಮಾಡುತ್ತೇವೆ, ಇಲ್ಲದಿದ್ದರೆ ನೃತ್ಯ ಮಾಡಲಾಗುವುದಿಲ್ಲ.

ಯಾರು ಸ್ವಯಂನನ್ನು ಅಕರ್ತಾ ಎಂದು ತಿಳಿದು ಅದರ ಅನುಭೂತಿಯನ್ನು ಪಡೆಯುತ್ತಾನೋ ಅವನು ಮಾತ್ರ ಈ ತತ್ತ್ವವನ್ನು ಅರಿಯಲು ಸಾಧ್ಯ. ಆಕಾಶದಲ್ಲಿ ಕೆಲವೊಮ್ಮೆ ಕಪ್ಪು ಮೋಡಗಳು ಬರುತ್ತವೆ, ಕೆಲವೊಮ್ಮೆ ಘರ್ಜಿಸುವ ಮೋಡಗಳು ಬರುತ್ತವೆ, ಕೆಲವೊಮ್ಮೆ ಬಿಳಿ ಮೋಡಗಳು ಬರುತ್ತವೆ. ಇವುಗಳ ಬರುವಿಕೆಯಿಂದ ಆಕಾಶಕ್ಕೆ ಏನು ಅಂತರಪಡುವುದಿಲ್ಲ. ಹಾಗೆ ಈ ಮೂಲ ಆತ್ಮ ತತ್ತ್ವದ ಮೇಲೆ ಏನೂ ಪರಿಣಾಮ ಉಂಟಾಗುವುದಿಲ್ಲ.

ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ ।
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 1 ॥
ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ

ಯಾರು ಈ ಪರಮಾತ್ಮ ತತ್ತ್ವವನ್ನು ಅರಿತಿರುತ್ತಾರೋ, ಅವರ ಮಾರ್ಗದಲ್ಲಿ ನಡೆದರೆ ಶ್ರೇಯಸ್ಕರ. ಸಂತ ತುಕಾರಾಮ ಮಹಾರಾಜರು ಹೇಳುವಂತೆ, ಈ ಉಪಾಸನೆ ನನ್ನ ಮುಖದಿಂದ ಹೊರಹೊಮ್ಮುತ್ತಲ್ಲಿದೆ, ಆದರೆ ಇದರ ಕ್ಷಮತೆ ನನ್ನಲ್ಲಿಲ್ಲ. ನನ್ನ ವಾಣಿ, ನನ್ನ ಬುದ್ಧಿ, ನನ್ನಿಂದ ಬಂದ ರಾಗ ಎಲ್ಲವೂ ಆ ಪರಮಾತ್ಮನದ್ದೆ ಎನ್ನುತ್ತಿದ್ದರಂತೆ. ಕೋಗಿಲೆ ಮಧುರವಾದ ಧ್ವನಿಯಲ್ಲಿ ಇಂಪಾಗಿ ಹಾಡುತ್ತದೆ, ಆದರೆ ಅದಕ್ಕೆ ಆ ಧ್ವನಿಯನ್ನು ಕೊಟ್ಟಿದ್ದು ಪರಮಾತ್ಮನೇ.

13.30

ಯದಾ ಭೂತಪೃಥಗ್ಭಾವಮ್, ಏಕಸ್ಥಮನುಪಶ್ಯತಿ
ತತ ಏವ ಚ ವಿಸ್ತಾರಂ(ಮ್), ಬ್ರಹ್ಮ ಸಂಪದ್ಯತೇ ತದಾ ॥30॥

ಜೀವಿಗಳ ಬೇರೆ ಬೇರೆ ಭಾವಗಳು ಏಕಮೇವ ಪರಮಾತ್ಮನ ಸಂಕಲ್ಪಗಳ ಆಧಾರದಲ್ಲಿರುವುದೆಂದು ಮತ್ತು ಆ ಪರಮಾತ್ಮನ ಸಂಕಲ್ಪದಿಂದಲೇ ಸಮಸ್ತ ಜೀವಿಗಳ ವಿಕಾಸವಾಗುವುದೆಂದು ಯಾವಾಗ ತಿಳಿದುಕೊಳ್ಳುವನೋ ಆಗ ಸಚ್ಚಿದಾನಂದಘನ ಬ್ರಹ್ಮವನ್ನು ಪಡೆಯುತ್ತಾನೆ.

ಯಾರು ಬ್ರಹ್ಮವಿಧಿಯನ್ನು ಪಡೆದುಕೊಳ್ಳುತ್ತಾನೋ ಅವನು, ತಾನು ಬ್ರಹ್ಮ ಜ್ಞಾನವನ್ನು ಪಡೆದುಕೊಂಡಿದ್ದೇನೆ ಎಂದು ತನ್ನ ಮುಖಾರವಿಂದದಿಂದಲೇ ಹೇಳಿಕೊಳ್ಳುವುದಿಲ್ಲ.

ಒಮ್ಮೆ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಈಶ್ವರ ಚಂದ್ರ ವಿದ್ಯಾಸಾಗರ್ ಮಾತನಾಡುತ್ತಿದ್ದರು. ಆಗ ಈಶ್ವರ ಚಂದ್ರರು ಕೇಳುತ್ತಾರೆ, ಯಾರಿಗಾದರೂ ಬ್ರಹ್ಮ ಜ್ಞಾನ ಪ್ರಾಪ್ತಿಯಾಗಿದೆ ಎಂದು ಹೇಗೆ ತಿಳಿಯುವುದು? ಅದಕ್ಕೆ ರಾಮಕೃಷ್ಣ ಪರಮಹಂಸರು ಬ್ರಹ್ಮ ಜ್ಞಾನ ತುಟಿಗಳಿಗೆ ಬರುವುದಿಲ್ಲ, ಅಂದರೆ ಯಾರೂ ಅದನ್ನು ತಾನು ಪಡೆದುಕೊಂಡೆ ಎಂದು ಹೇಳಲಾಗುವುದಿಲ್ಲ. ನಾನು ಬ್ರಹ್ಮಜ್ಞಾನ ಪಡೆದುಕೊಂಡಿದ್ದೇನೆ ಎಂದರೆ ಅದು ಸುಳ್ಳಾಗುತ್ತದೆ. ಯಾವ ಕ್ಷಣದಲ್ಲಿ ಬ್ರಹ್ಮಜ್ಞಾನ ಪಡೆದೆ ಎಂದು ಹೇಳುತ್ತಾನೋ ಆ ಕ್ಷಣವೇ ಆ ಜ್ಞಾನವನ್ನು ಕಳೆದುಕೊಳ್ಳುತ್ತಾನೆ.

ಪ್ರಾಣಿಗಳು ಬೇರೆ ಬೇರೆಯಾದರೂ ಅದರಲ್ಲಿ ಇರುವುದು ಒಂದೇ ತತ್ತ್ವ ಎಂದು ತಿಳಿಯುತ್ತಾನೋ, ಅದರ ಅನುಭವವನ್ನು ಪಡೆಯುತ್ತಾನೋ, ಅವನು ಸಚ್ಚಿದಾನಂದ ಬ್ರಹ್ಮ ತತ್ತ್ವವನ್ನು ಹೊಂದುತ್ತಾನೆ. ಬ್ರಹ್ಮ ಎಂದರೆ ಸತ್ ಚಿತ್ ಆನಂದ.
ಸತ್ - ಅನಂತ
ಚಿತ್ - ಅಖಂಡ ಜ್ಞಾನ
ಆನಂದ - ಅಸೀಮಸುಖ.

ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ, ಅಲೆಗಳು ಒಂದೇ ಸಾಗರದಿಂದ ಏಳುತ್ತವೆ. ಹಲವಾರು ಸೂರ್ಯ ಕಿರಣಗಳು ಬರುವುದು ಒಂದೇ ಸೂರ್ಯನಿಂದ. ಸಾಗರ ಒಂದೇ ಅಲೆಗಳು ಹಲವಾರು, ಸೂರ್ಯನೊಬ್ಬನೇ ಕಿರಣಗಳು ಹಲವಾರು, ಯಾರು ಈ ತತ್ತ್ವವನ್ನು ತಿಳಿಯುತ್ತಾನೋ ಅವನು ಪರಮಾತ್ಮ ತತ್ತ್ವವನ್ನು ಅರಿಯುತ್ತಾನೆ.

13.31

ಅನಾದಿತ್ವಾನ್ನಿರ್ಗುಣತ್ವಾತ್, ಪರಮಾತ್ಮಾಯಮವ್ಯಯಃ
ಶರೀರಸ್ಥೋಽಪಿ ಕೌಂತೇಯ, ನ ಕರೋತಿ ನ ಲಿಪ್ಯತೇ ॥31॥

ಎಲೈ ಅರ್ಜುನ ! ಅನಾದಿಯಾಗಿರುವುದರಿಂದಲೂ, ಗುಣಾತೀತನಾಗಿರುವುದರಿಂದಲೂ ಈ ಅವಿನಾಶೀ ಪರಮಾತ್ಮನು ಶರೀರದಲ್ಲಿದ್ದರೂ ಸಹ ವಾಸ್ತವವಾಗಿ ಯಾವ ಕರ್ಮವನ್ನೂ ಮಾಡುವುದಿಲ್ಲ ಹಾಗೂ ಲಿಪ್ತನಾಗುವುದೂ ಇಲ್ಲ.

ಈ ಅವಿನಾಶೀ ಪರಮಾತ್ಮನು ಅನಾದಿ ಮತ್ತು ನಿರ್ಗುಣನಾಗಿರುತ್ತಾನೆ. ಈ ಪರಮಾತ್ಮ ತತ್ತ್ವ ಪ್ರತಿಬಿಂಬದ ರೂಪದಲ್ಲಿ ಈ ಶರೀರದಲ್ಲಿ ವಾಸವಾಗಿರುತ್ತದೆ. ಇದರ ಆದಿ ಮತ್ತು ಅಂತ್ಯವಿರುವುದಿಲ್ಲ. ಇದು ಅನಾದಿ, ನಿರ್ಗುಣ ಮತ್ತು ಅವ್ಯಯ (ಯಾವುದು ನಾಶವಾಗುವುದಿಲ್ಲವೊ ಅದು). ಹೇಗೆ ಶಿವಲಿಂಗದ ಮೇಲೆ ಹಾಲನ್ನು, ಪಂಚದ್ರವ್ಯವನ್ನು, ಏನನ್ನು ಹಾಕಿದರೂ ಅದು ಅದರ ಒಳಗೆ ಹೋಗುವುದಿಲ್ಲವೋ ಹಾಗೆ ಇದು ಆತ್ಮಲಿಂಗ.

ಕನ್ನಡಿಯಲ್ಲಿಯೂ ಸಹ ಎಲ್ಲರ ಪ್ರತಿಬಿಂಬ ಕಾಣುತ್ತದೆ. ಆದರೆ ಯಾವ ಪ್ರತಿಬಿಂಬವೂ ಸ್ಥಿರವಾಗಿ ಉಳಿಯುವುದಿಲ್ಲ. ಯಾವ ಪ್ರತಿಬಿಂಬವೂ ಕನ್ನಡಿಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ಪರಮಾತ್ಮ ತತ್ತ್ವ ಲಿಪ್ತವಾಗಿರುತ್ತದೆ.

ಜ್ಞಾನೇಶ್ವರ ಮಹಾರಾಜರು ಆತ್ಮ ತತ್ತ್ವದ ಸುಂದರ ವರ್ಣನೆಯನ್ನು ಹೀಗೆ ಮಾಡಿದ್ದಾರೆ. ಅವನು ಎಲ್ಲಾ ಕಡೆಗಳಲ್ಲಿಯೂ ಇದ್ದಾನೆ, ಎಲ್ಲಾ ಕಾರ್ಯಗಳನ್ನು ಮಾಡುತ್ತಾನೆ, ಕೃಶನೂ ಅಲ್ಲ, ಸ್ಥೂಲನೂ ಅಲ್ಲ, ಯಾರ ಜೊತೆಗೂ ಇಲ್ಲ, ಒಬ್ಬಂಟಿಯಾಗಿಯೂ ಇಲ್ಲ.

13.32

ಯಥಾ ಸರ್ವಗತಂ(ಮ್) ಸೌಕ್ಷ್ಮ್ಯಾದ್, ಆಕಾಶಂ(ನ್) ನೋಪಲಿಪ್ಯತೇ
ಸರ್ವತ್ರಾವಸ್ಥಿತೋ ದೇಹೇ, ತಥಾತ್ಮಾ ನೋಪಲಿಪ್ಯತೇ ॥32॥

ಯಾವ ರೀತಿ ಎಲ್ಲೆಲ್ಲಿಯೂ ವ್ಯಾಪಿಸಿದ್ದರೂ ಸಹ ಆಕಾಶವು ಸೂಕ್ಷವಾಗಿರುವ ಕಾರಣ ಲಿಪ್ತವಾಗುವುದಿಲ್ಲವೋ ಹಾಗೆಯೇ ಶರೀರದಲ್ಲಿ ಎಲ್ಲಾ ಕಡೆ ಇರುತ್ತಿದ್ದರೂ ಸಹ ಆತ್ಮನು ಗುಣಾತೀತನಾದ ಕಾರಣ ದೇಹದ ಗುಣಗಳಲ್ಲಿ ಲಿಪ್ತನಾಗುವುದಿಲ್ಲ.

ಆಕಾಶದಲ್ಲಿ ಕರಿ ಮೋಡಗಳು, ಬಿಳಿ ಮೋಡಗಳು, ಮಳೆ ಬರಿಸುವ ಮೋಡಗಳು, ಪಟಾಕಿಗಳ ಸಿಡಿತ ಎಲ್ಲಾ ಉಂಟಾದರೂ ಆಕಾಶಕ್ಕೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಅದು ಸೂಕ್ಷ್ಮ ತತ್ತ್ವವಾಗಿರುವ ಕಾರಣ ಅದಕ್ಕೆ ಏನೂ ಅಂಟಿಕೊಳ್ಳುವುದಿಲ್ಲ. ದೇಹದಲ್ಲಿ ಸರ್ವತ್ರ ವ್ಯಾಪ್ತನಾಗಿರುವ ಆತ್ಮನು ನಿರ್ಗುಣನಾದರೂ, ದೇಹದ ಗುಣಗಳಿಂದ ಲಿಪ್ತನಾಗಿರುವುದಿಲ್ಲ.

13.33

ಯಥಾ ಪ್ರಕಾಶಯತ್ಯೇಕಃ(ಖ್), ಕೃತ್ಸ್ನಂ(ಮ್) ಲೋಕಮಿಮಂ(ಮ್) ರವಿಃ
ಕ್ಷೇತ್ರಂ(ಙ್) ಕ್ಷೇತ್ರೀ ತಥಾ ಕೃತ್ಸ್ನಂ(ಮ್), ಪ್ರಕಾಶಯತಿ ಭಾರತ ॥33॥

ಎಲೈ ಅರ್ಜುನ ! ಯಾವ ರೀತಿ ಒಬ್ಬನೇ ಆದ ಸೂರ್ಯನು ಈ ಇಡೀ ಬ್ರಹಾಂಡವನ್ನು ಪ್ರಕಾಶಗೊಳಿಸುತ್ತಾನೆಯೋ ಅದೇ ಪ್ರಕಾರ ಒಂದೇ ಆತ್ಮ(ಕ್ಷೇತ್ರಜ್ಞನು ) ಸಮಸ್ತ ಕ್ಷೇತ್ರ ( ಶರೀರ )ಗಳನ್ನು ಪ್ರಕಾಶಗೊಳಿಸುತ್ತಾನೆ.

ಇಲ್ಲಿ ಶ್ಲೋಕಗಳನ್ನು ಉಪಮೆಗಳ ಮೂಲಕ ವಿವರಿಸಲಾಗಿದೆ. ಇಲ್ಲಿ ಸೂರ್ಯನ ಉಪಮೆಯನ್ನು ಕೊಡಲಾಗಿದೆ. ಹೇಗೆ ಸೂರ್ಯನು ಒಬ್ಬನೇ ಆದರೂ ಅವನು ಇಡೀ ವಿಶ್ವಕ್ಕೆ ಪ್ರಕಾಶವನ್ನು ಕೊಡುತ್ತಾನೆ. ಹಾಗೆಯೇ ಈ ಕ್ಷೇತ್ರ, ಕ್ಷೇತ್ರಜ್ಞ ಎಂಬ ಪ್ರಕಾಶದಿಂದ ಪ್ರಕಾಶಿಸುತ್ತದೆ.

13.34

ಕ್ಷೇತ್ರಕ್ಷೇತ್ರಜ್ಞಯೋರೇವಮ್, ಅಂತರಂ(ಞ್) ಜ್ಞಾನಚಕ್ಷುಷಾ
ಭೂತಪ್ರಕೃತಿಮೋಕ್ಷಂ(ಞ್) ಚ, ಯೇ ವಿದುರ್ಯಾಂತಿ ತೇ ಪರಮ್ ॥34॥

ಈ ರೀತಿ ಕ್ಷೇತ್ರ ಮತ್ತು ಕ್ಷೇತ್ರಜ್ಞರ ಭೇದವನ್ನು ಹಾಗೂ ಕಾರ್ಯಸಹಿತ ಪ್ರಕೃತಿಯಿಂದ ಮುಕ್ತರಾಗುವ ಉಪಾಯವನ್ನು ಯಾರು ಜ್ಞಾನದ ದೃಷ್ಟಿಯಿಂದ ಯಥಾರ್ಥವಾಗಿ ತಿಳಿದುಕೊಳ್ಳುತ್ತಾರೋ ಆ ಮಹಾತ್ಮರು ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾರೆ.

ಯಾರು ಈ ಪ್ರಕಾರವಾಗಿ ಕ್ಷೇತ್ರ ಮತ್ತು ಕ್ಷೇತ್ರಜ್ಞನ ಭೇದವನ್ನು ತಿಳಿಯುತ್ತಾನೋ, ಜ್ಞಾನ ಚಕ್ಷುಗಳಿಂದ ಈ ಸಿದ್ಧಾಂತವನ್ನು ಅರಿಯುತ್ತಾನೋ, ಅವನು ಈ ಪ್ರಕೃತಿಯಿಂದ ಮುಕ್ತಗೊಳ್ಳುತ್ತಾನೆ; ಮೋಕ್ಷ ಹೊಂದುತ್ತಾನೆ. ನಾವು ಹಿಂದಿನ ವಿವೇಚನೆಯಲ್ಲಿ ತಿಳಿದಂತೆ, ಲೋಹದ ಚೆಂಡನ್ನು ಕಾಯಿಸಿದಾಗ ಅದು ಅಗ್ನಿಯ ರೂಪವನ್ನು ಪಡೆಯುತ್ತದೆ. ಅಗ್ನಿ ಚೆಂಡಿನ ಆಕಾರ ಪಡೆಯುತ್ತದೆ. ಜ್ಞಾನಚಕ್ಷುಗಳು ತೆರೆದ ಕಾರಣ ಚಿತ್ ಜಡ ಗ್ರಂಥಿ ಶಿಥಿಲಗೊಂಡು ಬಿಚ್ಚಿಕೊಳ್ಳುತ್ತದೆ.

ಜ್ಞಾನೇಶ್ವರ ಮಹಾರಾಜರು ಹೇಳುವಂತೆ, ರಾಜಹಂಸ ನೀರ-ಕ್ಷೀರ ವಿವೇಕವನ್ನು ಹೊಂದಿರುತ್ತದೆ. ಜ್ಞಾನಿಯು ಹೀಗೆಯೇ ವಿಶೇಷ ಲಕ್ಷಣಗಳನ್ನು ಹೊಂದಿರುತ್ತಾನೆ.

ಇಂದಿನ ವಿವೇಚನೆ ಗುರುಗಳ ಮುಖಾರವಿಂದದಿಂದ ಬಂದ ಕಣಗಳ ಆಯ್ದ ಭಾಗವಾಗಿದೆ. ಇದು ಜ್ಞಾನೇಶ್ವರ ಮಹಾರಾಜರ ಕೃಪೆ ಎಂದು, ಅವರ ಚರಣ ಕಮಲಗಳಿಗೆ ಇಂದಿನ ವಿವೇಚನೆಯನ್ನು ಸಮರ್ಪಿಸಲಾಯಿತು.

ಜ್ಞಾನೇಶ್ವರ ಮಹಾರಾಜಕೀ ಜೈ. ಸದ್ಗುರು ದೇವ್ ಮಹಾರಾಜಕೀ ಜೈ.

ಓಂ ತತ್ಸತ್ ಶ್ರೀ ಕೃಷ್ಣಾರ್ಪಣಮಸ್ತು


ಪ್ರಶ್ನೋತ್ತರಗಳು

೧) ಮಾಧುರಿ ಅಕ್ಕ
ಪ್ರಶ್ನೆ : ನಮ್ಮನ್ನು ನಾವು ಉನ್ನತಿಯ ಕಡೆಗೆ ಹೇಗೆ ಕರೆದುಕೊಂಡು ಹೋಗಬಹುದು?
ಉತ್ತರ : ನಾನು ಬರೀ ದೇಹವಲ್ಲ ಎಂಬ ಭಾವ ಜಾಗೃತಿ ಹೊಂದುವುದರಿಂದ ಚಿತ್ ಜಡ ಗ್ರಂಥಿ ಶಿಥಿಲಗೊಳ್ಳುತ್ತದೆ. ನಾನು ಸಹ ಆ ಚೈತನ್ಯನ ಅಂಶನಾಗಿರುತ್ತೇನೆ. ಅನಾದಿಕಾಲದಿಂದಲೂ ಅವನೊಂದಿಗೆ ಸಂಬಂಧವನ್ನು ಹೊಂದಿರುತ್ತೇನೆ ಎಂಬ ಭಾವನೆಯನ್ನು ಮರೆತು ಕೇವಲ ದೇಹದಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಈ ಅಧ್ಯಾಯದ ಚಿಂತನೆಯಿಂದ ನಾಮಜಪದಿಂದ, ಧ್ಯಾನ, ಧಾರಣೆ, ಯೋಗಾಸನದೊಂದಿಗೆ ಅಷ್ಟಾಂಗ ಯೋಗದ ಪ್ರತಿಕ್ರಿಯೆಯೊಂದಿಗೆ ನಾವು ನಿಧಾನವಾಗಿ ಆ ಗುರಿಯನ್ನು ತಲುಪಬಹುದು. ಮಾನ ಅಪಮಾನದ ಮಾನಸಿಕ ದುಃಖದಿಂದ ಶೀಘ್ರವಾಗಿ ಹೊರ ಬರಬಹುದು. ಶಾರೀರಿಕ ದುಃಖ ಬಹುಶಃ ಅನುಭವಿಸಬೇಕಾಗುತ್ತದೆ.

೨) ಕಿರಣ್ ಅಕ್ಕ
ಪ್ರಶ್ನೆ : ಗುರುವಿನಿಂದ ದೀಕ್ಷೆ ಪಡೆಯದೆ ಓಂ ನಮಃ ಶಿವಾಯ, ಶ್ರೀ ಕೃಷ್ಣಾಯ ನಮಃ ಎಂಬ ಜಪ ಮಾಡಬಹುದೇ?
ಉತ್ತರ : ನಾವು ನೀರಿಗಾಗಿ ಹಲವು ಕಡೆ ಭೂಮಿಯನ್ನು ಅಗೆಯುವ ಬದಲು, ಒಂದೇ ಕಡೆ ಆಳವಾಗಿ ಅಗೆದರೆ ನೀರು ಸಿಗುವ ಸಂಭವ ಅಧಿಕವಾಗಿರುತ್ತದೆ. ಹಾಗೆಯೇ ಗುರುವಾಣಿಯಿಂದ ಬಂದ ಮಂತ್ರ ನಮ್ಮನ್ನು ಆಂತರಿಕವಾಗಿ ಆ ತತ್ತ್ವದೊಂದಿಗೆ ಬೆರೆಸುತ್ತದೆ. ಆದರೆ ವರ್ತಮಾನ ಸ್ಥಿತಿಯಲ್ಲಿ ಗುರು ಸಿಗುವುದು ಸುಲಭದ ಕೆಲಸವಲ್ಲ. ಗುರು ಸಿಗುವವರೆಗೂ ನೀವು ಯಾವುದಾದರೂ ಜಪ ಮಾಡುತ್ತಲೇ ಇರಿ. ಮಂತ್ರ ಎಂದರೆ ಮನನದಿಂದ ಮಾಡುವುದು. ಆಮಂತ್ರಣ ಕೊಟ್ಟು ಭಗವಂತನನ್ನು ಬರಮಾಡಿಕೊಳ್ಳುವುದೇ ಮಂತ್ರ. ಓಂ ಎನ್ನುವುದು ಅವನ ಏಕಾಕ್ಷರಿ ನಾಮ.

 ಇಂದಿನ ವಿವೇಚನಾ ಸತ್ರವು ಸಮಾಪನ ಪ್ರಾರ್ಥನೆ ಹಾಗು ಹನುಮಾನ್ ಚಾಲೀಸಾ ಪಠಣೆಯೊಂದಿಗೆ ಮುಕ್ತಾಯವಾಯಿತು.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು
ಬ್ರಹ್ಮವಿದ್ಯಾಯಾಂ(ಮ್) ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ
ಕ್ಷೇತ್ರಕ್ಷೇತ್ರಜ್ಞವಿಭಾಗಯೋಗೋ ನಾಮ ತ್ರಯೋದಶೋಽಧ್ಯಾಯಃ

ಇತಿ ಶ್ರೀಮದ್ಭಗವದ್ಗೀತಾರೂಪೀ ಉಪನಿಷದ್, ಬ್ರಹ್ಮವಿದ್ಯೆ ಹಾಗೂ ಯೋಗಶಾಸ್ತ್ರ ವಿಷಯವಾಗಿ ಶ್ರೀ ಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ ಎಂಬ ಹದಿಮೂರನೆಯ ಅಧ್ಯಾಯ ಸಂಪೂರ್ಣ.